ಅ.17ರಂದು ಕೋಟೆ ವಿದ್ಯಾಗಣಪತಿ ಮೆರವಣಿಗೆ, ವಿಸರ್ಜನೆ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork |  
Published : Oct 14, 2025, 01:00 AM IST
13ಕೆಎಂಎನ್ ಡಿ28 | Kannada Prabha

ಸಾರಾಂಶ

ನಾಗಮಂಗಲ ಪಟ್ಟಣದಲ್ಲಿ ಅ.17ರಂದು ಐತಿಹಾಸಿಕ ಶ್ರೀಕೋಟೆವಿದ್ಯಾಗಣಪತಿ ಮರವಣಿಗೆ ಮತ್ತು ವಿಸರ್ಜನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆಗಿದೆ. ಯಾರೇ ಆದರೂ ಧಾರ್ಮಿಕ ಭಾವನೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಅಹಿತಕರ ಘಟನೆಗೆ ಆಸ್ಪದ ನೀಡಿದರೆ ನಿರ್ಧಾಕ್ಷೀಣ್ಯವಾಗಿ ಕಠಿಣ ಕ್ರಮಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದಲ್ಲಿ ಅ.17ರಂದು ಐತಿಹಾಸಿಕ ಶ್ರೀಕೋಟೆವಿದ್ಯಾಗಣಪತಿ ಮರವಣಿಗೆ ಮತ್ತು ವಿಸರ್ಜನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆಗಿದೆ. ಯಾರೇ ಆದರೂ ಧಾರ್ಮಿಕ ಭಾವನೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಅಹಿತಕರ ಘಟನೆಗೆ ಆಸ್ಪದ ನೀಡಿದರೆ ನಿರ್ಧಾಕ್ಷೀಣ್ಯವಾಗಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಖಡಕ್ ಎಚ್ಚರಿಕೆ ನೀಡಿದರು.

ಪಟ್ಟಣದ ಡಿವೈಎಸ್‌ಪಿ ಕಚೇರಿಯಲ್ಲಿ ಸೋಮವಾರ ಸಂಜೆ ಹಿಂದೂ ಮುಸ್ಲಿಂ ಸಮುದಾಯದ ಮುಖಂಡರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕಳೆದ ವರ್ಷ ಪಟ್ಟಣದಲ್ಲಿ ಗಣೇಶೋತ್ಸವದ ವೇಳೆ ನಡೆದ ಘಟನೆ ಒಂದು ಕಪ್ಪುಚುಕ್ಕೆಯಾಗಿದೆ. ಅದು ಮರೆಯುವಂತಹ ಘಟನೆಯಾಗಿಲ್ಲ. ಈ ಬಾರಿ ಅಂತಹ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದೆ ಎಂದರು.

ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಸೌಹಾರ್ದತೆ ಹಾಳಾಯಿತು. ಎರಡು ಸಮುದಾಯದ ಮುಖಂಡರು ಹಾಗೂ ಹಿರಿಯರು ಅಹಿತಕರ ಘಟನೆಗಳನ್ನು ಮಾಡುತ್ತಿಲ್ಲ. ಆದರೆ, ಯುವ ಸಮೂಹಕ್ಕೆ, ಮಕ್ಕಳಿಗೆ ಸಾಮರಸ್ಯ ಕಾಪಾಡುವಂತೆ ತಿಳಿ ಹೇಳುವ ಜೊತೆಗೆ ಸೌಹಾರ್ದತೆಯ ಬೀಜವನ್ನು ಬಿತ್ತಬೇಕಿದೆ ಎಂದರು.

ಜಿಲ್ಲೆಯಲ್ಲಿ 2-3 ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಮತೀಯ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ನಡೆದುಕೊಳ್ಳುವಂತೆ ಎರಡೂ ಸಮುದಾಯದ ಮುಖಂಡರಿಗೆ ಸೂಚಿಸಲಾಗಿದೆ. ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಯಾವ ಮಾರ್ಗದಲ್ಲಿ ಸಾಗಲಿದೆ ಎಂಬುದನ್ನು ಆಯೋಜಕರು ಮೆರವಣಿಗೆ ಸಮಯ ಖಚಿತಪಡಿಸಿದ ನಂತರ ಅಂತಿಮಗೊಳಿಸಲಾಗುತ್ತದೆ ಎಂದರು.

ಸಂಘಟಕರು ನೀಡಿರುವ ಮಾಹಿತಿಯಂತೆ ಗಣೇಶ ಮೆರವಣಿಗೆಯಲ್ಲಿ ಹಲವು ಜಾನಪದ ಕಲಾತಂಡಗಳು, 20 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವರೆಂದು ತಿಳಿದುಬಂದಿದೆ. ಒಟ್ಟಾರೆ ಆಯೋಜಕರು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ಕೋಮು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಶಾಂತಿಯುತವಾಗಿ ಗಣೇಶ ಮೆರವಣಿಗೆ ಮತ್ತು ವಿಸರ್ಜನೆ ನಡೆಸಲು ಸಾಕಷ್ಟು ರೀತಿಯಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸಿ ಅಗತ್ಯ ಬಂದೋಬಸ್ತ್ ಮಾಡಲಾಗಿದೆ ಎಂದರು.

ಗಣೇಶ ಮೆರವಣಿಗೆ ಹಿನ್ನೆಲೆಯಲ್ಲಿ ಅ.17ರ ಶುಕ್ರವಾರ ಬೆಳಗ್ಗೆ 6 ರಿಂದ ಶನಿವಾರ ಬೆಳಗ್ಗೆ 6ರ ವರೆಗೆ ಪಟ್ಟಣದ ಸುತ್ತಲಿನ 10 ಕಿ.ಮೀ.ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುವುದು. ಆ ದಿನ ಮದ್ಯ ಮಾರಾಟ ಹಾಗೂ ಸಾಗಾಟಕ್ಕೆ ಅವಕಾಶವಿರುವುದಿಲ್ಲ ಎಂದು ಡಿಸಿ ಡಾ.ಕುಮಾರ್ ತಿಳಿಸಿದರು.

ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮೆರವಣಿಗೆಯು ಬೆಳಗ್ಗೆ 10 ಗಂಟೆಗೆ ಆರಂಭಗೊಂಡು ರಾತ್ರಿ 10 ಗಂಟೆವರೆಗೂ ನಡೆಯಲಿದೆ. ಈ ಬಾರಿ ಪಟ್ಟಣದ ಟಿ.ಬಿ. ಬಡಾವಣೆಯ ಬಿಜಿಎಸ್ ವೃತ್ತದವರೆಗೆ ಹೋಗಿ ನಂತರ ಮಂಡ್ಯ ಸರ್ಕಲ್‌ಗೆ ಬರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಳೆದ 2023ರಲ್ಲಿ ಕೋಟೆ ವಿದ್ಯಾಗಣಪತಿ ಮೆರವಣಿಗೆ ಸಂದರ್ಭ ಸಣ್ಣಪುಟ್ಟ ವಾಗ್ವಾದ ನಡೆದಿತ್ತು. ಕಳೆದ ವರ್ಷ ಬದರಿಕೊಪ್ಪಲು ಗಣೇಶೋತ್ಸವದಲ್ಲಿ ಅದು ದೊಡ್ಡಮಟ್ಟಕ್ಕೆ ಹೋಗಿದೆ. ಆದ್ದರಿಂದ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಲ್ಲಾ ಕಡೆಗಳಲ್ಲಿ 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮಸೀದಿ ದರ್ಗಾಗಳ ಬಳಿ ಪೊಲೀಸ್ ಭದ್ರತೆ ಹಾಕಲಾಗುವುದು. ಮಸೀದಿ ರಕ್ಷಣೆಗೆ ನಿಂತಿದ್ದೀವೆ ಎಂದು ಮುಸ್ಲಿಂ ಸಮುದಾಯದವರು ಗುಂಪು ಕಟ್ಟಿಕೊಂಡು ನಿಲ್ಲುವ ಅಗತ್ಯವಿಲ್ಲ ಎಂದರು.

ಸುಪ್ರಿಂ ಕೋರ್ಟ್ ನಿಯಮದಂತೆ ಡಿಜೆ ಬಳಕೆಗೆ ಅವಕಾಶ ನೀಡಲಾಗುವುದು. ನಂತರದ ದಿನದಲ್ಲಿಯೇ ಬೆಳ್ಳೂರಿನಲ್ಲಿಯೂ ಗಣೇಶ ವಿಸರ್ಜನೆ ಇರಲಿದ್ದು ಅದಕ್ಕೂ ಅಗತ್ಯ ಕ್ರಮವಹಿಸಲಾಗಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಭಾವನೆಗಳಿಗೆ ಧಕ್ಕೆ ತರುವ ಮತ್ತು ಪ್ರಚೋದನೆ ನೀಡುವವರಂತಹ ಪೋಸ್ಟ್‌ಗಳು ಅಥವಾ ವಿಡಿಯೋಗಳನ್ನು ಹರಿಬಿಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಸೋಶಿಯಲ್ ಮೀಡಿಯಾಗಳ ಚಲನವಲನ ಪರಿಶೀಲಿಸಲು ಒಂದು ತಂಡ ರಚಿಸಲಾಗಿದೆ. ಯಾರೇ ಪ್ರಚೋದನಕಾರಿ ವಿಡಿಯೋ ಅಥವಾ ಪೋಸ್ಟ್‌ಗಳನ್ನು ಹಾಕಿದರೆ ಅಂತವರ ವಿರುದ್ಧ ಕಾನೂನು ಕ್ರಮಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗಣೇಶೋತ್ಸವದ ಬಂದೋಬಸ್ತ್‌ಗಾಗಿ ಒಬ್ಬರು ಎಸ್ಪಿ, ಇಬ್ಬರು ಎಎಸ್‌ಪಿ, 6 ಮಂದಿ ಡಿವೈಎಸ್‌ಪಿ, 25ಮಂದಿ ಸಿಪಿಐ, 552 ಕ್ಕೂ ಹೆಚ್ಚು ಪೊಲೀಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ, 5 ಕೆಎಸ್‌ಆರ್‌ಪಿ ತುಕಡಿ, 10 ಡಿಆರ್ ವಾಹನ, 2 ಡ್ರೋನ್ ಕ್ಯಾಮೆರಾ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಪಟ್ಟಣ ವ್ಯಾಪ್ತಿಯಲ್ಲಿ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗಿರುವುದರಿಂದ ಮೈಸೂರು ಮತ್ತು ಬೆಳ್ಳೂರು ಕಡೆಗೆ ವಾಹನಗಳು ಸಂಚರಿಸಲು ಒಂದೇ ಮುಖ್ಯ ರಸ್ತೆಯಿದೆ. ಗಣೇಶ ಮೆರವಣಿಗೆ ಮಾರ್ಗಕ್ಕೆ ತಕ್ಕಂತೆ ಮಾರ್ಗ ಬದಲಾವಣೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ಡಿವೈಎಸ್‌ಪಿ ಬಿ.ಚಲುವರಾಜು, ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್, ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ರಾಜೇಂದ್ರ ಸೇರಿದಂತೆ ಕೋಟೆವಿದ್ಯಾ ಗಣಪತಿ ಸಮಿತಿಯ ಮುಖ್ಯಸ್ಥರು ಹಾಗೂ ಕೆಲ ಮುಸ್ಲಿಂ ಮುಖಂಡರು ಇದ್ದರು.

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ