ಭದ್ರಾ ಹುಲಿ ಸಂರಕ್ಷಿತಾರಣ್ಯದತ್ತ ಕೆಪಿಟಿಸಿಎಲ್ ಚಿತ್ತ

KannadaprabhaNewsNetwork |  
Published : Jul 12, 2026, 02:30 AM IST
ಭದ್ರಾ ಹುಲಿ ಸಂರಕ್ಷಿತಾರಣ್ಯ | Kannada Prabha

ಸಾರಾಂಶ

ಇಂಧನ ಇಲಾಖೆಯು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಜತೆಗೆ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳತ್ತಲೂ ಮುಂದಾಗಿದೆ. ತನ್ನ ಸಿಎಸ್‌ಆರ್‌ ಅನುದಾನದ ಮೂಲಕ ರಾಜ್ಯದ ಅರಣ್ಯ ಸಂಪತ್ತಿನ ರಕ್ಷಣೆಗೆ ಕೈಜೋಡಿಸಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಇಂಧನ ಇಲಾಖೆಯು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಜತೆಗೆ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳತ್ತಲೂ ಮುಂದಾಗಿದೆ. ತನ್ನ ಸಿಎಸ್‌ಆರ್‌ ಅನುದಾನದ ಮೂಲಕ ರಾಜ್ಯದ ಅರಣ್ಯ ಸಂಪತ್ತಿನ ರಕ್ಷಣೆಗೆ ಕೈಜೋಡಿಸಿದೆ.

ಭದ್ರಾ ಹುಲಿ ಸಂರಕ್ಷಿತಾರಣ್ಯಕ್ಕೆ ನಿಗಮವು 2023-24 ಮತ್ತು 2025-26 ನೇ ಆರ್ಥಿಕ ವರ್ಷದಲ್ಲಿ ಕಳ್ಳಬೇಟೆಗಳಿಂದ ವನ್ಯ ಸಂಪತ್ತು ರಕ್ಷಿಸುವಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಕಟ್ಟಡ-ಅಗತ್ಯ ಉಪಕರಣಗಳನ್ನು ಒದಗಿಸಿದ್ದು, 21 ಶಿಬಿರಗಳನ್ನು ತಲಾ 3 ಲಕ್ಷ ರು. ವೆಚ್ಚದಲ್ಲಿ ಬಲಪಡಿಸಲಾಗಿದೆ.

ಅಲ್ಲದೆ, ಭದ್ರಾ ಹುಲಿ ಸಂರಕ್ಷಿತಾರಣ್ಯವನ್ನು ದಿಗಂತದಿಂದ ಕಣ್ಗಾವಲಿಡಲು, ಬೆಂಕಿಯಿಂದ ರಕ್ಷಣೆ ಮಾಡಲು ಮೂರು ಥರ್ಮಲ್ ಡ್ರೋನ್ ಒದಗಿಸಲಾಗಿದೆ. ವನ್ಯಜೀವಿಗಳ ಚಲನವಲನ ಹಾಗೂ ಹುಲಿ ಗಣತಿಗೆ ನೆರವಾಗಲು 100 ಕ್ಯಾಮೆರಾ ಟ್ರ್ಯಾಪ್‌ಗಳನ್ನು ನಿಗಮ ನೀಡಿದೆ. ಸಿಬ್ಬಂದಿ ಗಸ್ತು ತಿರುಗಲು ಯಾಂತ್ರಿಕೃತ ದೋಣಿ ಮತ್ತು ಮುತ್ತೊಡಿಯಲ್ಲಿರುವ ಸೀಗೇಖಾನ್ ವಿಶ್ರಾಂತಿ ಗೃಹ ಪುನರುಜ್ಜೀವನ, ಪರಿಸರ ಪ್ರವಾಸೋದ್ಯಮಕ್ಕೆ ಅನುಕೂಲವಾಗಲು ಒಂದು ಮಿನಿ ಬಸ್‌ ಹಾಗೂ ಮುತ್ತೊಡಿ-ಮಲ್ಲಂದೂರು ರಸ್ತೆ ದುರಸ್ತಿಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ 2.58 ಕೋಟಿ ರು.ಗಳ ನೆರವು ನೀಡಿದೆ.

ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಅವರ ಉಸ್ತುವಾರಿಯ ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತಾರಣ್ಯಕ್ಕೆ ವಿದ್ಯುತ್ ಪ್ರಸರಣ ನಿಗಮ ತನ್ನ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಮೂಲಕ ನಿಗಮದ ಲಾಭಾಂಶದಲ್ಲಿ ನಾಡಿನ ವನ್ಯ ಸಂಪತ್ತು ರಕ್ಷಣೆಗೆ ಒತ್ತು ನೀಡಿದೆ.

ಜಿಲ್ಲೆಯ ಶಾಲೆಗಳಿಗೆ ಹೊಸಬೆಳಕು:

ತಾಂತ್ರಿಕವಾಗಿ ಅಭಿವೃದ್ಧಿಗೆ ಹಾದಿ ನಿರ್ಮಿಸುತ್ತಿರುವ ನಿಗಮದ ಸಾಮಾಜಿಕ ಬದ್ಧತೆ ಶಾಲೆಗಳ ಬಲವರ್ಧನೆ ಕಡೆಯೂ ಹರಿದಿದೆ. ಶಾಲೆ-ಕಾಲೇಜುಗಳಿಗೆ ಮುಖ್ಯವಾಗಿ ದೃಷ್ಟಿಚೇತನ ಮಕ್ಕಳ ಶಾಲೆಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ, ಆರೋಗ್ಯ ಕ್ಷೇತ್ರ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಕ್ರೀಡೆಗಳನ್ನು ಉತ್ತೇಜಿಸುವಲ್ಲಿ ರಾಜ್ಯದಲ್ಲೇ ಮಾದರಿಯಾಗಿದೆ.

ನಿಗಮವು 2023-24 ರಿಂದ 2025-26 ನೇ ಸಾಲುಗಳಲ್ಲಿ ಚಿಕ್ಕಮಗಳೂರಿನ ಸಿರಿವಾಸೆಯ ಸರ್ಕಾರಿ ವಿವೇಕಾನಂದ ಪ್ರಾಥಮಿಕ ಶಾಲೆಗೆ ಇಂಟರ್‌ ಆ್ಯಕ್ಟಿವ್ ಪ್ಯಾನಲ್ ಟಿವಿ, ಕಂಪ್ಯೂಟರ್ ಉಪಕರಣಗಳನ್ನು ಹಾಗೂ ಒಂದರಿಂದ ಹತ್ತನೇ ತರಗತಿವರೆಗೂ ಶಿಕ್ಷಣಕ್ಕೆ ನೆರವಾಗಲು ಸಂಯೋಜಿತ ಪಠ್ಯವನ್ನು ಒದಗಿಸಲಾಗಿದೆ.

ಕೆಂಪನಹಳ್ಳಿಯ ಆಶಾಕಿರಣ ದೃಷ್ಟಿ ಚೇತನ ಶಾಲೆಗೆ 16 ಲಕ್ಷ ರು. ವೆಚ್ಚದಲ್ಲಿ ಉಪಕರಣ ಒದಗಿಸಲಾಗಿದೆ. ಬಾಳೆಹೊನ್ನೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಸ್ಮಾರ್ಟ್ ಕ್ಲಾಸ್, ಕಡೂರಿನ ನಿವೇದಿತಾ ಶ್ರವಣದೋಷ ಮಕ್ಕಳ ಶಾಲೆಗೆ ಪೂರಕ ನೆರವಿಗೆ 20 ಲಕ್ಷ ರು. ಒದಗಿಸಲಾಗಿದೆ. ಅತ್ತಿಗುಂಡಿ ಗ್ರಾಮದ ಸರ್ಕಾರಿ ಶಾಲೆ ದುರಸ್ತಿಗೆ 8.5 ಲಕ್ಷ ರು. ನೀಡಲಾಗಿದೆ.

ಆರೋಗ್ಯ ಜಾಗೃತಿ ಮೂಡಿಸಲು ನಿಗಮವು 24 ಲಕ್ಷ ರು. ಒದಗಿಸಿದೆ. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ 10 ಲಕ್ಷ ರು. ಅನುದಾನವನ್ನು ನೀಡಿದೆ. ಈ ಮೂಲಕ ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಸಾರುತ್ತಾ ನಿಗಮದ ಜವಾಬ್ದಾರಿಯನ್ನು ಹೆಚ್ಚಿಸಿದೆ.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ 29.43 ಲಕ್ಷ ರು. ವೆಚ್ಚದಲ್ಲಿ ಆ್ಯಂಬುಲೆನ್ಸ್‌ಗಳನ್ನು ಕೊಡುಗೆಯಾಗಿ ಒದಗಿಸಲಾಗಿದೆ. ಜೀವನ್ ಸಂಧ್ಯಾ ವೃದ್ಧಾಶ್ರಮದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅನುದಾನ ನೀಡಲಾಗಿದೆ. ಆರೋಗ್ಯ ಜಾಗೃತಿ ಕಾರ್ಯಕ್ರಮಗಳಿಗೆ ವಾಹನಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಇಷ್ಟೇ ಅಲ್ಲದೇ ಚಿಕ್ಕಮಗಳೂರಿನ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದ ನಿರ್ಮಾಣಕ್ಕೆ ಎರಡು ಕೋಟಿ ಹಾಗೂ ಜಿಲ್ಲಾ ರೈಫಲ್ಸ್ ಮತ್ತು ಶಾಟ್‌ಗನ್ ಅಸೋಸಿಯೇಷನ್‌ನ ಮೂಲಸೌಕರ್ಯ ಅಭಿವೃದ್ಧಿಗೆ ಒಂದು ಕೋಟಿ ರು. ಒದಗಿಸಿದೆ.

ವ್ಯಯಿಸಿರುವ ಸಿಎಸ್ಆರ್ ಅನುದಾನ

ಅರಣ್ಯ ಸಂರಕ್ಷಣೆಗಾಗಿ 2.58 ಕೋಟಿ ರು. ಮತ್ತು ಹೆಚ್ಚಿನ ಅನುದಾನ ಒದಗಿಸಿದ್ದರೆ, ರಾಷ್ಟ್ರೀಯ ಮನ್ನಣೆ ಪಡೆದ ಕ್ರೀಡಾ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ 2 ಕೋಟಿ ರು. ಶಿಕ್ಷಣಕ್ಕಾಗಿ 1 ಕೋಟಿ ರು.ಗೂ ಹೆಚ್ಚಿನ ಅನುದಾನ ನೀಡಿದೆ. ಆರೋಗ್ಯ ಕ್ಷೇತ್ರಕ್ಕಾಗಿ 54.22 ಲಕ್ಷ ರು.ಗಳನ್ನು ಸಿಎಸ್‌ಆರ್‌ ಅನುದಾನದಡಿ ವಿನಿಯೋಗಿಸಿದೆ. ವಿದ್ಯುತ್ ಪ್ರಸರಣ-ಮೂಲಸೌಕರ್ಯ ವೃದ್ಧಿಗೆ ಶ್ರಮಿಸುತ್ತಿರುವ ಕವಿಪ್ರನಿನಿ ಶಿಕ್ಷಣ, ಆರೋಗ್ಯ, ಸಾಮಾಜಿಕ ವಿಕಾಸಕ್ಕೂ ಛಾಪು ಮೂಡಿಸಿದೆ. ಇಂಧನ ಇಲಾಖೆ ನಾಡಿನ ಜನತೆ ಮತ್ತು ವನ್ಯ ಸಂಪತ್ತಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಕವಿಪ್ರನಿನಿ ತನ್ನ ಸಿಎಸ್‌ಆರ್‌ ಅನುದಾನದ ಮೂಲಕ ರಾಜ್ಯದ ಅರಣ್ಯ ಸಂಪತ್ತಿನ ರಕ್ಷಣೆಗೆ ಕೈಜೋಡಿಸಿದೆ. ಶಿಕ್ಷಣ ಬಲವರ್ಧನೆ, ಆರೋಗ್ಯದ ಅರಿವು ಮೂಡಿಸುವ ಕಾರ್ಯಗಳಿಗೆ ಅನುದಾನ ನೀಡುವ ಮೂಲಕ ಸಾಮಾಜಿಕವಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದೆ.

ಕೆ.ಜೆ.ಜಾರ್ಜ್ ಇಂಧನ, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮೂರು ವರ್ಷಗಳ ನಿವ್ವಳ ಲಾಭಾಂಶದಲ್ಲಿ ಶೇ.2ರಷ್ಟು ಮೊತ್ತವನ್ನು ಸಾಮಾಜಿಕ ಹೊಣೆಗಾರಿಕೆ ನಿಯಮದಡಿಯಲ್ಲಿ ವನ್ಯಜೀವಿ, ಅರಣ್ಯ ಸಂರಕ್ಷಣೆ, ಶಿಕ್ಷಣಕ್ಕೆ ಮೀಸಲಿಡುತ್ತಿದೆ.

ಗೌರವ್ ಗುಪ್ತ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಹಕ್ಕುಗಳ ರಕ್ಷಣೆಗೆ ಸಂಸತ್ತಿನಲ್ಲಿ ಧ್ವನಿಯಾಗಲು ಮನವಿ
ಸಿದ್ದೇಶ್ವರ ಕೈ ಬಲಪಡಿಸಲು ಕಾರ್ಯಕರ್ತರಿಗೆ ಸುನಿಲ ಕರೆ