ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ರಾಜ್ಯ ಕಾಂಗ್ರೆಸ್ ಸರ್ಕಾರ ಉಚಿತ ಕರೆಂಟ್ ನೀಡಲು ಕೆಪಿಟಿಸಿಎಲ್ 48 ಸಾವಿರ ಕೋಟಿ ನಷ್ಟ ಅನುಭವಿಸುವಂತೆ ಮಾಡಿದೆ. ಇದರಿಂದ ರಾಜ್ಯದಲ್ಲಿ ಕೆಪಿಟಿಸಿಎಲ್ ಮುಚ್ಚುವ ಸ್ಥಿತಿಗೆ ಬಂದಿದೆ ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಆರೋಪಿಸಿದರು.ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆ ಆವರಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಜೆಡಿಎಸ್ - ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಇಂಧನ ಸಚಿವನಾಗಿದ್ದ ಸಮಯದಲ್ಲಿ ಕೆಪಿಟಿಸಿಎಲ್ ಲಾಭದಲಿತ್ತು, ರಾಜ್ಯದಲ್ಲಿ ಸುಮಾರು 600 ಸಬ್ ಸ್ಟೇಷನ್ ಗಳು, ಜಿಲ್ಲೆಯಲ್ಲಿ ಸುಮಾರು 60 ಸಬ್ ಸ್ಟೇಷನ್ ಗಳನ್ನು ಮಂಜೂರು ಮಾಡಿದ್ದೆ. ಆದರೆ ಕಾಂಗ್ರೆಸ್ ಸರ್ಕಾರ ಉಚಿತ ಕರೆಂಟ್ ನೀಡಲು ಹೋಗಿ ಕೆಪಿಟಿಸಿಎಲ್ 60 ಸಾವಿರ ಕೋಟಿ ನಷ್ಟ ಅನುಭವಿಸುವಂತೆ ಮಾಡಿದೆ, ನಾನು ಸಚಿವನಾಗಿದ್ದಾಗ ರೈತರಿಂದ 5000 ಕಟ್ಟಿಸಿಕೊಂಡು ಟಿ.ಸಿ. ಕೊಡಲಾಗುತ್ತಿತ್ತು, ಆದರೆ ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರು 3 ಲಕ್ಷ ಖರ್ಚು ಮಾಡಿ ಸಂಪರ್ಕ ಪಡೆಯಬೇಕಾಗಿದೆ, ಇದೊಂದು ರೈತ ವಿರೋಧಿ ಸರ್ಕಾರವಾಗಿದೆ ಎಂದರು.ಜಿಲ್ಲೆಯ ಉಸ್ತುವಾರಿ ಸಚಿವರು ತಮ್ಮ ತವರು ಜಿಲ್ಲೆ ತುಮಕೂರಿಗೆ ನೀರು ಹರಿಸಲು 144 ಸೆಕ್ಷನ್ ಜಾರಿಗೊಳಿಸಿ, ಸುಮಾರು 400 ಪೊಲೀಸರ ಭದ್ರತೆಯಲ್ಲಿ ಜಿಲ್ಲೆಯ ಹೇಮಾವತಿ ನದಿಯಿಂದ 2 ಟಿಎಂಸಿ ನೀರನ್ನು ಬಿಟ್ಟುಕೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಬರಗಾಲವಿದ್ದು ಜಿಲ್ಲೆಯ ಅನೇಕ ತಾಲೂಕುಗಳ ಹಳ್ಳಿಗಳಲ್ಲಿನ ಕೆರೆಗಳು ನೀರಿಲ್ಲದೆ ಬತ್ತಿ ಹೋಗಿವೆ. ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವಂತೆ ಪ್ರತಿಭಟಿಸಿದರೂ ಜಿಲ್ಲೆಯ ಸಚಿವರು ಸ್ಪಂದಿಸಲೇ ಇಲ್ಲ, ಜಿಲ್ಲೆಯಲ್ಲಿ ಇಂತ ಕೆಟ್ಟ ಜಿಲ್ಲಾ ಉಸ್ತುವಾರಿ ಸಚಿವರನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ರೈತರಿಗೆ ಅನ್ಯಾಯ ಮಾಡಿದವರು ಎಂದು ಉಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಾಸನ ಜನರ ಕಷ್ಟದಲ್ಲಿ ಭಾಗಿಯಾಗಿರುವೆ: ಪ್ರಜ್ವಲ್
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಈಗ ಲೋಕಸಭಾ ಚುನಾವಣೆ ಬಂದಿದೆ ಎಂದು ಕಾಂಗ್ರೆಸ್ ಮುಖಂಡರು ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ತಮ್ಮ 5 ವರ್ಷಗಳ ಅವಧಿಯಲ್ಲಿ ಲೋಕಸಭಾ ವ್ಯಾಪ್ತಿಯ ಎಲ್ಲಾ ತಾಲೂಕು ಕೇಂದ್ರ, ಹೋಬಳಿ ಕೇಂದ್ರ ಸೇರಿ ಸಾವಿರಾರು ಹಳ್ಳಿಗಳಿಗೆ ಭೇಟಿ ನೀಡಿ ಜನರಿಂದ ಕುಂದು ಕೊರತೆ ಆಲಿಸಿದ್ದೇನೆ. ನುಗ್ಗೇಹಳ್ಳಿ ಹೋಬಳಿ ಕೇಂದ್ರಕ್ಕೂ ಸುಮಾರು 4 ಬಾರಿ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಕಳೆದ 5 ವರ್ಷಗಳಲ್ಲಿ ಸಾವಿರಾರು ಕೋಟಿ ಅನುದಾನ ತರಲಾಗಿದ್ದು, ಮುಂಬರುವ ದಿನಗಳಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರ ಪಡೆದು ಹಾಸನ ಜಿಲ್ಲಾ ಕೇಂದ್ರದಲ್ಲಿ ಸುಮಾರು 1 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸಲಾಗುತ್ತದೆ ಎಂದರು.ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಎನ್ಡಿಎ ಅಭ್ಯರ್ಥಿಗಳು ಜಯಗಳಿಸಲಿದ್ದು, ಜಿಲ್ಲೆಯಲ್ಲಿ ಹಾಲಿ ಸಂಸದ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣರನ್ನು ಅಧಿಕ ಮತಗಳಿಂದ ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಪ್ರಚಾರ ಸಭೆಗೆ ಆಗಮಿಸಿದ್ದ ಮಾಜಿ ಸಚಿವ ಎಚ್. ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಸಿಎನ್ ಬಾಲಕೃಷ್ಣ ಅವರನ್ನು ಕಾರ್ಯಕರ್ತರು ಬಾರಿ ಗಾತ್ರದ ಹೂವಿನ ಹಾರ ಹಾಕುವ ಮೂಲಕ ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಪರಮ ದೇವರಾಜೇಗೌಡ, ಬಿಜೆಪಿ ಮುಖಂಡ ಅಣತಿ ಅನಂದ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಹದೇವಮ್ಮ ಶಂಕರ್, ಮಾಜಿ ಉಪಾಧ್ಯಕ್ಷ ಎಚ್. ಎಮ್. ನಟರಾಜ್, ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಜಗದೀಶ್, ಉಪಾಧ್ಯಕ್ಷೆ ದ್ರಾಕ್ಷಾಯಿಣಿ ಎಲ್ಲಪ್ಪ, ಮುಖಂಡರಾದ ಬಿ. ಎಚ್. ಶಿವಣ್ಣ, ತೋಟಿ ನಾಗರಾಜ್ , ದೊರೆಸ್ವಾಮಿ, ಓಬಳಾಪುರ ಬಸವರಾಜ್, ಚಂದ್ರಪ್ಪ, ಜಯಲಿಂಗೇಗೌಡ, ಕುಳೇ ಗೌಡ , ಕೆಂಪೇಗೌಡ, ದುಗ್ಗೇನಹಳ್ಳಿ ವೀರೇಶ್, ಹುಲಿಕೆರೆ ಸಂಪತ್ ಕುಮಾರ್, ಮಹಮದ್ ಜಾವಿದ್, ವೀರಶೈವ ಮುಖಂಡ ಎನ್ಎಸ್ ಗಿರೀಶ್, ಪುಟ್ಟಸ್ವಾಮಿ, ಜೆ.ಸಿ. ಕುಮಾರ್, ಉದ್ಯಮಿ ಚಿಪ್ಪಿನ ಚಂದ್ರು, ಜಗದೀಶ್, ಲಕ್ಷ್ಮೀದೇವಿ ಜಯರಾಮ್, ಯುವ ಮುಖಂಡ ಅವೇರಹಳ್ಳಿ ಅನಿಲ್, ರಂಗಸ್ವಾಮಿ, ಪಟೇಲ್ ಕುಮಾರ್, ಸಾಧಿಕ್ ಪಾಶ ( ಅಕು ) ಶಿವಕುಮಾರ್, ಮಂಜುನಾಥ್, ನಟರಾಜ್, ಹೊನ್ನೇಗೌಡ, ಸೇರಿದಂತೆ ಅನೇಕರು ಹಾಜರಿದ್ದರು.