ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಸ್ತೆ ಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟಿನ ಸರಕುಗಳನ್ನು ಸ್ವಲ್ಪ ಹಿಂದಕ್ಕೆ ಇಟ್ಟುಕೊಂಡು ಪಟ್ಟಣದಲ್ಲಿ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರ, ಪಾದಚಾರಿಗಳು ಫುಟ್ ಪಾತ್ ನಲ್ಲಿ ಹೋಗಲು ಅವಕಾಶ ಮಾಡಿಕೊಡುವಂತೆ ಪಟ್ಟಣದ ಠಾಣೆ ಪಿಎಸ್ಐ ನವೀನ್ ಸೋಮವಾರ ತಿಳಿಸಿದರು.ಪಟ್ಟಣದಲ್ಲಿ ಫುಟ್ ಪಾತ್ ಅತಿಕ್ರಮಣ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆ ಬಗ್ಗೆ ಕನ್ನಡ ಪ್ರಭ ಸೋಮವಾರ ವಿಶೇಷ ವರದಿ ಮಾಡಿತ್ತು. ಪತ್ರಿಕಾ ವರದಿ ಬೆನ್ನಲ್ಲೆ ಎಚ್ಚೆತ್ತ ಪಟ್ಟಣ ಪೊಲೀಸರು ಒತ್ತುವರಿ ಮಾಡಿಕೊಂಡ ವ್ಯಾಪಾರಿಗಳಿಗೆ ಪುಟ್ಪಾತ್ ಮಾಡಿದರೆ ಅದರಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದರು.
ಪಟ್ಟಣದ ಮುಖ್ಯರಸ್ತೆಯಲ್ಲಿ ನೂರಾರು ಬೀದಿಬದಿ ವ್ಯಾಪಾರಿಗಳು ತಮ್ಮ ಜೀವನ ನಿರ್ವಹಣೆಗಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ಆದರೆ, ದಿನೇದಿನೇ ವ್ಯಾಪಾರಿಗಳು ರಸ್ತೆ ಅಂಚಿಗೆ ತಮ್ಮ ಸರಕುಗಳನ್ನು ಹಾಗೂ ತಳ್ಳುಗಾಡಿಗಳನ್ನು ನಿಲ್ಲಿಸಿಕೊಂಡು ರಸ್ತೆಯಲ್ಲಿ ಲಾರಿ, ಬಸ್ಸು ಸೇರಿದಂತೆ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ ಹಲವು ಅಪಘಾತಗಳು ಸಂಭವಿಸುತ್ತಿವೆ.ಪಟ್ಟಣ ವ್ಯಾಪ್ತಿಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಬೀದಿಬದಿಯ ವ್ಯಾಪಾರಿಗಳು ತಮ್ಮ ವ್ಯಾಪಾರದ ಸಾಮಗ್ರಿಗಳನ್ನು ರಸ್ತೆಯ ಫುಟ್ಪಾತ್ ನಿಂದ ಸ್ವಲ್ಪ ದೂರ ಇಟ್ಟುಕೊಂಡು ವ್ಯಾಪಾರ ನಡೆಸಬೇಕು. ಜನ ಸಂಚಾರಕ್ಕೆ ಅಡ್ಡಿಯಾದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
ದ್ವಿಚ ಕ್ರವಾಹನ ಸವಾರರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವುದನ್ನು ಬಿಟ್ಟು ರಸ್ತೆಯಿಂದ ಸ್ವಲ್ಪ ದೂರ ತಮ್ಮ ವಾಹನಗಳನ್ನು ನಿಲುಗಡೆ ಮಾಡಬೇಕು. ಹಳೆಯ ವಿಜಯಬ್ಯಾಂಕ್ ಕಟ್ಟಡದ ಬಳಿ ವಾಹನ ಸವಾರರಿಗೆ ಹೆಚ್ಚಿನ ಪ್ರಮಾಣದ ತೊಂದರೆಯಾಗುತ್ತಿದೆ. ಸಾರ್ವಜನಿಕರು ಸುಗಮಸಂಚಾರದ ದೃಷ್ಟಿಯಿಂದ ಪೊಲಿಸರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಈ ವೇಳೆ ಪಿಎಸ್ಐ ಹರೀಶ್, ಎ.ಎಸ್.ಐ ಬಸಪ್ಪ, ಆಲೇಗೌಡ, ಶಿವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.