ಬೆಂಗಳೂರು : ಬೆಂಗಳೂರು ನಗರ ಭಾಗದಲ್ಲಿ ಭೂ ಸುರಕ್ಷಾ ಯೋಜನೆಯಡಿ ಆಸ್ತಿ ದಾಖಲೆಗಳನ್ನು ಡಿಜಟಲೀಕರಣಕ್ಕೆ ನಿರ್ಲಕ್ಷ್ಯತೋರಿದ ಯಲಹಂಕ ಹಾಗೂ ಆನೇಕಲ್ ತಹಸೀಲ್ದಾರ್ಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ‘ನಿಮಗೆ ಗತಿ ಕಾಣಿಸಬೇಕಾ’ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಇಬ್ಬರೂ ತಹಸೀಲ್ದಾರ್ಗಳಿಗೂ ನೋಟಿಸ್ ಜಾರಿ ಮಾಡಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಭೂ ಸುರಕ್ಷಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬೆಂಗಳೂರು ನಗರ-ಗ್ರಾಮೀಣ ಜಿಲ್ಲೆಯ ತಹಶೀಲ್ದಾರರು ಕಚೇರಿಗೆ ಹೋಗಲ್ಲ, ನಿಮಗೆ ಬೇರೆಲ್ಲಿ ಕಚೇರಿ ಇದೆ ಎಂಬುದೇ ನಮಗೆ ಗೊತ್ತಿಲ್ಲ. ಇಲ್ಲಿವರೆಗೆ ನಾವೂ ಸಹಿಸಿಕೊಂಡಿದ್ದೇನೆ. ಇನ್ನೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳು ದಾರಿಗೆ ಬರದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಯಲಹಂಕ ತಹಸೀಲ್ದಾರ್ ಕಚೇರಿಯಲ್ಲಿ ಡಿಜಿಟಲೀಕರಣಕ್ಕೆ ಹಿನ್ನಡೆಡೆ ಉಂಟಾಗಿರುವ ಬಗ್ಗೆ ನೆಟ್ವರ್ಕ್ ಸಮಸ್ಯೆ, ಬಯೋಮೆಟ್ರಿಕ್ ಸಾಧನಗಳ ಕೊರತೆ ನೆಪ ನೀಡಿದ ತಹಸೀಲ್ದಾರ್ ಅವರಿಗೆ, ‘ನೆಪಗಳನ್ನು ಹೇಳಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಬೆಂಗಳೂರಿನಲ್ಲಿರುವ ನಿಮಗೆ ಮಾತ್ರ ನೆಟ್ವರ್ಕ್ ಸಮಸ್ಯೆ ಇದೆ. ಕಚೇರಿಯಲ್ಲಿರಲು ಹಾಗೂ ಕೆಲಸ ಮಾಡಲು ನಿಮಗೆ ಏನು ರೋಗ ಅಂತಾದ್ರೂ ಹೇಳಿ’ ಎಂದು ತರಾಟೆಗೆ ತೆಗೆದುಕೊಂಡರು.
ಆನೇಕಲ್ ತಹಸೀಲ್ದಾರ್ ಶಶಿಧರ್ ಮಾಡ್ಯಾಳ್ ಅವರಿಗೆ ತರಾಟೆಗೆ ತೆಗೆದುಕೊಂಡ ಸಚಿವರು, ನನ್ನ ಕಿವಿಯಲ್ಲಿ ದೊಡ್ಡ ದಾಸವಾಳ ಹೂ ಕಾಣುತ್ತಿದೆಯೇ? ನೀವು ಇದನ್ನು
ಉದ್ದೇಶಪೂರ್ಕವಾಗಿ ನಿರ್ಲಕ್ಷಿಸಿದ್ದೀರಿ. ನೀವು ಸರ್ಕಾರದ ಕೆಳಗಡೆ ಇದ್ದೀರೋ ಅಥವಾ ಸರ್ಕಾರವೇ ನಿಮ್ಮ ಕೆಳಗಡೆ ಇದೆಯೋ? ಎಂದು ಕಿಡಿ ಕಾರಿದರು.
ಅಮಾನತಿಗಿಂತ ಕಠಿಣ
ಕ್ರಮ: ಕೃಷ್ಣಬೈರೇಗೌಡ
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಕೂಡ ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಕೃಷ್ಣ ಬೈರೇಗೌಡ ಅವರು, ಎರಡೂ ಜಿಲ್ಲೆಗಳ (ಬೆಂಗಳೂರು ನಗರ ಮತ್ತು ಗ್ರಾಮಾಂತರ) ಅಧಿಕಾರಿಗಳಿಗೆ ತಿಂಗಳ ಗಡುವು ನೀಡಲಾಗಿದೆ. ಯೋಜನೆ ಪ್ರಗತಿ ಕುಂಠಿತಗೊಳ್ಳಲು ಕಾರಣವಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಕೂಡ ನೀಡಲಾಗಿದೆ. ಇನ್ನು ಬಹುತೇಕ ಅಧಿಕಾರಿಗಳು ಕಚೇರಿಗಳಲ್ಲಿ ಇರುವುದೇ ಇಲ್ಲ. ಈ ಸಂಬಂಧ ಸಾಮಾನ್ಯ ಜನರಿಂದ ನನಗೆ ಸಾಕಷ್ಟು ದೂರುಗಳು ಬಂದಿವೆ. ‘ಪ್ರತಿ ಕಚೇರಿಗಳಲ್ಲಿ ಚಲನವಲನ ರಿಜಿಸ್ಟರ್ ಪುಸ್ತಕ ಇರುತ್ತದೆ. ಅಲ್ಲಿ ಯಾವುದೂ ಎಂಟ್ರಿ ಇಲ್ಲದೆ, ಕಚೇರಿ ಅಂತ ಬಿಟ್ಟು ಹೋಗುವಂತಿಲ್ಲ. ಒಂದು ವೇಳೆ ಅದು ಕಂಡುಬಂದರೆ ಅಮಾನತು ಅಥವಾ ಅದಕ್ಕಿಂತ ಕಠಿಣವಾದ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದರು.