ಮಲ್ಲಿಕಾರ್ಜುನ ಪಟ್ಟಣಶೆಟ್ಟಿಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಬತ್ತಿದ ಐತಿಹಾಸಿಕ ಕೆರೆಗಳಿಗೆ ಭರ್ತಿ ಭಾಗ್ಯ ಯಾವಾಗ? ಎಂಬ ಶೀರ್ಷಿಕೆ ಅಡಿ ಕನ್ನಡ ಪ್ರಭ ಪತ್ರಿಕೆ ವಿಶೇಷ ವರದಿ ಪ್ರಕಟಿಸಿ ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ವರದಿಗೆ ಫಲಶೃತಿ ಸಿಕ್ಕಿದ್ದು, ಸಚಿವರು, ಶಾಸಕರು ಅಧಿಕಾರಿಗಳ ಜೊತೆ ಸಭೆ ಮಾಡಿ ಯಾವ ರೀತಿ ನೀರು ಕೊಡಬಹುದು ಎಂದು ಯೋಜನೆಗೆ ಮುಂದಾಗಿದ್ದರು. ಬಳಿಕ ಸ್ಥಳೀಕ ಮುಖಂಡ ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ ನೇತೃತ್ವದಲ್ಲಿ ಗ್ರಾಮಸ್ಥರು ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಎಲ್ಲರ ಒತ್ತಾಯದ ಮೇರೆಗೆ ಇದೀಗ ತಾತ್ಕಾಲಿಕ ಬೂದಿಹಾಳ ಪೀರಾಪುರ ಕಾಲುವೆಯ ಸ್ಕ್ಯಾವರ್ ಕವಾಟ(scaver valve) ಮೂಲಕ ಐತಿಹಾಸಿಕ ಹುಣಶ್ಯಾಳ ಕೆರೆಗೆ ತಾತ್ಕಾಲಿಕವಾಗಿ ನೀರು ಹರಿಸಲಾಗುತ್ತಿದ್ದು, ಬರಗಾಲದಲ್ಲಿ ನೀರಿನ ಸಮಸ್ಯೆ ಕಾರಣ ಬತ್ತಿ ಹೋಗಿದ್ದ ಹುಣಶ್ಯಾಳ ಕೆರೆಗೆ ಕೃಷ್ಣೆ ಹರಿದು ಬಂದಿದ್ದಾಳೆ. ಇದರಿಂದ ಈ ಭಾಗದ ಸುತ್ತಮುತ್ತಲಿನ ಗ್ರಾಮಗಳ ಜನರು ಸಂತಸಗೊಂಡಿದ್ದಾರೆ. ಸುಮಾರು 15 ವರ್ಷಗಳಿಂದ ಕಾಲುವೆಗಳ ಮೂಲಕ ನೀರು ಹರಿಸುತ್ತೇವೆ ಎಂಬ ಜನಪ್ರತಿನಿಧಿಗಳ ಭರವಸೆಗಳಿಂದ ಜನರು ಜಿಗುಪ್ಸೆಗೊಂಡಿದ್ದರು. ಇದೀಗ ನೀರು ಬಂದಿದ್ದರಿಂದ ಜನರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.ಬತ್ತಿ ಹೋಗಿದ್ದ ಐತಿಹಾಸಿಕ ಹುಣಶ್ಯಾಳ ಕೆರೆ
1968ರಲ್ಲಿ ಹುಣಶ್ಯಾಳ ಹಾಗೂ ಕುದುರಗುಂಡ ಕೆರೆಗಳ ನಿರ್ಮಾಣ ಮಾಡಲಾಗಿದೆ. ಹಲವಾರು ಜನರ ತ್ಯಾಗ ಪರಿಶ್ರಮದಿಂದ ಈ ಭಾಗದ ಜನರಿಗೆ ನೀರಾವರಿ ಸೌಲಭ್ಯ ಒದಗಿಸುವಲ್ಲಿ ಸರ್ಕಾರದ ಜೊತೆ ಹಲವಾರು ಮುಖಂಡರ ಕೊಡುಗೆ ಅಪಾರ. ಚಿಕ್ಕ ಚಿಕ್ಕ ಜಮೀನಗಳಿದ್ದರು ತಮ್ಮ ಜಮೀನುಗಳಲ್ಲಿ ತರಕಾರಿ ಜೊತೆ ತೋಟಗಾರಿಕಾ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಈ ಭಾಗದ ತಾಜಾ ತರಕಾರಿ ಹಣ್ಣು ಹಂಪಲುಗಳು ರಾಜ್ಯ ಅಂತರ ರಾಜ್ಯದ ಮಾರುಕಟ್ಟೆಗಳಲ್ಲಿ ಪ್ರಸಿದ್ಧಿ ಪಡೆದಿದೆ. ಆದರೆ,15 ವರ್ಷಗಳಿಂದ ಕೆರೆ ಕಾಲುವೆಗಳು ಬತ್ತಿ ಹೋಗಿದ್ದವು. ಬಾವಿಗಳು, ಬೋರ್ವೆಲ್ಗಳು ಬಂದ್ ಆಗಿ ರೈತರು ನೀರಿಲ್ಲದೆ ಕಂಗಾಲಾಗಿದ್ದಾರೆ. ನೀರಾವರಿ ಸಚಿವರಾಗಿದ್ದಾ ಎಂ.ಬಿ.ಪಾಟೀಲರು ಕೆರೆ ತುಂಬಲು ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮೂಲಕ ಸುಮಾರು ₹ 5 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸುವ ಭರವಸೆ ಕೊಟ್ಟಿದ್ದರು. ನಂತರ ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರ ಮೊದಲ ಬೇಡಿಕೆ ಕೆರೆ ತುಂಬುವುದು ಆಗಿತ್ತು. ಎಲ್ಲಾ ನಾಯಕರು, ಸರ್ಕಾರ ಹಾಗೂ ಅಧಿಕಾರಿಗಳು ಮಾತುಕೊಟ್ಟು ಮರೆತುಬಿಟ್ಟಿದ್ದಾರೆ ಎಂಬುದು ಈ ಭಾಗದ ರೈತರ ಬೇಸರಕ್ಕೆ ಕಾರಣವಾಗಿತ್ತು. ಕನ್ನಡಪ್ರಭ ಜವಾಬ್ದಾರಿಯುತ ಪತ್ರಿಕೆಯಾಗಿ ಗ್ರಾಮಸ್ಥರ ಸಮಸ್ಯೆಯನ್ನು ವಿಶೇಷ ವರದಿ ಮಾಡುವ ಮೂಲಕ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಿತ್ತು. ಆ ವರದಿಗೆ ಇದೀಗ ಫಲಶೃತಿ ಸಿಕ್ಕಿದೆ.ಕೋಟ್ಬೂದಿಹಾಳ ಪೀರಾಪುರ ಕಾಲುವೆಯ ನೀರನ್ನು ರೈತರ ಹೊಲಗಳಿಗೆ ಹರಿಸಲು ಟ್ರೈಯಲ್ ರನ್ ಮಾಡುತ್ತಿದ್ದೇವೆ. ಕೆರೆಗೆ ನೀರು ತುಂಬಿಸಲು ಈ ಯೋಜನೆಯಲ್ಲಿ ಪ್ರಾವಿಜನ್ ಇರುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಗ್ರಾಮಸ್ಥರ ಒತ್ತಾಯದ ಮೇರೆಗೆ ಹೆಚ್ಚುವರಿ ನೀರನ್ನು ಕೆರೆ ಹಳ್ಳಕ್ಕೆ ಹೋಗಲು ವಾಲ್ ಮಾಡಿ ತಾತ್ಕಾಲಿಕವಾಗಿ ನೀರು ಹರಿಸಲಾಗುವುದು. ರೈತರು ನೀರಾವರಿ ಯೋಜನೆಯ ಯಾವುದೇ ಪೈಪ್ಗಳನ್ನು ಕಾನೂನು ಮೀರಿ ಒಡೆಯುವದು ಮಾಡಬಾರದು.ಸಂಗಮೇಶ ಮುಂಡಾಸ, ಇಇ ಕೆಬಿಜೆಎನ್ಎಲ್ ಕೋಟ್
ಹುಣಶ್ಯಾಳ ಕೆರೆ ತುಂಬಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಆದಷ್ಟು ಬೇಗ ಯೋಜನೆಗೆ ಚಾಲನೆ ನೀಡಬೇಕಾಗಿದೆ. ದನ-ಕರುಗಳಿಗೆ ಕುಡಿಯಲು ನೀರಿಲ್ಲ. ಅವು ನೀರಿಗಾಗಿ ಬೇರೆ ಹೋಲಗಳಿಗೆ ಹೋದ್ರೆ ಮೂಕ ಪ್ರಾಣಿಗಳಿಗಿ ಹಿಂಸೆ ಮಾಡ್ತಿದ್ರು. ಇವಾಗಾದರು ತಾತ್ಕಾಲಿಕವಾಗಿ ಬೂದಿಹಾಳ ಪೀರಪುರ ನೀರಾವರಿ ಯೋಜನೆ ಮೂಲಕ ಸ್ಕಾವರ್ ವಾಲ್ ಮಾಡಿ ನೀರು ಹರಿಸಲು ತಿಳಿಸಿದ ಕಾರಣ ಪಕ್ಷಾತೀತವಾಗಿ ಜೆಸಿಬಿ ಮೂಲಕ ಕೆರೆಗೆ ನೀರು ಹೋಗಲು ಅನುಕೂಲ ಕಲ್ಪಿಸಲಾಗಿದೆ. ಇದರಿಂದ ಜನ ಜಾನುವಾರುಗಳಿಗೆ ಬೇಸಿಗೆ ಕಾಲದಾಗ ತಾತ್ಕಾಲಿಕ ಅನುಕೂಲ ಆದಂಗಾಯ್ತು. ಇದಕ್ಕಿಂತ ಖುಷಿ ಬೇರೆ ಇಲ್ಲ.ಮೌನೇಶ ಪೂಜಾರಿ, ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ಹುಣಶ್ಯಾಳ