ತಳ ಮಟ್ಟದತ್ತ ಕೆಆರ್‌ಎಸ್ ನೀರಿನ ಮಟ್ಟ..!

KannadaprabhaNewsNetwork |  
Published : Jun 07, 2026, 01:30 AM IST
೬ಕೆಎಂಎನ್‌ಡಿ-೨ನೀರಿಲ್ಲದೆ ಕಳಾಹೀನವಾಗಿರುವ ಕೆಆರ್‌ಎಸ್ ಜಲಾಶಯ. | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ೮೧ ಅಡಿಗೆ ಕುಸಿದಿದೆ. ಮೂರು ವರ್ಷಗಳ ಹಿಂದೆ ಜೂನ್ ತಿಂಗಳಲ್ಲಿ ಅಣೆಕಟ್ಟೆಯೊಳಗೆ ಈ ಪ್ರಮಾಣದ ನೀರಿನ ಮಟ್ಟ ದಾಖಲಾಗಿತ್ತು. ಮುಂಗಾರು ಆಗಮನ ವಿಳಂಬವಾದರೆ ಜಲಾಶಯದ ನೀರಿನ ಮಟ್ಟ ಅಪಾಯದ ಮಟ್ಟ ತಲುಪುವ ಆತಂಕ ವ್ಯಕ್ತವಾಗುತ್ತಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ೮೧ ಅಡಿಗೆ ಕುಸಿದಿದೆ. ಮೂರು ವರ್ಷಗಳ ಹಿಂದೆ ಜೂನ್ ತಿಂಗಳಲ್ಲಿ ಅಣೆಕಟ್ಟೆಯೊಳಗೆ ಈ ಪ್ರಮಾಣದ ನೀರಿನ ಮಟ್ಟ ದಾಖಲಾಗಿತ್ತು. ಮುಂಗಾರು ಆಗಮನ ವಿಳಂಬವಾದರೆ ಜಲಾಶಯದ ನೀರಿನ ಮಟ್ಟ ಅಪಾಯದ ಮಟ್ಟ ತಲುಪುವ ಆತಂಕ ವ್ಯಕ್ತವಾಗುತ್ತಿದೆ.

ಪ್ರಸ್ತುತ ಜಲಾಶಯದಲ್ಲಿ ೮೧.೩೬ ಅಡಿ ನೀರಿದ್ದು, ಅಣೆಕಟ್ಟೆಗೆ ೫೨೮ ಕ್ಯುಸೆಕ್ ನೀರು ಹರಿದುಬರುತ್ತಿದೆ. ಜಲಾಶಯದಿಂದ ಹೊರಕ್ಕೆ ನದಿ ಮತ್ತು ನಾಲೆ ಸೇರಿ ೮೫೨ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಅಣೆಕಟ್ಟೆಯಲ್ಲಿ ೧೧.೩೯೯ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ ೧೦೭.೬೮ ಅಡಿ ನೀರು ಸಂಗ್ರಹವಾಗಿತ್ತು. ಆ ಸಮಯದಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಾಗಿ ಸುರಿದಿತ್ತು. ಜೊತೆಗೆ ಮುಂಗಾರು ಮಳೆಯೂ ನಿರೀಕ್ಷೆಯಂತೆ ಆಗಮನವಾಗಿದ್ದರಿಂದ ಅಂದು ಜಲಾಶಯಕ್ಕೆ ೬೫೧೩ ಕ್ಯುಸೆಕ್ ನೀರು ಹರಿದುಬರುತ್ತಿತ್ತು. ಅಂದು ಜಲಾಶಯದಲ್ಲಿ ೨೯.೪೫೪ ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.

ಈ ಬಾರಿ ಮುಂಗಾರು ಪೂರ್ವ ಮಳೆ ಕೈಕೊಟ್ಟ ಪರಿಣಾಮ ಜಲಾಶಯದಿಂದ ಬೇಸಿಗೆ ಬೆಳೆಗಳಿಗೆ ನೀರು ಹರಿಸಲಾಯಿತು. ಹಲವು ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲಾಯಿತು. ಇದರಿಂದ ಅಣೆಕಟ್ಟೆಯಲ್ಲಿ ನೀರನ್ನು ಕಾಯ್ದಿರಿಸಲು ಸಾಧ್ಯವಾಗಲಿಲ್ಲ. ಮಳೆ ಬಾರದಿದ್ದರೆ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿರುವುದರಿಂದ ನೀರೊಳಗೆ ಮುಳುಗಿದ್ದ ದೇಗುಲಗಳು ಗೋಚರಿಸಲಾರಂಭಿಸಿವೆ.

೨೦೨೩ರಲ್ಲಿ ಮುಂಗಾರು ಆಗಮನದ ವಿಳಂಬದಿಂದಾಗಿ ಜಲಾಶಯದ ನೀರಿನ ಮಟ್ಟ ಜೂನ್ ತಿಂಗಳಲ್ಲಿ ೭೮ ರಿಂದ ೭೯ ಅಡಿಗೆ ತಲುಪಿತ್ತು. ಮುಂಗಾರು ಮಳೆಯ ಕೊರತೆ ಹಾಗೂ ಬರಗಾಲದ ಛಾಯೆಯಿಂದ ಆ ವರ್ಷ ಅಣೆಕಟ್ಟು ಭರ್ತಿಯಾಗಲೇ ಇಲ್ಲ. ಮಳೆಯ ಅಭಾವದಿಂದ ಜಲಾಶಯದ ನೀರಿನ ಮಟ್ಟ ಆ ವರ್ಷ ೧೦೭.೧೮ ಅಡಿಗೆ ತಲುಪುವಲ್ಲಿ ಮಾತ್ರ ಶಕ್ತವಾಗಿತ್ತು.

ಈ ಬಾರಿ ನಿರೀಕ್ಷೆಯಂತೆ ಮುಂಗಾರು ಪೂರ್ವ ಮಳೆ ಬರಲಿಲ್ಲ. ಮುಂಗಾರು ಮಳೆಯ ಪ್ರಮಾಣವೂ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎಲ್‌ನಿನೋ ಪರಿಣಾಮ ಮುಂಗಾರು ಕ್ಷೀಣಿಸಲಿರುವುದರಿಂದ ಜುಲೈ ತಿಂಗಳಲ್ಲಿ ಭರ್ತಿಯಾಗುತ್ತಿದ್ದ ಜಲಾಶಯ ಈ ಬಾರಿ ಇನ್ನಷ್ಟು ವಿಳಂಬವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಹಾಲಿ ಅಣೆಕಟ್ಟೆಯ ನೀರಿನ ಮಟ್ಟ ೮೧ ಅಡಿಗೆ ತಲುಪಿರುವುದು ಅಪಾಯದ ಮುನ್ಸೂಚನೆಯಾಗಿದೆ. ೭೦ ಅಡಿಯವರೆಗಷ್ಟೇ ನೀರನ್ನು ಪಡೆಯಲು ಸಾಧ್ಯ. ಆನಂತರ ಉಳಿದಿದ್ದೆಲ್ಲವೂ ಡೆಡ್ ಸ್ಟೋರೇಜ್ ಆಗಿದೆ. ಮುಂಗಾರು ಮಳೆ ಆರಂಭವಾಗಿ ಜಲಾಶಯಕ್ಕೆ ನೀರು ಹರಿದುಬರುವಂತಾದರೆ ನೀರಿನ ಸಮಸ್ಯೆ ಸುಧಾರಿಸಬಹುದು. ಒಮ್ಮೆ ಮಳೆ ನಿರೀಕ್ಷೆಯಂತೆ ಬಾರದಿದ್ದರೆ ಪರಿಸ್ಥಿತಿ ಇನ್ನಷ್ಟು ಸಂಕಷ್ಟಮಯವಾಗಲಿದೆ.

ತಮಿಳುನಾಡು ಜೂನ್ ಅಂತ್ಯಕ್ಕೆ ಮೊದಲ ಕಂತಿನ ನೀರಿನ ಬಿಡುಗಡೆಗೆ ಸುಪ್ರೀಂಕೋರ್ಟ್ ಕದ ತಟ್ಟುವ ಸಾಧ್ಯತೆಗಳಿವೆ ಆಗ ಬೆಂಗಳೂರು ಸೇರಿದಂತೆ ಮಂಡ್ಯ, ರಾಮನಗರ, ಮೈಸೂರು ಜಿಲ್ಲೆಗಳಿಗೂ ಕುಡಿಯುವ ನೀರಿಗೆ ಗಂಭೀರ ಸಮಸ್ಯೆ ಸೃಷ್ಟಿಯಾಗುವ ಮುನ್ಸೂಚನೆಗಳು ಕಂಡುಬರುತ್ತಿವೆ.

ಕಳೆದ ಮೂರು ವರ್ಷದಿಂದ ಹೆಚ್ಚುವರಿ ಮಳೆ ಸುರಿದಾಗಲೆಲ್ಲಾ ಮಳೆಯಿಂದ ಬಿದ್ದ ಹೆಚ್ಚುವರಿ ನೀರನ್ನೆಲ್ಲಾ ಯಾವುದೇ ಅಡೆತಡೆಗಳಿಲ್ಲದೆ ತಮಿಳುನಾಡಿಗೆ ಹರಿಸಲಾಯಿತು. ಕೆರೆಗಳಲ್ಲಿ ತುಂಬಿರುವ ಹೂಳೆತ್ತಿಸಿ ನೀರಿನ ಸಂಗ್ರಹವನ್ನು ಹೆಚ್ಚಿಸುವ, ಹೊಸ ಕೆರೆಗಳನ್ನು, ಮಿನಿ ಬ್ಯಾರೇಜ್‌ಗಳನ್ನು ನಿರ್ಮಿಸಿಕೊಂಡು ನೀರು ಶೇಖರಣೆಗೆ ಆದ್ಯತೆ ನೀಡುವ ಯೋಜನೆಗಳು ರಾಜ್ಯದ ಕಾವೇರಿ ಕಣಿವೆಯಲ್ಲೆಲ್ಲೂ ನಡೆಯಲೇ ಇಲ್ಲ. ಪರಿಣಾಮ ಮಳೆ ಅಭಾವ ಎದುರಾದಾಗಲೆಲ್ಲಾ ತಮಿಳುನಾಡಿನೊಂದಿಗೆ ಕದನಕ್ಕಿಳಿಯುವುದು ಸರ್ವೇಸಾಮಾನ್ಯವಾಗಿದೆ. ಇದು ಎರಡು-ಮೂರು ದಶಕಗಳಿಂದಲೂ ಸಂಪ್ರದಾಯಬದ್ಧವಾಗಿ ನಡೆದುಕೊಂಡೇ ಬರುತ್ತಿದೆ.

ರೈತರು ಕೂಡ ಮುಂಗಾರು ಮಳೆಯ ಮೇಲೆ ನಿರೀಕ್ಷೆ ಇಟ್ಟುಕೊಂಡು ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಆದರೆ, ಮಳೆಯ ಕಣ್ಣಾಮುಚ್ಚಾಲೆಯಾಟ ಮುಂದುವರಿದೇ ಇದೆ. ಅಣೆಕಟ್ಟೆಗೂ ಒಳಹರಿವು ಬಾರದಿರುವುದರಿಂದ ಕೃಷಿಯ ಚಟುವಟಿಕೆಯ ಮೇಲೆ ಕರಾಳ ಛಾಯೆ ಆವರಿಸಲಾರಂಭಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಆರೋಗ್ಯಕ್ಕಾಗಿ ಗಿಡಗಳನ್ನು ಬೆಳೆಸಿ: ಮಹೇಶ್ ಕುಮಾರ್
ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಉಂಟಾಗಬೇಕು