- ಹಿರೇಮಠದ ಶ್ರೀ ಡಾ.ಕೇದಾರಲಿಂಗ ಸ್ವಾಮೀಜಿ ಒತ್ತಾಯ। ಚನ್ನಗಿರಿಯಿಂದ ದಾವಣಗೆರೆಗೆ ಬೈಕ್ ರ್ಯಾಲಿ ನಡೆಸಿ ಡಿಸಿಗೆ ಮನವಿ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದಲ್ಲಿರುವ ಪುರಸಭೆ ಮುಂಭಾಗದ ಸರ್ಕಾರಿ ಒಡೆತನದಲ್ಲಿರುವ 2 ಎಕರೆ ಜಾಗದಲ್ಲಿ ಸರ್ಕಾರಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಮಯೂರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ, ವಿಶ್ವ ಮಾನವಹಕ್ಕುಗಳ ಸೇವಾ ಪ್ರತಿಷ್ಠಾನ, ಕನ್ನಡ ಜಾಗೃತ ಸಮಿತಿ, ರೈತ ಸಂಘಗಳ ಕಾರ್ಯಕರ್ತರು ಪಟ್ಟಣದ ಹಿರೇಮಠದ ಶ್ರೀ ಡಾ.ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ಚನ್ನಗಿರಿಯಿಂದ ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ್ಯಾಲಿ ನಡೆಸಿ ಡಿಸಿಗೆ ಮನವಿ ಸಲ್ಲಿಸಿದರು.ಹಿರೇಮಠದ ಶ್ರೀಗಳು ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಒಂದು ತಿಂಗಳ ಹಿಂದೆ ಪಟ್ಟಣದಲ್ಲಿ ಸರ್ಕಾರಿ ಬಸ್ ಡಿಪೋ ಆರಂಭಗೊಂಡಿದೆ. ಆದರೆ, ಬಸ್ಗಳ ನಿಲುಗಡೆಗೆ ಸೂಕ್ತ ನಿಲ್ದಾಣವಿಲ್ಲದೇ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿ ಪುರಸಭೆ ಮುಂಭಾಗದ, ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸಿ ಚನ್ನಗಿರಿ ತಾಲೂಕಿನ ಜನತೆಗೆ ಅನುಕೂಲ ಮಾಡಿಕೊಡಬೇಕಿದೆ. ಈ ಉದ್ದೇಶದಿಂದ ಸರ್ಕಾರದ ಗಮನ ಸೆಳೆಯಲು ದಾವಣಗೆರೆ ಜಿಲ್ಲಾ ಮಂತ್ರಿ, ಸಂಸದರು ಹಾಗೂ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲು ವಿವಿಧ ಸಂಘಟನೆಗಳ ಕಾರ್ಯಕರ್ತರುಗಳು ಬೈಕ್ ರ್ಯಾಲಿ ಮೂಲಕ ಹೋಗಿ ಮನವಿ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.
ಬೈಕ್ ರ್ಯಾಲಿ ಸಾಗಿದ ಮಾರ್ಗ ಮಧ್ಯದ ಗ್ರಾಮಾಂತರ ಪ್ರದೇಶಗಳಲ್ಲಿನ ಯುವಕರು ಸಹ ರ್ಯಾಲಿಯಲ್ಲಿ ಭಾಗವಹಿಸಿ ಬಸ್ ನಿಲ್ದಾಣ ಬೇಡಿಕೆ ಹೋರಾಟಕ್ಕೆ ಬೆಂಬಲ ಸೂಚಿಸಿದರು.
- - -(ಬಾಕ್ಸ್) * ಸಾರಿಗೆ ನಿಗಮಕ್ಕೆ ಜಾಗ ವಹಿಸಿಕೊಡಿ: ಗೌ.ಹಾಲೇಶ್ ಮಯೂರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಅಧ್ಯಕ್ಷ ಗೌ.ಹಾಲೇಶ್ ಮಾತನಾಡಿ, ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಖಾಲಿ ಜಾಗವು 1967ನೇ ಇಸವಿಯಿಂದಲೇ ಸರ್ಕಾರಿ ಜಾಗವೆಂದು ಸರ್ಕಾರದ ಎಲ್ಲ ದಾಖಲೆಗಳಲ್ಲಿಯೂ ಇದೆ. ಇಲ್ಲಿಂದ ಚುನಾಯಿತರಾದ ಜನಪ್ರತಿನಿಧಿಗಳೆಲ್ಲರೂ ಈ ಜಾಗದ ವಿಚಾರ ನ್ಯಾಯಾಲಯದಲ್ಲಿದೆ ಎಂದು ಜನತೆಗೆ ಹೇಳುತ್ತ, ನಿಜಾಂಶ ಮುಚ್ಚಿಹಾಕುತ್ತಿದ್ದರು. ಹೀಗಾಗಿ ಈ ಸರ್ಕಾರಿ ಖಾಲಿ ಜಾಗದ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ, ಹೋರಾಟದ ಹಾದಿಯನ್ನು ಹಿಡಿಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸರ್ಕಾರಿ ಜಾಗವು ಪಟ್ಟಣದ ಪ್ರಮುಖ ಸ್ಥಳದಲ್ಲಿದ್ದು, ಇಲ್ಲಿ ಸರ್ಕಾರಿ ಬಸ್ ನಿಲ್ದಾಣ ಮಾಡುವುದರಿಂದ ಹಿಂದೂ-ಮುಸ್ಲಿಂ, ಕ್ರಿಶ್ವಿಯನ್, ಬೌದ್ದ, ಪಾರ್ಸಿ ಎಲ್ಲ ಜನರಿಗೆ ಅನುಕೂಲವಾಗಲಿದೆ. ಮುಂದಿನ 15 ದಿನಗಳ ಒಳಗೆ ಈ ಸರ್ಕಾರಿ ಜಾಗವನ್ನು ಸಾರಿಗೆ ನಿಗಮಕ್ಕೆ ವಹಿಸಿಕೊಡದಿದ್ದರೆ ಇಲ್ಲಿನ ತಾಲೂಕು ಕಚೇರಿ ಎದುರು ಸರಣಿ ಪ್ರಕಾರವಾಗಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
- - --13ಕೆಸಿಎನ್ಜಿ1.ಜೆಪಿಜಿ: ಚನ್ನಗಿರಿ ಹಿರೇಮಠ ಆವರಣದಲ್ಲಿ ಶ್ರೀಗಳು ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
- 13ಕೆಸಿಎನ್ಜಿ2: ಚನ್ನಗಿರಿ ಪಟ್ಟಣದ ಸರ್ಕಾರಿ ಜಾಗದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯಿಸಿ ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.