ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕಾಡ್ಗಿಚ್ಚು ನಿಯಂತ್ರಣ

KannadaprabhaNewsNetwork |  
Published : Mar 02, 2025, 01:16 AM IST
ಬೆಂಕಿ ಹರಡದಂತೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ | Kannada Prabha

ಸಾರಾಂಶ

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಾಣಿಜರಿ, ಶಾಂತಿಗುಡ್ಡೆ, ಬಲ್ಲಾಳರಾಯನ ದುರ್ಗ, ಬಂಡಾಜೆ ಫಾಲ್ಸ್ ಮತ್ತು ಸುತ್ತಲ ಪರಿಸರದಲ್ಲಿ ಶುಕ್ರವಾರ ಕಂಡುಬಂದಿದ್ದ ಅಗಾಧ ಪ್ರಮಾಣದ ಬೆಂಕಿ ಶನಿವಾರ ಸಂಜೆ ವೇಳೆಗೆ ಹತೋಟಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಾಣಿಜರಿ, ಶಾಂತಿಗುಡ್ಡೆ, ಬಲ್ಲಾಳರಾಯನ ದುರ್ಗ, ಬಂಡಾಜೆ ಫಾಲ್ಸ್ ಮತ್ತು ಸುತ್ತಲ ಪರಿಸರದಲ್ಲಿ ಶುಕ್ರವಾರ ಕಂಡುಬಂದಿದ್ದ ಅಗಾಧ ಪ್ರಮಾಣದ ಬೆಂಕಿ ಶನಿವಾರ ಸಂಜೆ ವೇಳೆಗೆ ಹತೋಟಿಗೆ ಬಂದಿದೆ.ಇಲ್ಲಿನ ಹುಲ್ಲುಗಾವಲು, ಕಣಿವೆ ಹಾಗೂ ತಡೆಗೋಡೆಗಳ ಪ್ರದೇಶದಲ್ಲಿ ವ್ಯಾಪಕ ಬೆಂಕಿ ಕಂಡುಬಂದಿದ್ದು ಶುಕ್ರವಾರ ರಾತ್ರಿ ಇಲ್ಲಿಂದ ಹಲವು ಕಿ.ಮೀ. ದೂರದವರೆಗೂ ಹುಲ್ಲುಗಾವಲು ಉರಿಯುವುದು ಕಂಡುಬಂದಿತ್ತು.ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್‌ಎಫ್‌ಒ ಶರ್ಮಿಷ್ಠಾ, ಡಿಆರ್‌ಎಫ್‌ಒ ರಂಜಿತ್ ಅವರ ತಂಡ ರಾತ್ರಿಯೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮಧ್ಯರಾತ್ರಿ 2 ಗಂಟೆ ತನಕ ಬೆಂಕಿ ಇನ್ನಷ್ಟು ಹರಡದಂತೆ ಮುನ್ನೆಚ್ಚರಿಕೆ ವಹಿಸಿತ್ತು.ಶನಿವಾರ ಬೆಳಗ್ಗೆ ಕಾರ್ಯಾಚರಣೆಗೆ ಒಂದು ತಂಡ ದಿಡುಪೆ- ಎಳನೀರಿನ ಮೂಲಕ ಬೆಂಕಿ ಬಿದ್ದ ಪ್ರದೇಶಕ್ಕೆ ತೆರಳಿದರೆ ಇನ್ನೊಂದು ತಂಡ ಕಡಿರುದ್ಯಾವರದ ಮೂಲಕ 8 ಕಿ.ಮೀ. ಕಾಲ್ನಡಿಗೆಯಲ್ಲಿ ಕ್ರಮಿಸಿ ಬಂಡಾಜೆ ಫಾಲ್ಸ್ ಪ್ರದೇಶಕ್ಕೆ ತೆರಳಿ ಬೆಂಕಿ ಇನ್ನಷ್ಟು ಹರಡದಂತೆ ಸಂಜೆವರೆಗೂ ಕಾರ್ಯಾಚರಣೆ ನಡೆಸಿತು.ಅತ್ಯಂತ ಜಟಿಲ ಪ್ರದೇಶವಾದ ಇಲ್ಲಿ ಕಾರ್ಯಾಚರಣೆ ನಡೆಸುವುದು ಸವಾಲಾಗಿದೆ. ಕಣಿವೆ, ಬೆಟ್ಟ, ತಡೆಗೋಡೆ ಪ್ರದೇಶಕ್ಕೆ ತೆರಳಲು ಸಾಧ್ಯವಿಲ್ಲ. ಇಲಾಖೆ ಬೆಂಕಿ ರೇಖೆ ರಚಿಸಿರುವ ಕಾರಣ ಬೆಂಕಿ ಕಾಡಿನ ಭಾಗವನ್ನು ಪ್ರವೇಶಿಸಿಲ್ಲ. ಅಗ್ನಿಶಾಮಕ ದಳ ಸಹಿತ ಯಾವುದೇ ವಾಹನಗಳು ತೆರಳದ ಈ ಪ್ರದೇಶದಲ್ಲಿ ಹಲವು ಕಿ.ಮೀ. ದೂರವನ್ನು ಕಾಲ್ನಡಿಗೆ ಮೂಲಕವೇ ಕ್ರಮಿಸಬೇಕಿದೆ.ಸಿಬ್ಬಂದಿ ಹೈರಾಣು: ಕಿಡಿಗೇಡಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆಯುತ್ತಿರುವುದು ಇಲಾಖೆಗೆ ಸಂಕಟವನ್ನು ತರುತ್ತಿದೆ. ಒಂದೆಡೆ ಉಂಟಾದ ಬೆಂಕಿ ಸದ್ಯ ಬಿಸಿಲು ಮತ್ತು ಲಘುವಾದ ಗಾಳಿ ಇರುವ ಪರಿಣಾಮ ಭಾರಿ ವೇಗವಾಗಿ ಪಸರಿಸುತ್ತದೆ. ಬೆಂಕಿ ಆರಿಸಲು ಇಲಾಖೆ ಹರಸಾಹಸ ಪಡಬೇಕಿದೆ. ಇಲಾಖೆಯಲ್ಲಿ ಸರಿಯಾದ ಉಪಕರಣಗಳು, ವ್ಯವಸ್ಥೆಗಳು, ಹೆಚ್ಚಿನ ಸಿಬ್ಬಂದಿಯೂ ಇಲ್ಲದ ಕಾರಣ ಇರುವ ಸಿಬ್ಬಂದಿ ಹೈರಾಣರಾಗುತ್ತಿದ್ದಾರೆ. ಪ್ರಖರ ಬಿಸಿಲು ಕೂಡ ತ್ವರಿತ ಕಾರ್ಯಾಚರಣೆಗೆ ಅಡ್ಡಿ ನೀಡುತ್ತಿದೆ...............ಬೆಂಕಿ ಅರಣ್ಯ ಭಾಗವನ್ನು ಪ್ರವೇಶಿಸಿಲ್ಲ. ಹೆಚ್ಚಿನ ಪ್ರಮಾಣದ ಒಣ ಹುಲ್ಲಿಗೆ ಮಾತ್ರ ಪಸರಿಸಿದೆ. ಬೆಂಕಿ ಇನ್ನಷ್ಟು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.ದೂರ ಪ್ರದೇಶದಲ್ಲಿ ಹೊಗೆ ಕಾಣುತ್ತಿದ್ದರೂ,ಅಪಾಯದ ಸ್ಥಿತಿ ಇಲ್ಲಶರ್ಮಿಷ್ಠಾ, ಡಿಆರ್‌ಎಫ್‌ಒ, ವನ್ಯಜೀವಿ ವಿಭಾಗ, ಬೆಳ್ತಂಗಡಿ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ