)
ಕಾರ್ಕಳ: ಪಶ್ಚಿಮ ಘಟ್ಟಗಳ ಸೊಬಗನ್ನು ಸವಿಯಲು ಕಾತರದಿಂದ ಕಾಯುತ್ತಿದ್ದ ಚಾರಣ ಆಸಕ್ತರಿಗೆ ಸಂತಸದ ಸುದ್ದಿ. ಕುದುರೆಮುಖ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿರುವ ಕುದುರೆಮುಖ, ಗಂಗಡಿಕಲ್, ನೇತ್ರಾವತಿ ಹಾಗೂ ಕುರಿಂಜಾಲ್ ಬೆಟ್ಟಗಳ ಚಾರಣಕ್ಕೆ ಅರಣ್ಯ ಇಲಾಖೆ ಜೂ. 1ರಿಂದ ಅಧಿಕೃತ ಅನುಮತಿ ನೀಡಿದೆ.ಅರಣ್ಯ ಇಲಾಖೆ ಪ್ರಕಟಣೆ ಪ್ರಕಾರ,ಈ ನಾಲ್ಕು ಪ್ರಮುಖ ಚಾರಣ ತಾಣಗಳಿಗೆ ಭೇಟಿ ನೀಡಲು ಬಯಸುವವರು ಕಡ್ಡಾಯವಾಗಿ ‘ಅರಣ್ಯ ವಿಹಾರ’ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಪ್ರಮಾಣಿತ ಕಾರ್ಯವಿಧಾನ (ಎಸ್ಒಪಿ) ಅನುಸಾರ ಚಾರಣ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಪರಿಸರ ಸಂರಕ್ಷಣೆ ಹಾಗೂ ಚಾರಣಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.ಕುದುರೆಮುಖ ವನ್ಯಜೀವಿ ವಿಭಾಗದ ಡಿಎಫ್ಒ ಶುವರಾಮ್ ಬಾಬು ಅವರು ಮಾಹಿತಿ ನೀಡಿ, ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು 300 ಮಂದಿ ಸ್ಥಳೀಯ ಗೈಡ್ಗಳಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಗೈಡ್ಗಳಿಗೆ ವಾಕಿಟಾಕಿ, ಪ್ರಥಮ ಚಿಕಿತ್ಸಾ ಕಿಟ್, ಸುರಕ್ಷತಾ ಜಾಕೆಟ್ ಸೇರಿದಂತೆ ಅಗತ್ಯ ಸುರಕ್ಷತಾ ಪರಿಕರಗಳನ್ನು ಒದಗಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ತಕ್ಷಣ ನೆರವು ಒದಗಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಇದರೊಂದಿಗೆ ಇನ್ನುಳಿದ ಪ್ರಮುಖ ಚಾರಣ ತಾಣಗಳನ್ನು ಜೂ.15ರ ಬಳಿಕ ಸಾರ್ವಜನಿಕರಿಗೆ ಮುಕ್ತಗೊಳಿಸುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಮಳೆಗಾಲದ ಆರಂಭದಲ್ಲಿ ಹಸಿರು ಹೊದಿಕೆ ತೊಟ್ಟಿರುವ ಕುದುರೆಮುಖ ವಲಯದ ಬೆಟ್ಟಗಳು ಈಗಾಗಲೇ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಚಾರಣ ಆರಂಭವಾಗಿರುವುದು ಪ್ರಕೃತಿ ಪ್ರಿಯರಲ್ಲಿ ಹೊಸ ಉತ್ಸಾಹ ಮೂಡಿಸಿದೆ.