ಕೊಟ್ಟೂರು: ಸಾಹಿತ್ಯಕ್ಕಿಂತ ಮಾನವೀಯತೆ, ಅಂತಃಕರಣ ಮೈಗೂಡಿಸಿಕೊಳ್ಳಲು ಪ್ರತಿಯೊಬ್ಬರಲ್ಲಿ ಪ್ರೇರಣೆ ತಂದುಕೊಟ್ಟವರು ಕುವೆಂಪು ಎಂದು ಸಿಂಧನೂರು ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಡಾ. ನಾಗರಾಜ ಮಡಿವಾಳರ ಹೇಳಿದರು.ಕೊಟ್ಟೂರೇಶ್ವರ ಮಹಾವಿದ್ಯಾಲಯದ ಡಾ. ಎಚ್.ಜಿ. ರಾಜ್ ಸಭಾಂಗಣದಲ್ಲಿ ಇತ್ತೀಚೆಗೆ ಅಯೋಜಿಸಿದ್ದ ಕುವೆಂಪು ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾನವೀಯ ನೆಲೆಯನ್ನು ಸಾಹಿತ್ಯ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಬಿಂಬಿಸುವ ಮೂಲಕ ಈ ವಲಯಕ್ಕೆ ಧೀಶಕ್ತಿಯನ್ನು ದೊರಕಿಸಿಕೊಟ್ಟವರು ರಾಷ್ಟ್ರಕವಿ ಕುವೆಂಪು ಎಂದು ಹೇಳಿದರು.ಮಾನವೀಯ ಮೌಲ್ಯಗಳಿಗೆ ವಿಚಾರ ಕ್ರಾಂತಿಯ ಶಕ್ತಿಯನ್ನು ಕುವೆಂಪು ತುಂಬಿ, ಸಾಹಿತ್ಯದ ಮೌಲ್ಯಗಳನ್ನು ಹೆಚ್ಚಿಸಿದರು. ಮನುಜ ಪಥ ವಿಶ್ವ ಪಥ ಎಂಬ ನುಡಿಯಂತೆ ಅಕ್ಷರಶಃ ಸಾಹಿತ್ಯ ವಲಯದಲ್ಲಿ ಕ್ರಾಂತಿ ಮಾಡುವಂತೆ ಮಾಡಿದವರು ಎಂದರು.ವಿಶೇಷ ಉಪನ್ಯಾಸ ನೀಡಿದ ಪರಶುರಾಮಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ತಿಪ್ಪೇರುದ್ರ ಸಂಡೂರು ಮಾತನಾಡಿ, ಕುವೆಂಪು ಇಲ್ಲದ ಸಾಹಿತ್ಯವನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ. ಕನ್ನಡಕ್ಕೊಂದು ದಿವ್ಯಶಕ್ತಿಯನ್ನು ತಮ್ಮ ಸಾಹಿತ್ಯದ ಮೂಲಕ ತೋರಿ ರಾಷ್ಟ್ರಕವಿ ಎನಿಸಿಕೊಂಡ ಮಹಾತ್ಮರು ಎಂದರು.