ಪ್ರೀತಿಯ ಸಂದೇಶ ನೀಡುವ ಕುವೆಂಪು ರಾಮಾಯಣ: ವಿಠ್ಠಲ್ ಕೊರ್ವೆಕರ
dandeli, uttara kannada, vittal korvekar, kuvempu, ramayana darshanam, ದಾಂಡೇಲಿ, ರಾಮಾಯಣ ದರ್ಶನಂ, ಕುವೆಂಪು, ವಿಠ್ಠಲ್ ಕೊರ್ವೆಕರ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದಾಂಡೇಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಕಾರ್ಯಕ್ರಮದ ಭಾಗವಾಗಿ ದಾಂಡೇಲಿ ಸಾಹಿತ್ಯ ಭವನದಲ್ಲಿ ರಾಮಾಯಣ ದರ್ಶನಂ ಮತ್ತು ಕುವೆಂಪು ಉಪನ್ಯಾಸ ಕಾರ್ಯಕ್ರಮ ನಡೆಯಿತು.ದಾಂಡೇಲಿ: ರಾಮಾಯಣ, ಮಹಾಭಾರತಗಳೆಂದರೆ ನಮ್ಮಲ್ಲಿ ಯುದ್ಧದ ಕಥೆಗಳೆಂಬ ಭಾವನೆಗಳಿವೆ. ಹಲವು ರಾಮಾಯಣಗಳು ರಚಿತವಾಗಿದ್ದರೂ ಕುವೆಂಪು ರಾಮಾಯಣ ದರ್ಶನಂನಲ್ಲಿ ಯುದ್ಧ, ದ್ವೇಷದ ಬದಲಿಗೆ ಪ್ರೀತಿಯ ಸಂದೇಶವೇ ಹೆಚ್ಚಾಗಿ ಕಂಡುಬರುತ್ತದೆ ಎಂದು ಬರಹಗಾರ, ಅಧ್ಯಾಪಕ ವಿಠ್ಠಲ್ ಕೊರ್ವೆಕರ ಹೇಳಿದರು.
ರಾಮಾಯಣ ದರ್ಶನಂನಲ್ಲಿ ಕುವೆಂಪು ಅವರು ರಾಮನ ಪಾತ್ರವನ್ನು ಚಿತ್ರಿಸಿದ್ದು ವ್ಯಕ್ತಿ ಸ್ವರೂಪವಾಗಿ, ಅಧ್ಯಾತ್ಮ ಚಿಂತಕನನ್ನಾಗಿ, ರಾಮಾಯಣ ದರ್ಶನದ ಮೂಲಕ ಕುವೆಂಪು ಅವರು ಮನುಷ್ಯ ಸಂಬಂಧಗಳಿಗೆ ಹತ್ತಿರವಾದ ವಿಚಾರಗಳನ್ನು ಅಲ್ಲಿ ವ್ಯಕ್ತಪಡಿಸಿದ್ದಾರೆ. ಕುವೆಂಪು ರಾಮಾಯಣ ದರ್ಶನಂ ಜತೆಗೆ ಅವರ ಎಲ್ಲ ಕಾವ್ಯ ಹಾಗೂ ಕೃತಿಗಳು ಮನುಷ್ಯ ಪ್ರೀತಿಯನ್ನು ಕೊಡುವ ಹಾಗೂ ವಿಶ್ವ ಸಮಾನತೆಯನ್ನು ಬಯಸುವ ಸಂದೇಶಗಳನ್ನು ಸಾರುತ್ತವೆ. ರಾಮಾಯಣ ದರ್ಶನಂ ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟ ಕೃತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ರಾಮಾಯಣ ದರ್ಶನಂ ಮೂಲಕ ಕುವೆಂಪು ಕನ್ನಡಕ್ಕೆ ವಿಶ್ವಮಾನ್ಯತೆ ತಂದುಕೊಟ್ಟರು. ಕುವೆಂಪು ಈ ನೆಲದ ಹಿರಿಮೆಯಾಗಿದ್ದಾರೆ. ಕುವೆಂಪು ಅವರು ರಾಮಾಯಣ ದರ್ಶನ ಮಾಡಿಸಿದರು. ನಾವು ಕುವೆಂಪು ದರ್ಶನ ಮಾಡಿಕೊಳ್ಳಬೇಕಾಗಿದೆ ಎಂದರು.
ಕಸಾಪ ಕೋಶಾಧ್ಯಕ್ಷ ಶ್ರೀಮಂತ ಮದರಿ ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ಪ್ರವೀಣ ನಾಯ್ಕ ವಂದಿಸಿದರು.