ಮಾರುತಿ ಶಿಡ್ಲಾಪೂರ
ಯುವ ರಂಗ ನಿರ್ದೇಶಕ ನವೀನ ಸಾಣೆಹಳ್ಳಿ ಅವರ ನಿರ್ದೇಶನದಲ್ಲಿ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಸ್ಥಳೀಯ ಗಜಾನನ ಯುವಕ ಮಂಡಳದ ನುರಿತ ಕಲಾವಿದರಿಂದ ಹಳಗನ್ನಡ ಸ್ಪಷ್ಟೋಚ್ಚಾರ ಸಹೃದಯರನ್ನು ಮಂತ್ರಮುಗ್ಧಗೊಳಿಸಿತು.
ಏಕಲವ್ಯ ಅಳುಕಿಲ್ಲದೆ ತನ್ನ ಹೆಬ್ಬೆರಳನ್ನೇ ಗುರುವಿಗೆ ದಾನ ಮಾಡುವ ಸಂದರ್ಭದಲ್ಲಿ, ಶೂದ್ರನಿಗೆ ಬಿಲ್ವಿದ್ದೆ ಕಲಿಸಕೂಡದು ಎಂಬ ಅದಾವುದೋ ನಿಯಮ, ಗುರುವಿನ ನೆನೆಹಿನಲ್ಲಿಯೇ ಬಿಲ್ವಿದ್ದೆ ಪಾರಂಗತನಾದ ಏಕಲವ್ಯ ಏನನ್ನು ಪ್ರಶ್ನಿಸದೇ ಬೆರಳು ದಾನ ಮಾಡಿದ ಪರಿ ಹತ್ತು ಹಲವು ಪ್ರಶ್ನೆಗಳನ್ನು ಸಹೃದಯರಲ್ಲಿ ಹುಟ್ಟು ಹಾಕಿತು.ಒಂದೆಡೆ ಅರ್ಜುನನ ಮತ್ಸರ, ಇನ್ನೊಂದೆಡೆ ಏಕಲವ್ಯನ ಗುರುಭಕ್ತಿ, ಇವೆರಡರ ನಡುವೆ ಗುರುವಿನ ತಳಮಳ, ಏಕಲವ್ಯನ ವಿನಯ, ನಿಷ್ಠೆ, ಗುರುಭಕ್ತಿ ಕಂಡರೆ, ಇನ್ನೊಂದೆಡೆ ಅರ್ಜುನನ ಅಹಂಕಾರದ ಅಭಿವ್ಯಕ್ತಿ ಸಹೃದಯರ ಕಣ್ಣಿಗೆ ಕಟ್ಟಿ ಹೃದಯಕ್ಕೆ ನಾಟಿತು.
ಗುರುವಿಗೆ ತಾರತಮ್ಯ ಸಲ್ಲದು, ಇದರ ನಡುವೆಯೂ ಏಕಲವ್ಯ ಎಡಗೈಯಿಂದ ಹೋರಾಟ ಮಾಡುವ ಛಲ, ಇದು ಇಲ್ಲಿ ಹೊಸ ಆಯಾಮ, ಏಕಲವ್ಯ ಇಲ್ಲಿ ಸೋಲುವುದಿಲ್ಲ. ನಿನ್ನ ಬೆರಳ್ಗೆ ನನ್ನ ಕೊರಳ ಕಾರಣ ಎಂಬ ಗುರುವಿನ ಉವಾಚ. ಹೀಗೆ ಇಡೀ ನಾಟಕ ಅಧ್ಭುತ ಸಂದೇಶ ರವಾನಿಸಿತು.
ಅಕ್ಷತಾ ಮಡದ ಅವರ ಏಕಲವ್ಯನ ತಾಯಿಯ ಪಾತ್ರ, ದ್ರೋಣಾಚಾರ್ಯರ ಪಾತ್ರದಲ್ಲಿ ನಾಗರಾಜ ಕಾಸಂಬಿ, ಸಿದ್ದು ಕೊಂಡೋಜಿ (ಏಕಲವ್ಯ), ಜಮೀರ ಪಠಾಣ (ಅರ್ಜುನ), ಭರತ್ ಹಾವಣಗಿ (ಅಶ್ವತ್ಥಾಮ), ಆತ್ಮಗಳ ಪಾತ್ರದಲ್ಲಿ ಸಣ್ಣಪ್ಪ ಗೊರವರ, ಸಿದ್ದಪ್ಪ ರೊಟ್ಟಿ, ಜಲಗಾರನಾಗಿ ಪ್ರಶಾಂತ ರಟ್ಟಿಹಳ್ಳಿ, ಭರತ ರೊಟ್ಟಿ, ಉದಯ ಬಡೆಮ್ಮಿ ಕಾಡು ಜನಗಳ ಪಾತ್ರದಲ್ಲಿ ಅದ್ಭುತ ಪ್ರದರ್ಶನ ನೀಡಿದರು.