ಕನ್ನಡಪ್ರಭ ವಾರ್ತೆ ಮಂಡ್ಯ
ಈ ನಾಡ ಕಚೇರಿಗೆ ನಿತ್ಯ ೩೧ ಹಳ್ಳಿಗಳಿಂದ ತಮ್ಮ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳುವುದಕ್ಕೆ ರೈತರು ಬರುತ್ತಾರೆ. ದಾಖಲೆಗಳನ್ನು ನೀಡುವ ಸ್ಥಳದಲ್ಲಿ ಕಬ್ಬಿಣದ ಕಂಬಿಗಳನ್ನು ಹಾಕಿ ಮೇಲ್ಛಾವಣಿಗೆ ಕಬ್ಬಿಣದ ಶೀಟುಗಳನ್ನು ಅಳವಡಿಸಿ ನೆರಳಿನ ವ್ಯವಸ್ಥೆ ಕಲ್ಪಿಸುವುದಕ್ಕೆ ಪಂಚಾಯ್ತಿಯವರು ಆಸಕ್ತಿ ತೋರಿಲ್ಲ.
ಆರ್ಟಿಸಿ, ಎಂಆರ್, ಸ್ಕೆಚ್, ವಂಶವೃಕ್ಷ, ವ್ಯವಸಾಯ ದೃಢೀಕರಣ ಪತ್ರ, ಆದಾಯ ಪ್ರಮಾಣಪತ್ರ, ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಸೇರಿದಂತೆ ಭೂಮಿಗೆ ಸಂಬಂಧಿಸಿದ ಹಲವು ದಾಖಲೆಗಳಿಗಾಗಿ ಜನರು ನಾಡಕಚೇರಿಗೆ ಬರುತ್ತಿದ್ದಾರೆ. ನೆರಳಿನ ವ್ಯವಸ್ಥೆ ಇಲ್ಲದ ಕಾರಣ ಬಿಸಿಲಿನಲ್ಲೇ ನಿಂತು ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನಾಡಕಚೇರಿಯಲ್ಲಿ ಇಂಟರ್ನೆಟ್ ವ್ಯವಸ್ಥೆಯಿಲ್ಲ. ಸಿಬ್ಬಂದಿ ಮೊಬೈಲ್ನಲ್ಲೇ ಸಂಪರ್ಕ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಯುಪಿಎಸ್ ಸೌಲಭ್ಯವಿಲ್ಲದ ಕಾರಣ ವಿದ್ಯುತ್ ಅಡಚಣೆಯಾದಾಗಲೆಲ್ಲಾ ದಾಖಲೆಗಳನ್ನು ಪಡೆಯಲು ಜನರು ಕಾದುಕೂರುವುದು ಸಾಮಾನ್ಯವಾಗಿದೆ.ಹಳೇ ಕಟ್ಟಡದಲ್ಲಿದ್ದ ನಾಡ ಕಚೇರಿ ಹೊಸ ಕಟ್ಟಡಕ್ಕೆ ವರ್ಗಾವಣೆಗೊಂಡರೂ ಸೂಕ್ತ ಸೌಲಭ್ಯಗಳಿಲ್ಲ. ಸೌಲಭ್ಯಗಳಿಲ್ಲದ ಕಾರಣ ಸಾರ್ವಜನಿಕ ಕೆಲಸಗಳು ವಿಳಂಬವಾಗಿ ಸಾಗುತ್ತಿವೆ. ವೃದ್ಧಾಪ್ಯ ವೇತನ ಪಡೆಯುವವರು ಬಯೋಮೆಟ್ರಿಕ್ ನೀಡುವುದು ಅನಿವಾರ್ಯವಾಗಿದೆ. ಆದರೆ, ಅಂತರ್ಜಾಲ ವ್ಯವಸ್ಥೆಯೇ ಇಲ್ಲದಿರುವುದರಿಂದ ಸುಗಮವಾಗಿ ಕೆಲಸಗಳು ಸಾಗದಂತಾಗಿದೆ. ಇದರಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಾಡ ಕಚೇರಿಗೆ ವಿವಿಧ ದಾಖಲೆಗಳನ್ನು ಪಡೆಯಲು ಯಾವಾಗಲೂ ಜನರು ಇರುವುದರಿಂದ ಅಂತರ್ಜಾಲ ವ್ಯವಸ್ಥೆ, ಯುಪಿಎಸ್ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ಜೊತೆಗೆ ನೆರಳಿಗಾಗಿ ಗಿಡ-ಮರಗಳನ್ನು ಬೆಳೆಸುವುದು, ಕಬ್ಬಿಣದ ಶೀಟುಗಳನ್ನು ಅಳವಡಿಸಿ ಅನುಕೂಲ ಕಲ್ಪಿಸಿಕೊಡಬೇಕು ಎನ್ನುವುದು ಬಸರಾಳು ಗ್ರಾಮದ ಜನರ ಆಗ್ರಹವಾಗಿದೆ.
- ಪಟೇಲ್ ಆನಂದ್, ಮಾಜಿ ಅಧ್ಯಕ್ಷರು, ಕೃಷಿ ಪತ್ತಿನ ಸಹಕಾರ ಸಂಘ