ಶಾಲೆಯ ಎದುರಲ್ಲೇ ನೀರಿನ ಹೊಂಡ, ಶಿಥಿಲಾವಸ್ಥೆಯಲ್ಲಿರುವ ಅಡುಗೆ ಕೋಣೆ: ಪಾಲಕರಲ್ಲಿ ಆತಂಕ
ಸಂತೋಷ ದೈವಜ್ಞ
ಕನ್ನಡಪ್ರಭ ವಾರ್ತೆ ಮುಂಡಗೋಡಶಾಲೆಯ ಎದುರಲ್ಲೇ ನೀರಿನ ಹೊಂಡ, ಶಿಥಿಲಾವಸ್ಥೆಯಲ್ಲಿರುವ ಅಡುಗೆ ಕೋಣೆ ಹೀಗೆ...
ಈ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ೪೧ ಮಕ್ಕಳು ಹಾಗೂ ಉರ್ದು ಮಾಧ್ಯಮದಲ್ಲಿ ೨೭ ಸೇರಿದಂತೆ ಒಟ್ಟು 68 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕೆರೆಯ ಸುತ್ತಲೂ ಯಾವುದೇ ಭದ್ರತಾ ಬೇಲಿ ಅಥವಾ ಎಚ್ಚರಿಕೆ ಫಲಕಗಳಿಲ್ಲದಿರುವುದು ಪಾಲಕರು ಮತ್ತು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಯಾವ ಸಮಯದಲ್ಲಿ ಏನು ಅಪಾಯವಾಗುತ್ತದೆ ಎಂಬ ಭಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುವಂತಾಗಿದೆ. ಈ ಹಿಂದೆ ಬಾಲಕನೋರ್ವ ಈ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಅಲ್ಲದೇ ದನ ಕರುಗಳು ಕೂಡ ಈ ಹೊಂಡದಲ್ಲಿ ಬಿಳುತ್ತಲೇ ಇರುತ್ತವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸ್ಥಳೀಯ ನಿವಾಸಿಗಳು ಹಾಗೂ ಪಾಲಕರು ಹಲವು ಬಾರಿ ಸಂಬಧಪಟ್ಟ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದಿದ್ದೇವೆ. ಅಲ್ಲದೇ ಹೊಂಡ ಮುಚ್ಚಿ ತಡೆಗೋಡೆ ನಿರ್ಮಾಣ ಮಾಡುವಂತೆ ಗ್ರಾಮ ಅಭಿವೃದ್ದಿ ಸಮಿತಿಯವರು ಕೂಡ ಈ ಹಿಂದೆ ಮನವಿ ಸಲ್ಲಿಸಿದ್ದಾರೆ ಆದರೂ ಕೂಡ ಇದುವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ. ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಕೇವಲ ನೋಡಿಕೊಂಡು ಹೋಗುತ್ತಾರೆ ವಿನಃ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದು, ತಕ್ಷಣ ಶಾಲೆಯ ಸುತ್ತಮುತ್ತ ತಡೆಗೋಡೆ ನಿರ್ಮಿಸಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಶಾಲೆಯ ಅಡುಗೆ ಕೋಣೆ ಚಾವಣಿ ಸೋರುತ್ತಿದ್ದು, ಶಿಥಿಲಾವಸ್ಥೆಗೆ ತಲುಪಿದೆ. ಆದರೂ ಕೂಡ ಕಟ್ಟಡ ದುರಸ್ತಿಗೊಳಿಸಲಾಗಿಲ್ಲ. ಅಡುಗೆ ಕೋಣೆ ಕಟ್ಟಡ ಕುಸಿದುಬಿದ್ದು, ಮಕ್ಕಳಿಗೇನಾದರೂ ಅಪಾಯ ಸಂಭವಿಸಿದರೆ ಯಾರು ಹೊಣೆ ಎಂದು ಪಾಲಕರು ಪ್ರಶ್ನಿಸುತ್ತಿದ್ದಾರೆ. ಒಟ್ಟಾರೆ ಸಾಕಷ್ಟು ಅವ್ಯವಸ್ಥೆಯಿಂದ ಕೂಡಿರುವ ಈ ಶಾಲೆಗೆ ಸಮರ್ಪಕ ಕಾಯಕಲ್ಪ ನೀಡುವ ಅವಶ್ಯಕತೆ ಇದ್ದು, ಈಗಲಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಂದು ಕೊರತೆ ಆಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆಯೇ ಕಾದು ನೋಡಬೇಕಿದೆ.