ಕನ್ನಡಪ್ರಭ ವಾರ್ತೆ ಕುದೂರು
ಸಾಧನೆ ಮಾಡಲು ವಿಫುಲ ಅವಕಾಶಗಳಿದ್ದರೂ ಅವುಗಳ ಕೈಹಿಡಿದು ನಂಬಿಕೆಯಿಂದ ಮುನ್ನಡೆಯುವ ಆತ್ಮವಿಶ್ವಾಸದ ಕೊರತೆ ಕಾಡುತ್ತಿದೆ ಎಂದು ಕರಾಟೆ ಪ್ರಾಚಾರ್ಯ ರಮೇಶ್ಗೌಡ ವಿಷಾದಿಸಿದರು.ಕುದೂರು ಶ್ರೀ ಮಹಂತೇಶ್ವರ ಶಾಲೆಯ ಆವರಣದಲ್ಲಿ ಭಗತ್ಸಿಂಗ್ ಅಕಾಡಮಿ ಆಫ್ ಕರಾಟೆ ಸಂಸ್ಥೆ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ಬೆಲ್ಟ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೈಯಲ್ಲಿರುವ ಒಂದು ಮೊಬೈಲ್ ನಮ್ಮ ಕ್ರಿಯಾಶೀಲತೆಯನ್ನು ಕೊಲ್ಲುತ್ತಿದೆ ಎಂದರೆ ದುರಂತದ ಮೂಲಬೀಜ ನಮ್ಮ ಬಳಿಯಲ್ಲಿಯೇ ಇದೆ ಎಂದಂತಾಯಿತು. ಮೊಬೈಲ್ನಲ್ಲಿ ಏನನ್ನು ನೋಡಬೇಕು ಏನನ್ನು ನೋಡಬಾರದು ಮತ್ತು ಎಷ್ಟೊತ್ತು ನೋಡಬೇಕು ಎಂಬುದರ ತರಬೇತಿಯನ್ನು ಮಕ್ಕಳಿಗೆ ನೀಡದೆ ಬಾಂಬಿನಂತಹ ವಸ್ತುವನ್ನು ಮಕ್ಕಳ ಕೈಗೆ ಕೊಟ್ಟರೆ ದುರಂತವಲ್ಲದೇ ಮತ್ತೇನು ಸಂಭವಿಸಲು ಸಾಧ್ಯ ಎಂದರು.
ಶ್ರೀ ಮಹಂತೇಶ್ವರ ಶಾಲೆಯ ಪ್ರಾಚಾರ್ಯ ಕಾಂತರಾಜ್ ಮಾತನಾಡಿ, ಪಠ್ಯಪುಸ್ರಕಗಳ ಜೊತೆಗೆ ಕರಾಟೆಯಂತಹ ವಿದ್ಯೆಯನ್ನು ಪಠ್ಯದಂತೆಯೇ ಕಲಿಯಬೇಕಾಗಿದೆ. ಬಲಿಷ್ಟರು ತುಂಬಿರುವ ಸಮಾಜ ಎಂದೆಂದಿಗೂ ಅಪಾಯಗಳನ್ನು ಎದುರಿಸುವ ಮತ್ತು ಬೆಳೆಯುವ ಶಕ್ತಿ ಹೊಂದಿರುತ್ತದೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.ಗ್ರಾಪಂ ಅಧ್ಯಕ್ಷೆ ರೇಖಾ ಸೋಮೇಶ್ ಮಾತನಾಡಿ , ಸದೃಢ ದೇಹದಲ್ಲಿ ಸದೃಢ ಮನಸಿರುತ್ತದೆ ಎಂಬುದನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ತಿಳಿಸುವ ಕೆಲಸವಾಗಬೇಕು. ಚಿಕ್ಕದಾಗಿ ಹರಿದ ತೊರೆ ಇಂದು ದೊಡ್ಡ ನದಿಯಾಗಿ ಜಲಪಾತದಂತೆ ಧುಮುಕುತ್ತಿರುವುದು ಸಂತೋಷ ತರುತ್ತಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕರಾಟೆ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ವಿತರಣೆ ಮಾಡಲಾಯಿತು. ಕರಾಟೆ ವಿದ್ಯಾರ್ಥಿಗಳಿಂದ ರೋಮಾಂಚನಗೊಳಿಸುವ ಅನೇಕ ಸಾಹಸ ಪ್ರದರ್ಶನಗಳು ಸಾರ್ವಜನಿಕರನ್ನು ರಂಜಿಸಿದವು.ಕರಾಟೆ ಶಿಕ್ಷಕರಾದ ಅರುಣ್, ಚೇತನ್, ಚಂದ್ರಶೇಖರ್, ಸುನಿಲ್ಕುಮಾರ್, ಚಂದ್ರಕಲಾ, ಉಮೇಶ್, ಜೀವನ್, ಜಯಸೂರ್ಯ, ಮಂಜುನಾಥ್, ವಿವೇಕಾನಂದ, ನಂದನ್ಕುಮಾರ್, ಜಯಂತ್, ಗಗನ್, ಅಮರ್, ಕೋಮಲ ಹಾಜರಿದ್ದರು.