ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರ್ಕಾರದಿಂದ ಬರುವ ಅನುದಾನ ಹಾಗೂ ಔಷಧಿ ವಿತರಣೆಯಲ್ಲಿ ಲೋಪ ಕಂಡುಬರುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದು ತಾಲೂಕು ಕೆಡಿಪಿ ಸದಸ್ಯ ಚೇತನ್.ಸಿ.ಗೌಡ ಹೇಳಿದರು.
ಕೆಡಿಪಿ ಸದಸ್ಯ ನಂದೀಶ್ ಮಾತನಾಡಿ, ಸರ್ಕಾರದಿಂದ ನಾಲ್ಕು ವರ್ಷಗಳಿಂದ ಬಂದ ಅನುದಾನ ಯಾವ ಆಸ್ಪತ್ರೆಗೆ, ಯಾವುದಕ್ಕೆ ಖರ್ಚು ಮಾಡಲಾಗಿದೆ, ಕೆಲ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೆಡಿಪಿ ಸದಸ್ಯರಿಗೆ ಕಾರ್ಯಕ್ರಮಗಳ ಮಾಹಿತಿ ನೀಡುತ್ತಿಲ್ಲ, ರೋಗಿಗಳು ಆಸ್ಪತ್ರೆಗೆ ಬಂದರೆ ಹಣ ಕೇಳುತಿದ್ದಾರೆ. ಇದನ್ನೆಲ್ಲ ತಾಲೂಕು ಆರೋಗ್ಯಾಧಿಕಾರಿ ಗಮನಿಸಬೇಕು ಮತ್ತು ತಕ್ಷಣವೇ ಮಾಹಿತಿ ನೀಡಬೇಕು ಎಂದರು.
ಜಿಲ್ಲಾ ನೋಡಲ್ ಅಧಿಕಾರಿ ಡಾ. ಚೇತನ್ ಮಾತನಾಡಿ, ಕೆಡಿಪಿ ಸದಸ್ಯರು ಪತ್ರದ ಮುಖಾಂತರ ಮಾಹಿತಿ ಕೇಳಿದರೆ ಅದನ್ನು ಮೇಲಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗ ದರ್ಶನದಂತೆ ನಡೆದುಕೊಳ್ಳುತ್ತೇವೆ. ಮುಂದಿನ ಒಂದು ವಾರದಲ್ಲಿ ನಿಮಗೆ ಮಾಹಿತಿ ನೀಡಲಾಗುವುದು ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ್ ಮಾತನಾಡಿ, ನಾಲ್ಕು ವರ್ಷದಿಂದ ಸರ್ಕಾರದಿಂದ ಬಂದಿರುವ ಅನುದಾನದ ಬಗ್ಗೆ, ಎಷ್ಟು ಖರ್ಚಾಗಿದೆ ಎಂಬುದರ ಬಗ್ಗೆ ಆಡಿಟ್ ಮಾಡಿಸಲಾಗುತ್ತಿದೆ. ನಂತರ ಕೆಡಿಪಿ ಸದಸ್ಯರಿಗೆ ಮಾಹಿತಿ ಒದಗಿಸಲಾಗುವುದು ಎಂದರು.
ಕೆಡಿಪಿ ಸದಸ್ಯರಾದ ಜ್ಯೋತಿ, ಸುಹಿಲ್ ಪಾಷ, ನವೀನ್, ಆಡಳಿತ ವೈದ್ಯಾಧಿಕಾರಿ ಡಾ.ಸುಧಾ ಇದ್ದರು.