ಮರಿಯಮ್ಮನಹಳ್ಳಿ: ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀಆಂಜನೇಯಸ್ವಾಮಿಯ ಅಪರೂಪದ ಜೋಡಿ ರಥೋತ್ಸವ ಬುಧವಾರ ಸಂಜೆ ಮರಿಯಮ್ಮನಹಳ್ಳಿಯಲ್ಲಿ ಅತ್ಯಂತ ಶ್ರದ್ದಾ-ಭಕ್ತಿಯಿಂದ ಮತ್ತು ಸಡಗರ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆಯಿತು.
ಈ ವರ್ಷ ವಿಶೇಷವಾಗಿ ದೇವಸ್ಥಾನದಲ್ಲಿ ಮತ್ತು ದೇವಸ್ಥಾನದ ಸುತ್ತಲೂ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಮುಂದೆ ಹೂವಿನ ತೋರಣದಲ್ಲಿ ಲಕ್ಷ್ಮೀನಾರಾಯಣಸ್ವಾಮಿ, ಆಂಜನೇಯಸ್ವಾಮಿ ಎಂದು ಹೂವುಗಳಲ್ಲಿ ಬರೆಯಲಾಗಿತ್ತು. ಮತ್ತು ದೇವಸ್ಥಾನದ ಆವರಣದಲ್ಲಿ ಮತ್ತು ಕಂಬಗಳಿಗೆ ವಿವಿಧ ಹೂವುಗಳಿಂದ ಶೃಂಗರಿಸಲಾಗಿತ್ತು. ದೇವಸ್ಥಾನದ ದ್ವಾರಭಾಗಿಲೂ ಹೂವಿನ ತೋರಣ ಹಾಕಲಾಗಿತ್ತು.ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ತಮ್ಮ ಕುಟುಂಬದ ಸದಸ್ಯರೊಂದಿಗೆ ದೇವರ ದರ್ಶನ ಪಡೆದುಕೊಳ್ಳಲು ಸಾಲುಗಟ್ಟಿನಿಂತು ದೇವರ ದರ್ಶನ ಪಡೆದುಕೊಂಡರು. ಮಧ್ಯಾಹ್ನ ಮಡಿ ತೇರನ್ನು ಒಂದು ಕಡೆ ಬ್ರಾಹ್ಮಣರು ಮತ್ತು ಮತ್ತೊಂದು ಕಡೆ ವೈಶ್ಯರು (ಶೆಟ್ಟರು) ರಥೋತ್ಸವದ ಗಾಲಿಗಳನ್ನು ಮುಂದಕ್ಕೆ ಚಲಿಸುವಂತೆ ಗಾಲಿಗೆ ಸನ್ನೆ ಹಾಕಿ ಮತ್ತು ರಥೋತ್ಸವದ ಹಗ್ಗ ಹಿಡುದು ರಥೋತ್ಸವ ಎಳೆದು ಸಂಭ್ರಮಿಸಿದರು.
ಸಂಜೆ ಸಾರ್ವಜನಿಕರು ಮತ್ತು ಭಕ್ತರು ಭಕ್ತಿಯಿಂದ ರಥೋತ್ಸವನ್ನು ಎಳೆಯುತ್ತಿದ್ದಂತೆ ರಥೋತ್ಸವದ ಗಾಲಿಗಳು ಮುಂದಕ್ಕೆ ಸಾಗುತ್ತಿದ್ದಂತೆ ಲಕ್ಷಾಂತರ ಜನರು ಸೇರಿದ್ದ ಭಕ್ತರು ಶ್ರೀಲಕ್ಷ್ಮೀನಾರಾಯಣಸ್ವಾಮಿ ಮತ್ತು ಶ್ರೀಆಂಜನೇಯಸ್ವಾಮಿ ರಥೋತ್ಸವಕ್ಕೆ ಸರವೇಗದಲ್ಲಿ ಹೂವು, ಬಾಳೆ ಹಣ್ಣು ಎಸೆದು ದೇವರಗೆ ಕೈ ಮುಗಿದರು.ಎರಡು ರಥಗಳನ್ನು ಎಳೆದುಕೊಂಡು ಹೋಗಿ ಮತ್ತೆ ರಥಗಳನ್ನು ಮೊದಲಿದ್ದ ಸ್ಥಳಕ್ಕೆ ಎಳೆದು ತಂದು ನಿಲ್ಲಿಸಲಾಯಿತು.
ಪೈಲ್ವಾನರು ಬಿಳಿ ಬನೀನು ಮತ್ತು ನಿಕ್ಕರ್ ಮೇಲೆ ಟವಲ್ ಸುತ್ತಿಕೊಂಡು ಒಂದೇ ವಯಸ್ಸಿನ ಯುವಕರು ರಥೋತ್ಸವಕ್ಕೆ ಸೆನ್ನೆ ಹಾಕಲು ಉತ್ಸುಕರಾಗಿ ಕೇಕೆ ಹಾಕುತ್ತಾ, ರಥದ ಗಾಲಿಗಳು ಮುಂದೆ ಹೋಗಲು ಕೇಕೆ ಹಾಕುತ್ತಾ ರಥ ಮುಂದೆ ಸಾಗುವಂತೆ ಕಾರ್ಯನಿರ್ವಹಿಸಿದರು.
ರಥೋತ್ಸವದಲ್ಲಿ ನಂದಿಕೋಲು, ಕಹಳೆ, ಹಲಗೆ, ಜಾಗಟಿ, ಗಂಟೆ ಶಂಕುನಾದ ಸೇರಿದಂತೆ ಇತರೆ ವಾಧ್ಯಗಳ ಧ್ವನಿ ಮೊಳಗಿದವು.ಲಕ್ಷ್ಮೀನಾರಾಯಣಸ್ವಾಮಿ ರಥದ ಪಟದ ಹಾರಜನ್ನು ಅಯ್ಯನಹಳ್ಳಿಯ ಗಂಗಣ್ಣ ₹3 ಲಕ್ಷಕ್ಕೆ ಮತ್ತು ಆಂಜನೇಯಸ್ವಾಮಿ ರಥದ ಪಟವನ್ನು ಅಯ್ಯನಹಳ್ಳಿ ನಾಗರಾಜ ₹5 ಲಕ್ಷದ 5 ಸಾವಿರ ರು.ಗೆ ಪಟ ಹರಾಜು ಮಾಡಿ ಭಕ್ತಿ ಸಮರ್ಪಿಸಿದರು.
ರಥೋತ್ಸವಕ್ಕೆ ಬಂದ ಜನರಿಗೆ ಅಪ್ಪು ಅಭಿಮಾನಿಗಳ ಬಗಳದವರು ಮತ್ತು ಕಿಚ್ಚ ಸುದೀಪ ಅಭಿಮಾನಿಗಳ ಬಳಗದವರು ಸೇರಿದಂತೆ ಸ್ಥಳೀಯ ಕೆಲ ಸಂಘ-ಸಂಸ್ಥೆಗಳು ಮಜ್ಜಿಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರು.