ಮಲೆನಾಡಿಗೆ ಕಂಟಕವಾಗಿದೆ ಭೂಮಿ, ಗುಡ್ಡ ಕುಸಿತ

KannadaprabhaNewsNetwork |  
Published : Jun 23, 2025, 11:47 PM IST
ೇ್ | Kannada Prabha

ಸಾರಾಂಶ

ಶೃಂಗೇರಿ, ಕೇರಳದ ವಯನಾಡು, ಉತ್ತರ ಕನ್ನಡ, ಕೊಡಗು, ದಕ್ಷಿಣ ಕನ್ನಡ, ಚಾರ್ಮಡಿ ಘಾಟ್, ಆಗುಂಬೆ ಘಾಟ್, ಶಿರಾಡಿ ಘಾಟ್ ಸೇರಿದಂತೆ ಹಲವೆಡೆ ಭೂಕುಸಿತ, ಗುಡ್ಡಕುಸಿತದ ಘಟನೆಗಳು ನಡೆದಿದೆ. ಆದರೆ ಮಲೆನಾಡಿನಲ್ಲಿಯೂ ಕಳೆದ ವರ್ಷದಿಂದ ಭಾರೀ ಮಳೆಗೆ ಅಲ್ಲಲ್ಲಿ ರಸ್ತೆ ಕುಸಿತ, ಭೂಕುಸಿತಗಳು ಆರಂಭಗೊಂಡಿದ್ದು ರಸ್ತೆ, ಮನೆ, ಸೇತುವೆಗಳು ಅಪಾಯದಂಚಿಗೆ ಸಿಲುಕಿ ಸ್ಥಳಿಯ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.

- ಮಳೆ ಸುರಿಯುತ್ತಿದ್ದರೂ, ನಿಂತರೂ ಕುಸಿತ ಮಾತ್ರ ನಿರಂತರ । ಜನರ ಬದುಕಿನ ಮೇಲೆ ಬರೆ

ನೆಮ್ಮಾರ್ ಅಬೂಬಕರ್.

ಕನ್ನಡಪ್ರಭವಾರ್ತೆ, ಶೃಂಗೇರಿ

ಕೇರಳದ ವಯನಾಡು, ಉತ್ತರ ಕನ್ನಡ, ಕೊಡಗು, ದಕ್ಷಿಣ ಕನ್ನಡ, ಚಾರ್ಮಡಿ ಘಾಟ್, ಆಗುಂಬೆ ಘಾಟ್, ಶಿರಾಡಿ ಘಾಟ್ ಸೇರಿದಂತೆ ಹಲವೆಡೆ ಭೂಕುಸಿತ, ಗುಡ್ಡಕುಸಿತದ ಘಟನೆಗಳು ನಡೆದಿದೆ. ಆದರೆ ಮಲೆನಾಡಿನಲ್ಲಿಯೂ ಕಳೆದ ವರ್ಷದಿಂದ ಭಾರೀ ಮಳೆಗೆ ಅಲ್ಲಲ್ಲಿ ರಸ್ತೆ ಕುಸಿತ, ಭೂಕುಸಿತಗಳು ಆರಂಭಗೊಂಡಿದ್ದು ರಸ್ತೆ, ಮನೆ, ಸೇತುವೆಗಳು ಅಪಾಯದಂಚಿಗೆ ಸಿಲುಕಿ ಸ್ಥಳಿಯ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.

ಮಲೆನಾಡಿನಲ್ಲಿ ಹಿಂದಿನಿಂದಲೂ ಮಳೆ ಗಾಳಿ ಅಬ್ಬರ ಮಾಮೂಲು. ನೆರೆ ಪ್ರವಾಹಗಳು ಸಹಜ ಲಕ್ಷಣ. ಆದರೀಗ ಭೂಕುಸಿತ ,ಹಾಗೂ ಬದುಕಿಗೆ ಬರೆ ಎಳೆಯುತ್ತಿದೆ.

ಮಂಗಳೂರು, ಶಿವಮೊಗ್ಗ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ಶೃಂಗೇರಿ ಆನೆಗುಂದದಿಂದ ನೆಮ್ಮಾರು ತನಿಕೋಡು ವರೆಗೂ ತುಂಗೆ ದಡದಲ್ಲಿ ಭೂಕುಸಿತ, ಗುಡ್ಡಕುಸಿತ ನಿರಂತರವಾಗಿದೆ. ಈ ಮಾರ್ಗದಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಜೆಸಿಬಿ ಯಂತ್ರಗಳಿಂದ ರಸ್ತೆಯಂಚಿನ ಗುಡ್ಡಗಳನ್ನು ಕೊರೆದು ರಸ್ತೆ ಅಗಲೀಕರಣ ಮಾಡುತ್ತಿದ್ದರೆ ಇನ್ನೊಂದೆಡೆ ಮಳೆಗೆ ಗುಡ್ಡವೇ ಜಾರುತ್ತಿದೆ.

ಕಳೆದೆರೆಡು ವರ್ಷಗಳ ಹಿಂದೆ ಶೃಂಗೇರಿ, ಆಗುಂಬೆ, ಉಡುಪಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ನೇರಳಕೊಡಿಗೆ ಬಳಿ ಭೂಮಿ ಕುಸಿದು ರಸ್ತೆ ಸಂಪರ್ಕ ಬಂದ್ ಆಗಿತ್ತು. ರಸ್ತೆಯೇ ಕುಸಿದು ಕಂದಕ ಉಂಟಾಗಿತ್ತು. ರಾತ್ರೋ ರಾತ್ರಿ ನಡೆದ ಬೃಹತ್ ಭೂ ಕುಸಿತದ ಸದ್ದಿಗೆ ಸುತ್ತಮುತ್ತಲ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಕೊಪ್ಪ ಶೃಂಗೇರಿ ಸಂಪರ್ಕ ಕಲ್ಪಿಸುವ ಆನೆಗುಂದ ರಾಷ್ಟ್ರೀಯ ಹೆದ್ದಾರಿ ಬಳಿಯೂ ಕಳೆದ ವರ್ಷ ಭಾರೀ ಮಳೆಗೆ ಗುಡ್ಡಕುಸಿದು ರಸ್ತೆಯ ಮೇಲೆ ಬೀಳುತ್ತಿದ್ದರಿಂದ ಕೆಲ ಮನೆಗಳು ಸೇರಿದಂತೆ ಇಡೀ ಗುಡ್ಡವೇ ಅಪಾಯದಂಚಿಗೆ ಸಿಲುಕಿತ್ತು. ಈಗಲೂ ಉಳುವೆ, ಆನೆಗುಂದ ಪ್ರದೇಶಗಳಲ್ಲಿ ಗುಡ್ಡಕುಸಿತ ಮುಂದುವರೆದಿದೆ.

ಶೃಂಗೇರಿ ಮಂಗಳೂರು ಸಂಪರ್ಕ ಕಲ್ಪಿಸುವ ಸಾಲ್ಮರ, ತನಿಕೋಡು ವರೆಗೂ ಅಲ್ಲಲ್ಲಿ ಗುಡ್ಡ ಕುಸಿಯುತ್ತಿದೆ. ತುಂಗಾ ನದಿಯ ದಡದಲ್ಲಿ ಭೂಕುಸಿತಗಳು ಉಂಟಾಗುತ್ತಿದೆ. ನಿತ್ಯ ಸಂಚಾರಿಗಳ ಪಾಲಿಗೆ ಮರಣಗಂಟೆ ಬಾರಿಸುತ್ತಿದೆ. ವಾಹನಗಳು ನಿಯಂತ್ರಣ ತಪ್ಪಿ ಹೊಂಡಕ್ಕುರುಳುತ್ತಿವೆ. ಇನ್ನು ಗುಡ್ಡಕುಸಿದು ರಸ್ತೆಯತ್ತ ಜಾರಿ ಬೀಳುತ್ತಿದೆ. ಕಳೆದೆರೆಡು ವರ್ಷಗಳ ಹಿಂದೆ ತನಿ ಕೋಡು ಬಳಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದಾಗ ಗುಡ್ಡಕುಸಿದು ರಸ್ತೆ ಮೇಲೆ ಬಿದ್ದ ಪರಿಣಾಮ ಓರ್ವ ಕಾರ್ಮಿಕ ಮಣ್ಣೊಳಗೆ ಸಿಲುಕಿ ದಾರುಣವಾಗಿ ಸ್ಥಳದಲ್ಲೆ ಕೊನೆಯುಸಿರೆಳೆದರೆ,ಇನ್ನೂ 3-4 ಮಂದಿ ಗಂಬೀರವಾಗಿ ಗಾಯಗೊಂಡಿದ್ದರು.

ಕಳೆದ ಕೆಲದಿನಗಳ ಹಿಂದೆ ಸುರಿದ ಭಾರೀ ಮಳೆಗೆ ನೆಮ್ಮಾರು ಸಾಲ್ಮರ ಬಳಿ ಬೃಹತ್ ಗುಡ್ಡ ಕುಸಿದು ರಸ್ತೆಯ ಮೇಲೆಯೇ ಜಾರುತ್ತಿದೆ. ಕೆಲದಿನಗಳ ಹಿಂದೆ ರಾತ್ರಿ ಗುಡ್ಡ ಜಾರಿ ಮಂಗಳೂರು ಶೃಂಗೇರಿ ಸಂಪರ್ಕ ಕಡಿತಗೊಂಡಿತ್ತು. ಮಳೆ ನಿಂತರೂ, ಸುರಿಯುತ್ತಿದ್ದರೂ ಗುಡ್ಡ ಕುಸಿತ, ಭೂಕುಸಿತ ಮಾತ್ರ ನಿರಂತರವಾಗಿದೆ. ಪದೇ ಪದೇ ಗುಡ್ಡ ಕುಸಿಯುತ್ತಿದ್ದರಿಂದ ಮಂಗಳೂರು ಶೃಂಗೇರಿ ಮಾರ್ಗದಲ್ಲಿ ನಾಲ್ಕೈದು ದಿನಗಳ ಕಾಲ ರಾತ್ರಿಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಆದರೀಗ ಮತ್ತೆ ಮಳೆ ಸುರಿಯುತ್ತಿರುವುದರಿಂದ ಗುಡ್ಡ ಕುಸಿಯಲಾರಂಬಿಸಿ ಅಪಾಯದ ಗಂಟೆ ಬಾರಿಸುತ್ತಿದೆ.

ಅಭಿವೃದ್ದಿ ಕಾಮಗಾರಿಗೆ ಜೆಸಿಬಿ ಯಂತ್ರಗಳು ಘರ್ಜಿಸಿದೆಲ್ಲೆಡೆ ಪ್ರಕೃತಿ ಮುನಿಸಿನೊಡನೆ ಗುಡ್ಡ ಕುಸಿತ, ಭೂಕುಸಿತ ಸದ್ದು ಮೊಳಗತೊಡಗಿದೆ. ಗುಡ್ಡ ಸಹಿತ ಗಿಡಮರಗಳು ಧರೆಗುರುಳುತ್ತಿವೆ. ಶೃಂಗೇರಿ ತನಿಕೋಡು ಕೆರೆಕಟ್ಟೆವರೆಗಿನ ರಾ. ಹೆದ್ದಾರಿ ಮಾರ್ಗ ತುಂಗಾ ನದಿ ದಡದಲ್ಲಿಯೇ ಹಾದುಹೋಗುವುದರಿಂದ ಬಹುತೇಕ ಕಡೆಗಳಲ್ಲಿ ಭೂಮಿ ಕುಸಿದು ರಸ್ತೆಯೂ ಅಪಾಯ ದಂಚಿಗೆ ತಲುಪುತ್ತಿದೆ. ಈ ಮಾರ್ಗದುದ್ದಕ್ಕೂ ಸರಣಿ ಅಪಘಾತಗಳೇ ನಡೆಯುತ್ತಿತ್ತು. ಆದರೀಗ ಹೆದ್ದಾರಿ ಅಗಲೀಕರಣ ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡ ಕಸಿದು ರಸ್ತೆಯತ್ತ ಜಾರುತ್ತಿದ್ದು ಇನ್ನಷ್ಟು ಅಪಾಯ ತಂದೊಡ್ಡಿದ್ದೆ. ಇಡೀ ಮಲೆನಾಡಿಗೆ ಕಂಟಕವಾಗಿ ಪರಿಣಮಿಸಿದೆ.

ಉಳುವೆ, ಆನೆಗುಂದ, ನೇರಳಕೊಡಿಗೆ, ಸಾಲ್ಮರ ತನಿಕೋಡುಗಲು ಅಪಾಯಕಾರಿ ವಲಯಗಳಾಗಿದ್ದು, ಪದೇ ಪದೇ ಭೂಮಿ ಕುಸಿತ ಸಂಭವಿಸುತ್ತಿವೆ. ಆದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಈಗಾಗಲೇ ಉತ್ತರ ಕನ್ನಡ, ಕೊಡಗು ಇತರೆ ಪ್ರದೇಶಗಳಲ್ಲಿ ಉಂಟಾದ ಅನಾಹುತಗಳು ಈ ಪ್ರದೇಶಗಳಲ್ಲೂ ಸಂಭವಿಸುವುದರಲ್ಲಿ ಸಂಶಯವಿಲ್ಲ. ಅವ್ಯಾಹತವಾಗಿ ಮಣ್ಣು ತೆಗೆಯುತ್ತಿರುವುದು, ಅವೈಜ್ಞಾನಿಕ ಕಾಮಗಾರಿಗಳೇ ಗುಡ್ಡಕುಸಿತ, ಭೂಮಿ ಕುಸಿತಕ್ಕೆ ಕಾರಣವೆಂದು ಸ್ಥಳೀಯರು ಆರೋಪಿಸುತ್ತಾರೆ. ಇನ್ನಾದರೂ ಸಂಬಂಧಪಟ್ಟವರು ಅವೈಜ್ಞಾನಿಕ ಕಾಮಗಾರಿ ಬಿಟ್ಟು ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಕಂಡುಹಿಡಿದು ಕೊಡಗು, ಉತ್ತರ ಕನ್ನಡಗಳಲ್ಲಿ ಜಿಲ್ಲೆಗಳಲ್ಲಿ ನಡೆದ ಅವಗಡಗಳು ಎಲ್ಲಿಯೂ ಪುನರಾವರ್ತನೆ ಗೊಳ್ಳದಂತೆ ಜನರ ಸುರಕ್ಷತೆ ದೃಷ್ಠಿಯಿಂದ ಮುಂಜಾಗ್ರತೆ ಕ್ರಮ ವಹಿಸಿ ಅಗತ್ಯ ಕ್ರಮ ಕೈಗೊಳ್ಳುವ ಜವಾಬ್ದಾರಿ ಸ್ಥಳೀಯ ಆಡಳಿತ, ಜನಪ್ರತಿನಿಧಿಗಳ ಮೇಲಿದೆ.

23 ಶ್ರೀ ಚಿತ್ರ 1-

ಶೃಂಗೇರಿ ರಾಷ್ಟ್ರೀಯ ಹೆದ್ದಾರಿ 169 ರ ಮಂಗಳೂರು ಶೃಂಗೇರಿ ಸಂಪರ್ಕ ಸಾಲ್ಮರ ಸಮೀಪ ಗುಡ್ಡ ಕುಸಿಯುವ ಹಂತ ದಲ್ಲಿರುವುದು, ಸಮೀಪದಲ್ಲಿ ತುಂಗಾ ನದಿ ಹರಿಯುತ್ತಿರುವುದು.

23 ಶ್ರೀ ಚಿತ್ರ 2-

ಶೃಂಗೇರಿ ತಾಲೂಕಿನಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದ ಮಂಗಳೂರು ಶೃಂಗೇರಿ ಸಂಪರ್ಕ ಸಾಲ್ಮರ ಬಳಿ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ