ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಸಕಲೇಶಪುರ ತಾಲೂಕಿನ ಹೆಗ್ಗದ್ದೆಯ ಅಲ್ಲಲ್ಲಿ ಭೂ ಕುಸಿತ ಆರಂಭವಾಗಿದ್ದು ಅಪಾಯದ ಮಟ್ಟವನ್ನು ಅವಲೋಕಿಸಿದ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಲಘು ವಾಹನಗಳಿಗೆ ಬದಲಿ ಮಾರ್ಗ ತೋರಿಸಲಾಗಿದೆ. ಭಾರಿ ಮಳೆಯಿಂದ ಘನ ವಾಹನಗಳನ್ನು ಹೆದ್ದಾರಿಯಲ್ಲೇ ಸಂಚಾರಕ್ಕೆ ಅನುವು ಮಾಡಿದ್ದು ಲಘು ವಾಹನಗಳನ್ನು ಕಾಡಮನೆ ಎಸ್ಟೇಟ್ ಮೂಲಕ ಹಾದು ಹೋಗಬೇಕಾದ ಅನಿವಾರ್ಯತೆ ಮೂಡಿದೆ.
ಸಕಲೇಶಪುರ ಠಾಣೆ ವ್ಯಾಪ್ತಿಯ ಮಾರನಹಳ್ಳಿ ಪೋಲಿಸರು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪರಿಸ್ಥಿತಿಗೆ ಅನುಗುಣವಾಗಿ ವಾಹನ ಸಂಚಾರವನ್ನು ನಿಭಾಯಿಸುತ್ತಿದ್ದಾರೆ. ಈ ಮಧ್ಯೆ ಹೆದ್ದಾರಿ ಪಾರ್ಶ್ವದ ಬೆಟ್ಟ ಗುಡ್ಡಗಳಲ್ಲಿ ಜರಿತ ಕಂಡು ಬಂದಿದ್ದು, ಅಪಾಯದ ಭೀತಿಯನ್ನು ಎದುರಿಸಿಕೊಂಡೇ ವಾಹನವನ್ನು ಚಲಾಯಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.