ಕೈಲ್ ಮುಹೂರ್ತ ಸಂತೋಷ ಕೂಟ ಕಾರ್ಯಕ್ರಮಕ್ಕೆ ಚಾಲನೆ

KannadaprabhaNewsNetwork |  
Published : Sep 25, 2025, 01:03 AM IST
ಜಾತಿ ಸಮೀಕ್ಷೆ ಸಂದರ್ಭ ಧರ್ಮದ ಕಾಲಂನಲ್ಲಿ ಕೊಡವ ಎಂದು ನಮೂದಿಸಿ-ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಿಯಪ್ಪ ಮನವಿ | Kannada Prabha

ಸಾರಾಂಶ

ಕೊಡವ ಧರ್ಮವನ್ನು ಅಧಿಕೃತಗೊಳಿಸಲು ಸಮೀಕ್ಷೆ ಸಹಕಾರಿಯಾಗಿದೆ ಎಂದು ಪರದಂಡ ಸುಬ್ರಮಣಿ ಕಾವೇರಿಯಪ್ಪ ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕೊಡವ ಧರ್ಮವನ್ನು ಅಧಿಕೃತಗೊಳಿಸಲು ಸಮೀಕ್ಷೆ ಸಹಕಾರಿಯಾಗಿದೆ. ಪ್ರತ್ಯೇಕ ಧರ್ಮದ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಕೊಡವ ಧರ್ಮ ಸ್ಥಾಪನೆ ಬಗ್ಗೆ ಚಿಂತಿಸಬೇಕು. ಹಾಗಾದಾಗ ಸರ್ಕಾರದಿಂದ ಸೌಲಭ್ಯ, ಮೀಸಲಾತಿ, ಸಹಾಯಧನ ಪಡೆಯಲು ಸಾಧ್ಯ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಿಯಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಕೊಡವ ಸಮಾಜದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಕೈಲ್ ಮುಹೂರ್ತ ಸಂತೋಷ ಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊಡವ ಸಮುದಾಯದವರು ಶಿಸ್ತಿನ ಜೀವನಕ್ಕೆ ಹೆಸರಾದವರು. ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿಕೊಂಡು ಹೋಗಬೇಕು ಎಂದರು.ಕಟ್ಟೆಮಾಡು ವಿಚಾರದಲ್ಲಿ ಹಿಂದೂ ಸಮಾಜದ ಸಂಘಟನೆಗಳು ನಮ್ಮ ನೆರವಿಗೆ ಬಂದಿಲ್ಲ. ಅಂದು ಜೊತೆಯಾಗಿದ್ದು ಎಲ್ಲೆಡೆ ನೆಲೆಸಿರುವ ಕೊಡವರು. ನಾವು ಹಿಂದೂ ಆಚರಣೆ ಮಾಡುತ್ತಿದ್ದರೂ ನಮ್ಮ ಗುರುತು ಬೇರೆಯಾಗಿದೆ. ಈ ನಿಟ್ಟಿನಲ್ಲಿ ಕೊಡವ ಧರ್ಮ ಎಂದು ಸಮೀಕ್ಷೆಯಲ್ಲಿ ದಾಖಲಿಸುವುದನ್ನು ವೈಯುಕ್ತಿಕವಾಗಿ ಬೆಂಬಲಿಸುತ್ತೇನೆ ಎಂದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಅವರು, ಹಿಂದೂ ಸಂಪ್ರದಾಯದಂತೆ ಕೊಡವರು ಬದುಕು ನಡೆಸುತ್ತಿದ್ದಾರೆ. ದೇವರ ಪೂಜೆಗಳನ್ನು ನಡೆಸಿಕೊಂಡು ಬಂದಿದ್ದೇವೆ. ಇದೀಗ ಕೆಲವರು ಸಮೀಕ್ಷೆಯ ಧರ್ಮ ಕಾಲಂನಲ್ಲಿ ಕೊಡವ ಎಂದು ಇನ್ನು ಕೆಲವರು ಹಿಂದೂ ಎಂದು ನಮೂದಿಸಲು ಹೇಳುತ್ತಿದ್ದಾರೆ. ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು ಎಂದರು.ಟಿಪ್ಪು ಕೊಡವರ ಮೇಲೆ ಧಾಳಿ ಮಾಡಿದ ಸಂದರ್ಭ ನಮ್ಮ ಪೂರ್ವಜರೊಂದಿಗೆ ಇದ್ದಿದ್ದು ಹಿಂದೂ ಸಮಾಜದವರೇ ಎಂಬುದನ್ನು ಮನಗಾಣಬೇಕು. ರಾಜಕೀಯ ರಹಿತವಾಗಿ ಚರ್ಚೆ ಆಗಬೇಕು ಎಂದು ಅಭಿಮತ ವ್ಯಕ್ತಪಡಿಸಿದ ಅಭಿಮನ್ಯುಕುಮಾರ್, ಕೊಡವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಯುವ ಜನಾಂಗ ಗಂಭೀರವಾಗಿ ಯೋಚಿಸಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೊಚ್ಚೇರ ಎ. ನೆಹರು ಮಾತನಾಡಿ, ಸಮಾಜ ಸದಾ ಚಟುವಟಿಕೆಯಿಂದಿರಬೇಕು. ಕೊಡವರು ಸರ್ಕಾರಿ ಕೆಲಸದ ಬದಲಿಗೆ ಖಾಸಗಿಯತ್ತ ಒಲವು ತೋರುತ್ತಿದ್ದಾರೆ. ಇದು ಸರಿಯಲ್ಲ;ಸರ್ಕಾರಿ ಕೆಲಸ ಪಡೆಯಲು ಪ್ರಯತ್ನ ಪಡಬೇಕು. ಕೊಡವರು ಆಸ್ತಿಯನ್ನು ಮಾರಾಟ ಮಾಡಬಾರದು ಎಂದು ಅಭಿಪ್ರಾಯಿಸಿದರು.

ವೇದಿಕೆಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಬೊಳಂದಂಡ ಕುಟ್ಟಪ್ಪ, ಕಾರ್ಯದರ್ಶಿ ಕೊಚ್ಚೇರ ಅನಿಲ್, ವಿರಾಜಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಕೀತಿಯಂಡ ವಿಜಯಕುಮಾರ್ ಉಪಸ್ಥಿತರಿದ್ದರು.

ನಂತರ ಸಮಾಜ ಬಾಂಧವರಿಗೆ ವಿವಿಧ ಸ್ಪರ್ಧೆಗಳು ನಡೆದವು. ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ