ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಕೆಲ ಮಕ್ಕಳು ಒಂದೇ ವಿಷಯಕ್ಕೆ ಸೀಮಿತವಾಗಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಓದು ಬರಹದ ಜೊತೆಯಲ್ಲಿ ಇತರ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಮಾದಾಪುರ ಚಂದ್ರಮೌಳೇಶ್ವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.ಸಮೀಪದ ಮಾದಾಪುರ ಗ್ರಾಮದ ಚಂದ್ರಮೌಳೇಶ್ವರ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಲವು ವಿದ್ಯಾರ್ಥಿಗಳು ಕೇವಲ ಮೊಬೈಲ್, ಟಿವಿಗೆ ಅಂಟಿಕೊಂಡಿರುತ್ತಾರೆ. ಮತ್ತೆ ಕೆಲ ವಿದ್ಯಾರ್ಥಿಗಳು ಯಾರೊಂದಿಗೂ ಬೆರೆಯದೆ ಒಬ್ಬಂಟಿಯಾಗಿರಲು ಬಯಸುತ್ತಾರೆ. ಅದರೆ ಓದು ಬರಹದ ಜೊತೆಗೆ ಶಾಲೆಯ ಇತರೆ ಚಟುವಟುಕೆಗಳಲ್ಲೂ ಭಾಗವಹಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.ಚಿಕ್ಕಂದಿನಿಂದಲೇ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಬುದ್ಧಿ, ಶಕ್ತಿ, ಧೈರ್ಯ ಹೆಚ್ಚಿ ಭಯ ಹೋಗಲಾಡಿಸಬಹುದು ಎಂದರು.
ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಮನರಂಜಿಸಲು ಭಾಗವಹಿಸುವುದರಿಂದ ನಷ್ಟವಾಗುವುದಿಲ್ಲ, ಇದಕ್ಕೆ ಪೋಷಕರ ಸಹಮತವೂ ಇರಬೇಕಿದೆ ಎಂದು ಹೇಳಿದರು.
ಉದ್ಯೋಗ ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮನೋಸ್ಥೈರ್ಯ ಪ್ರಾಥಮಿಕ ಹಂತದಿಂದಲೇ ಬೆಳೆಸಿಕೊಳ್ಳಕೊಳ್ಳಬೇಕು. ಮೌಲ್ಯ ಶಿಕ್ಷಣ, ನೀತಿ ಶಿಕ್ಷಣವು ಇಂದಿನ ಸಂದರ್ಭದಲ್ಲಿ ಅತ್ಯಮೂಲ್ಯವಾದದ್ದು, ಹಾಲಿನಂತೆ ಶುದ್ಧವಾಗಿರುವ ಮಕ್ಕಳ ಮನಸ್ಸಿನಲ್ಲಿ ಸಾಧನೆ ಮಾಡುವ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಅತೀ ಮುಖ್ಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಭಾಸ್ಕರ್ ಮಾತನಾಡಿ, ಮಾದಾಪುರ ಶಾಲೆಗೆ ಶಾಲಾ ಸಾಮಾಗ್ರಿಗಳು ಅವಶ್ಯವಿದ್ದಲ್ಲಿ, ಮನವಿ ಸಲ್ಲಿಸಿದರೆ ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನೀಡಲಾಗುವುದು, ಶಾಲಾ ಅಭಿವೃದ್ದಿಗೆ ಯೋಜನೆಯ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.ಮಾದಾಪುರ ಗ್ರಾಮದ ಎಂ.ಎಸ್. ಗಿರೀಶ್ ಮೂರ್ತಿ ಮಾತನಾಡಿ, 80ರ ದಶಕದಲ್ಲಿ ಸಂಸ್ಕೃತ ಶಾಲೆಯನ್ನು ಚಂದ್ರಮೌಳೇಶ್ವರ ಸ್ವಾಮೀಜಿ ಆರಂಭಿಸಿದರು. ನಂತರದ ದಿನಗಳಲ್ಲಿ ಶಾಲೆಗಳನ್ನು ಆರಂಭಿಸಿ ತಾಲೂಕಿನಲ್ಲಿಐದು ಗ್ರಾಮಗಳಲ್ಲಿ ಶಾಲೆಗಳನ್ನು ತೆರೆದರು. ಅಂದಿನಿಂದ ಇಲ್ಲಿಯವರೆಗೆ ಎರಡು ಶಾಲೆಗಳು ಸರ್ಕಾರಿ ಅನುದಾನಿತ ಶಾಲೆಗಳಾಗಿ ಮಾರ್ಪಟ್ಟಿವೆ. ಉಳಿದಂತೆ ಪೋಷಕರ, ಶಿಕ್ಷಕರು ಹಾಗೂ ಸ್ವಾಮೀಜಿಗಳಸಹಕಾರದೊಂದಿಗೆ ಶಾಲೆಗಳನ್ನು ಉತ್ತಮ ಮಟ್ಟದಲ್ಲಿ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಪೋಷಕರಿಗಾಗಿನಡೆದ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಾಕ್ರಮ ನಡೆಯಿತು.ಆಡಳಿತ ಮಂಡಳಿ ಸದಸ್ಯ ನಂದೀಶ್, ನಾಗೇಶ್, ಸಿ.ಆರ್.ಪಿ ಮಹೇಶ್, ಶಿವಶಂಕರ್, ಶಿಕ್ಷಕರಾದ ಎಂ.ಎಂ. ಚಂದ್ರಶೇಖರ್, ಎಂ.ಡಿ. ಸುರೇಶ್, ಬಿ. ಪ್ರಕಾಶ್, ಕೆ. ಸಿದ್ದರಾಜು, ಶೋಭಾ, ಶುಭಾ, ವಸಂತಾ, ವಿನುತಾ, ಕುಸುಮಾ, ಸುಹಾಸಿನಿ, ಸಂಜಯ್, ಶಬರಿಕುಮಾರ್, ಪರಶಿವಮೂರ್ತಿ ಇದ್ದರು.