ಕನ್ನಡಪ್ರಭ ವಾರ್ತೆ ಮುಧೋಳ
ನಗರದ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಪ್ರಾಚಾರ್ಯರ ಕೊಠಡಿಯಲ್ಲಿ ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಐಟಿಇಪಿ ಎಂದರೆ ದ್ವಿತೀಯ ಪಿಯುಸಿ ಮುಗಿಸಿದ ತಕ್ಷಣ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಇರುವ 4 ವರ್ಷಗಳ ಪದವಿ ಶಿಕ್ಷಣವಾಗಿದೆ. ದ್ವಿಪದವಿ ಇದರಲ್ಲಿ ಬಿ.ಎ, ಬಿ.ಎಡ್ ಮತ್ತು ಬಿ.ಎಸ್ಸಿ, ಬಿ.ಎಡ್ (ಸೆಕೆಂಡರಿ ಸ್ಟೇಜ್) ಕೋರ್ಸ್ಗಳು ಲಭ್ಯವಿವೆ. ಸಾಮಾನ್ಯ ಪದವಿ ಮತ್ತು ಬಿ.ಎಡ್ ಮಾಡಲು 5 ವರ್ಷ ಬೇಕಾಗುತ್ತಿತ್ತು, ಆದರೆ ಐಟಿಇಪಿ ಮೂಲಕ ವಿದ್ಯಾರ್ಥಿಗಳಿಗೆ ಒಂದು ವರ್ಷ ಉಳಿತಾಯವಾಗಲಿದೆ ಎಂದರು.
ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ್ ಅಥಣಿ ಮಾತನಾಡಿ, 2026ಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳು 2030ರ ವೇಳೆಗೆ ಶಾಲೆಗಳಲ್ಲಿ ಶಿಕ್ಷಕರಾಗಲು ಈ ನಾಲ್ಕು ವರ್ಷಗಳ ಸಂಯೋಜಿತ ಬಿ.ಎಡ್ ಕನಿಷ್ಠ ಅರ್ಹತೆಯಾಗಲಿದೆ. ಎನ್.ಟಿ.ಎ ನಡೆಸುವ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ ಎನ್.ಸಿ.ಇ.ಟಿ ಕಡ್ಡಾಯವಾಗಿದೆ. ಈ ಮೆರಿಟ್ ಆಧಾರದ ಮೇಲೆಯೇ ಕಾಲೇಜುಗಳಲ್ಲಿ ಸೀಟು ಹಂಚಿಕೆ ಮಾಡಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈ ಕೋರ್ಸಿಗೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಈಗಾಗಲೇ ಒಟ್ಟು 11 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಬಿಎಸ್ಸಿ, ಬಿಎಡ್ ಪದವಿಗೆ 50 ವಿದ್ಯಾರ್ಥಿಗಳು ಹಾಗೂ ಬಿ.ಎ, ಬಿಎಡ್ ಪದವಿಗೆ 50 ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಮತಿ ಪಡೆಯಲಾಗಿದೆ ಎಂದರು.ಕಾಲೇಜುಗಳ ಪದನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎನ್.ಗಾಂವಕರ, ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಜರಕುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಾಳೆ ಐಟಿಇಪಿ ಕಾರ್ಯಕ್ರಮಶನಿವಾರ ಸೆ.12 ರಂದು ಬೆಳಿಗ್ಗೆ 10.30ಕ್ಕೆ ನಗರದ ಬಿಜಿಎಮ್ಐಟಿ ಕಾಲೇಜಿನ ಸಭಾಂಗಣದಲ್ಲಿ ಐಟಿಇಪಿ ಕಾರ್ಯಕ್ರಮವನ್ನು ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಲಿದ್ದಾರೆ. ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸುವರು, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಮುಖ್ಯ ಅತಿಥಿ ಸ್ಥಾನವಹಿಸುವರು. ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಕಾಲೇಜುಗಳ ಪದ ನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎನ್.ಗಾಂವಕರ, ಸದಸ್ಯ ಸಿದ್ದರಾಮ ಮನಹಳ್ಳಿ, ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಜರಕುಂಟಿ, ಐಕ್ಯೂಎಸಿ ಸಂಯೋಜಕ ಎ.ಆರ್.ಕಡೂರ ಹಾಗೂ ಐಟಿಇಪಿ ಸಂಯೋಜಕ ಡಾ.ಎಂ.ಕೆ.ಗವಿಮಠ ಉಪಸ್ಥಿತರಿರುವರು.