ಅಗಾಧ ಪ್ರಮಾಣದಲ್ಲಿ ಜಲಾಶಯದ ನೀರು ಸ್ಥಳೀಯ ಪ್ರಾಂತ್ಯದಲ್ಲಿರುವ ಕೆರೆಕಟ್ಟೆಗಳಿಗೆ ದನಕರುಗಳು ಕುಡಿಯುವ ನೀರಿಗೆ ಮತ್ತು ಅಂತರ್ಜಲದ ಪೂರಣಕ್ಕೆ ನೀರು ಹರಿಸದೆ ಕೇವಲ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಯಾವ ನ್ಯಾಯ?
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆತಾಲೂಕಿನ ಅಂತರಸಂತೆಯ ಮುಖ್ಯ ಕೆರೆ ಹಾಗೂ ನೂರಲಕುಪ್ಪೆ ಹುಂಡಿ ಕೆರೆಗೆ ಜಲಾಶಯದಿಂದ ನೀರು ಬಿಡುವಂತೆ ಎನ್.ಪಿ. ಮಧುನೂದನ್ ಹಾಗೂ ವಿಶ್ವನಾಥ್ ಒತ್ತಾಯಿಸಿದ್ದಾರೆ.ತಾಲೂಕಿನ ಮೂರು ಜಲಾಶಯವುಳ್ಳ ಮತ್ತು ಅತಿ ಹೆಚ್ಚು ಕಾಡು ಸಂಪನ್ಮೂಲವುಳ್ಳ ತಾಲೂಕು ಇದಾಗಿದ್ದು, ಸದರಿ ತಾಲೂಕಿನ ಹೆಸರಾಂತ ಕಬಿನಿ ಜಲಾಶಯ ಬೆಂಗಳೂರುನಿಂದ ಹಿಡಿದು ತಮಿಳುನಾಡಿನವರೆಗೂ ಕುಡಿಯುವ ನೀರು ಮತ್ತು ರೈತರ ಬೆಳೆಗಳಿಗೆ ಉಪಯೋಗವಾಗಿರುವ ಒಂದು ದೇವರು ಕೊಟ್ಟ ವರಪ್ರಸಾದ ಎಂದು ಹೇಳಬಹುದು.ಆದರೆ ಅಗಾಧ ಪ್ರಮಾಣದಲ್ಲಿ ಜಲಾಶಯದ ನೀರು ಸ್ಥಳೀಯ ಪ್ರಾಂತ್ಯದಲ್ಲಿರುವ ಕೆರೆಕಟ್ಟೆಗಳಿಗೆ ದನಕರುಗಳು ಕುಡಿಯುವ ನೀರಿಗೆ ಮತ್ತು ಅಂತರ್ಜಲದ ಪೂರಣಕ್ಕೆ ನೀರು ಹರಿಸದೆ ಕೇವಲ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಯಾವ ನ್ಯಾಯ? ಎಂದು ಅವರು ಪ್ರಶ್ನಿಸಿದ್ದಾರೆ.ನಮ್ಮ ಭಾಗದ ಮುಖ್ಯ ಜಲಮೂಲವಾದ ಅಂತರಸಂತೆಯ ಮುಖ್ಯ ಕೆರೆ ಹಾಗೂ ನೂರಲಕುಪ್ಪೆ ಹುಂಡಿ ಕೆರೆಯು ಪ್ರಸ್ತುತ ಸಂಪೂರ್ಣವಾಗಿ ಒಣಗಿಹೋಗಿದೆ. ಮತ್ತು ಹಲವು ಸಣ್ಣ ಕೆರೆ ಕಟ್ಟೆಗಳು ಮಳೆಗಾಲದಲ್ಲಿಯೇ ನೀರು ಇಲ್ಲದೆ ಬತ್ತಿ ಹೋಗಿವೆ. ಈ ಕೆರೆಯು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಜಾನುವಾರುಗಳ ಕುಡಿಯುವ ನೀರಿಗೆ ಪ್ರಮುಖ ಆಧಾರವಾಗಿದೆ. ಹತ್ತಿರದಲ್ಲೇ ಇರುವ ಕಬಿನಿ ಹಾಗೂ ತಾರಕ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಿದ್ದರೂ ಸಹ, ನಮ್ಮ ಕೆರೆಗೆ ನೀರನ್ನು ಹರಿಸುತ್ತಿಲ್ಲ.ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನೀರಿಲ್ಲದೆ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ ಹಾಗೂ ಕುಡಿಯುವ ನೀರಿಗಾಗಿ ಜನಸಾಮಾನ್ಯರು ಪರದಾಡುವಂತಾಗಿದೆ. ಜಲಾಶಯದಲ್ಲಿ ನೀರಿದ್ದರೂ ಸ್ಥಳೀಯ ಕೆರೆಯನ್ನು ನಿರ್ಲಕ್ಷಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಆದ್ದರಿಂದ ಜಲಸಂಪನ್ಮೂಲ ಇಲಾಖೆ ಹಾಗೂ ಜಿಲ್ಲಾಡಳಿತವು ತಕ್ಷಣವೇ ಎಚ್ಚೆತ್ತುಕೊಂಡು ಜಲಾಶಯದಿಂದ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.--------------eom/mys/lss/