ಆನಂದ್ ಎಂ. ಸೌದಿ
ದಿಟ್ಟ, ಪ್ರಾಮಾಣಿಕ ಹಾಗೂ ತಾಂತ್ರಿಕ ನೈಪುಣ್ಯತೆ ಹೊಂದಿರುವ ಐಎಎಸ್ ಅಧಿಕಾರಿಗಳ ಪಟ್ಟಿ ತಯಾರಿಸಿರುವ ಸರ್ಕಾರ, ಕರ್ನಾಟಕ ಲೋಕಸೇವಾ ಆಯೋಗದಲ್ಲಿನ (ಕೆಪಿಎಸ್ಸಿ) ಕರ್ಮಕಾಂಡಕ್ಕೆ ತಡೆ ಹಾಕಲು ಮುಂದಾದಂತಿದೆ. ಯಾದಗಿರಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ, 2020ರ ಬ್ಯಾಚಿನ ಐಎಎಸ್ ಅಧಿಕಾರಿ ಲವೀಶ್ ಒರಡಿಯಾ ಅವರನ್ನು ಜಂಟಿ ಪರೀಕ್ಷಾ ನಿಯಂತ್ರಕರಾಗಿ (Joint Controller Of Examination) ವರ್ಗಾಯಿಸಿ, ಆದೇಶಿಸಿದೆ.
ಎರಡು ವರ್ಷಗಳ ಕಾಲ ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಾರ್ಯನಿರ್ವಹಿಸಿದ್ದ ಲವೀಶ್, ಇಲ್ಲಿನ ಜನಮಾನಸದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು. ನರೇಗಾ ಕಾಮಗಾರಿಗಳು ನೈಜ ಕೂಲಿ ಕಾರ್ಮಿಕರಿಗೆ ದೊರೆಯಲಿ ಎಂಬ ಕಾರಣಕ್ಕೆ ಹಳ್ಳಿಹಳ್ಳಿಗಳಲ್ಲಿ ನಿರಂತರ ಸುತ್ತಾಡಿ, ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳ ಕೊರತೆ ನೀಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನಿಸಿದವರು.ಇಲಾಖೆಯ ವಿವಿಧೆಡೆ ಅಕ್ರಮಗಳು ಕಂಡುಬಂದಾದ, ಪ್ರಭಾವಿಗಳ ಒತ್ತಡಕ್ಕೂ ಮಣಿಯದೆ, ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತಿದ್ದರಲ್ಲದೆ, ಹತ್ತಾರು ಪ್ರಕರಣಗಳಲ್ಲಿ ಭ್ರಷ್ಟರ ಹುಟ್ಟಡಗಿಸಿದ್ದರು. ತಂತ್ರಜ್ಞಾನ ಪರಿಣಿತರಾದ ಇವರು, ನಕಲಿ ಹಾಜರಾತಿ ಮೂಲಕ ಸರ್ಕಾರಕ್ಕೆ ವಂಚಿಸುತ್ತಿದ್ದ 80ಕ್ಕೂ ಹೆಚ್ಚು ಪಿಡಿಓಗಳ ಅಕ್ರಮ ಪತ್ತೆ ಹಚ್ಚಿ, ಕ್ರಮ ಕೈಗೊಂಡವರು. ಲವೀಶ್ ಕಠಿಣ ಕ್ರಮಕ್ಕೆ ಬೆಚ್ಚಿಬಿದ್ದ ಅಕ್ರಮಕೋರರ ತಂಡ ಇವರ ವರ್ಗಾವಣೆಗೆ ಭಾರೀ ಪ್ರಯತ್ನ ನಡೆಸಿತ್ತೆನ್ನಲಾಗಿದೆ.
ಕೋಟಿ ರುಪಾಯಿ ಸಂಬಳ ನೌಕರಿ ಬಿಟ್ಟು ಸ್ವದೇಶಕ್ಕೆ ಬಂದ ಲವೀಶ್ : ರಾಜಸ್ತಾನದ ಉದಯಪುರ ಮೂಲದ ಮಧ್ಯಮವರ್ಗ ಕುಟುಂಬದ 33 ವರ್ಷ ವಯಸ್ಸಿನ ಲವೀಶ್, ಐಐಟಿ ಮುಂಬೈನ ಮೆಕ್ಯಾನಿಕಲ್ ಎಂಜಿನೀಯರಿಂಗ್ ಪದವೀಧರರು. ಅಮೇರಿಕದ ಟೆಕ್ಸಾನನಲ್ಲಿನ ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಕಂಪನಿಯಲ್ಲಿ ಕೋಟ್ಯಂತರ ರುಪಾಯಿಗಳ ಸಂಬಳ ತೊರೆದು, ಸಿವಿಲ್ ಸರ್ವೀಸ್ ಪರೀಕ್ಷೆ ಬರೆದು, 2019ರಲ್ಲಿ ಯುಪಿಎಸ್ಸಿಯಲ್ಲಿ ಮೊದಲ ಯತ್ನದಲ್ಲೇ ರಾಷ್ಟ್ರಮಟ್ಟದಲ್ಲಿ 18ನೇ ಸ್ಥಾನ ಗಿಟ್ಟಿಸಿಕೊಂಡವರು. ಅಮೇರಿಕದಲ್ಲಿ ಶೆಲ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಲ್ಲಿ ಜಾಗತಿಕ ತೈಲ ಮತ್ತು ಅನಿಲ ವ್ಯವಹಾರದ ಕಾರ್ಯಾಚರಣೆಗಳಿಗೆ ಬೆಂಬಲವಾಗಿ ಕಾರ್ಯನಿರ್ವಹಿಸಿದ್ದಾರೆ.