2029 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು, ರಾಹುಲ್ ಗಾಂಧಿ‌ ಅವರು ಪ್ರಧಾನಿಯಾಗಲೇಬೇಕು. ಕೇಂದ್ರದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬರುತ್ತದೆ. ಹೀಗಾಗಿ ಎಸ್‌ಐಆರ್ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಎಚ್ಚರಿಕೆ ವಹಿಸಿ ಕನಿಷ್ಠ 50 ಲಕ್ಷ ಮತದಾರರನ್ನು ವಾಪಸ್ ಸೇರಿಸುವ ಕೆಲಸ‌ ಮಾಡಿದರೆ ಉತ್ತಮ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು‌ ಎಂದು‌‌ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದರು.

ತುಮಕೂರಿನ ಅಗಳಕೋಟೆಯ ಡಾ. ಎಚ್.ಎಂ.ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಎಸ್‌ಐಆರ್: ಇದು ಮತದಾರರ ಪಟ್ಟಿ ಪರಿಷ್ಕರಣೆಯಲ್ಲ, ಮತಾಧಿಕಾರ ಹರಣ ಕುರಿತ ಕಾರ‍್ಯಾಗಾರದಲ್ಲಿ ಮಾತನಾಡಿದರು. ಮತದಾನದ ಹಕ್ಕು ಕಳೆದುಕೊಂಡರೆ ಸರ್ಕಾರದ ಸವಲತ್ತುಗಳು ಸಿಗುವುದಿಲ್ಲ ಎಂದ ಅವರು‌ ಅಹಿಂದ ವರ್ಗ ಮತ್ತೆ ಸಂಕಷ್ಟಕ್ಕೆ ಸಿಲುಕಿಕೊಳ್ಳಬಾರದು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಹೇಳಿದರು.

ಶೇ.50ರಷ್ಟು ಜನರಿಗೆ ಮಾತ್ರ ಎಸ್‌ಐಆರ್‌ ಮಹತ್ವ ಅರ್ಥವಾಗಿದೆ. ಎಸ್‌ಐಆರ್‌ ಪ್ರಕ್ರಿಯೆಯನ್ನು ಪ್ರಾಮಾಣಿಕವಾಗಿ ನಡೆಸುವಂತೆ ಮುಖ್ಯಮಂತ್ರಿ ಪ್ರತಿ ಸಭೆಯಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.

ಲಕ್ಷಾಂತರ ಇನ್ಯೂಮರೇಶನ್‌ ಫಾರ್ಮ್ ಗಳನ್ನು ಭರ್ತಿ ಮಾಡಿ ವಾಪಸ್‌ ಕೊಟ್ಟಿಲ್ಲ. ಪಶ್ಚಿಮ ಬಂಗಾಳದಲ್ಲಿ 97 ಲಕ್ಷ ಮತದಾರರನ್ನು ಬಿಟ್ಟಿದ್ದಕ್ಕೆ, ಮಮತಾ ಬ್ಯಾನರ್ಜಿ ಅವರ ಪಕ್ಷ ಸೋಲನ್ನು ಅನುಭವಿಸಿತು. ಎಸ್‌ಐಆರ್‌ನ ಗಾಂಭೀರ‍್ಯತೆ ಈಗ ಅರ್ಥವಾಗುವುದಿಲ್ಲ. ಕೆಲವು ಸಮುದಾಯಗಳನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕುವುದು ಅಷ್ಟರ ಮಟ್ಟಿಗೆ ಸಾಧ್ಯವಾಗಿಲ್ಲ‌. ಕಾಂಗ್ರೆಸ್ ಪಕ್ಷಕ್ಕೆ ಬರುವ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಬಿಜೆಪಿ ಉದ್ದೇಶ ಯಶಸ್ವಿಯಾಗಿಲ್ಲ. ಆದಾಗ್ಯೂ 1.7 ಕೋಟಿ ಮತದಾರರು ಲೆಕ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದರು.

ನೋಟಿಸ್ ಬಂದಿರುವವರು ಫಾರ್ಮಗಳನ್ನು ಭರ್ತಿ ಮಾಡಿ ಕೊಡಬೇಕು. ಈ ಪ್ರಕ್ರಿಯೆ ಆಗದೆ ಹೋದರೆ ಮತದಾರರ ಪಟ್ಟಿಯಿಂದ ಶಾಶ್ವತವಾಗಿ ನಿಮ್ಮನ್ನು ಕೈಬಿಡುವ ಸಾಧ್ಯತೆ ಇರುತ್ತದೆ. ಎಸ್‌ಐಆರ್ ಪ್ರಕ್ರಿಯೆಯ ತೊಂದರೆಯಲ್ಲಿ ಸಿಲುಕಿಕೊಳ್ಳುವುದು ಬೇಡ. ಮತದಾನದ ಹಕ್ಕು ಕಳೆದುಕೊಂಡರೆ ಸರ್ಕಾರದ ಸವಲತ್ತುಗಳು ಸಿಗುವುದಿಲ್ಲ. ಇದನ್ನು ಮನಸ್ಸಲ್ಲಿಟ್ಟುಕೊಂಡು ಕೆಲಸ‌ ಮಾಡಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

2029 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು, ರಾಹುಲ್ ಗಾಂಧಿ‌ ಅವರು ಪ್ರಧಾನಿಯಾಗಲೇಬೇಕು. ಕೇಂದ್ರದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬರುತ್ತದೆ. ಹೀಗಾಗಿ ಎಸ್‌ಐಆರ್ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಎಚ್ಚರಿಕೆ ವಹಿಸಿ ಕನಿಷ್ಠ 50 ಲಕ್ಷ ಮತದಾರರನ್ನು ವಾಪಸ್ ಸೇರಿಸುವ ಕೆಲಸ‌ ಮಾಡಿದರೆ ಉತ್ತಮ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಯಾರೇ ವಹಿಸಿಕೊಳ್ಳಲಿ, ನಮಗೆ ಮುಖ್ಯವಾಗಿ ಪಕ್ಷ ಉಳಿಯಬೇಕು. ಪಕ್ಷ ಉಳಿದರೆ ಬಡವರು, ಶೋಷಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಅನುಕೂಲವಾಗುತ್ತದೆ. ಅಹಿಂದ ವರ್ಗ ಮತ್ತೇ ಕಷ್ಟಕ್ಕೆ ಸಿಲುಕಿಕೊಳ್ಳಬಾರದು ಎಂಬುದೇ ನಮ್ಮ ಉದ್ದೇಶ ಎಂದು ಹೇಳಿದರು.