ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ: ಗೋವಿಂದ ಕಾರಜೋಳ

KannadaprabhaNewsNetwork |  
Published : Apr 07, 2025, 12:30 AM IST
7ಎಚ್‌ಪಿಟಿ4- ಹೊಸಪೇಯಲ್ಲಿ ಭಾನುವಾರ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರು ಶ್ರೀರಾಮ ನವಮಿ ನಿಮಿತ್ತ ನಡೆದ ಪೂಜೆಯಲ್ಲಿ ಭಾಗಿಯಾದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹೆಚ್ಚಾಗಿದೆ. ಅವರ ಕಿರುಕುಳಕ್ಕೆ ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ವಿಧಾನಸಭೆಯಲ್ಲಿ 75 ವರ್ಷದ ಇತಿಹಾಸದಲ್ಲಿ ನಾಚಿಕೆಯಾಗುವಂತಹ ಸಂಗತಿಗಳು ಚರ್ಚೆಯಾದವು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.

ಹೊಸಪೇಟೆ: ರಾಜ್ಯದಲ್ಲಿ ಆಡಳಿತ, ಕಾನೂನು ಸುವ್ಯವಸ್ಥೆ ಸರಿ ಇಲ್ಲ, ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ದೂರಿದರು.

ನಗರದ ರಾಣಿಪೇಟೆ ಪ್ರದೇಶದಲ್ಲಿ ಭಾನುವಾರ ಬಿಜೆಪಿ ಸಂಸ್ಥಾಪನಾ ದಿನ ಮತ್ತು ರಾಮನವಮಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹೆಚ್ಚಾಗಿದೆ. ಅವರ ಕಿರುಕುಳಕ್ಕೆ ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ವಿಧಾನಸಭೆಯಲ್ಲಿ 75 ವರ್ಷದ ಇತಿಹಾಸದಲ್ಲಿ ನಾಚಿಕೆಯಾಗುವಂತಹ ಸಂಗತಿಗಳು ಚರ್ಚೆಯಾದವು. ಹನಿಟ್ರ್ಯಾಪ್, ಸಿಡಿ, ಪೆನ್‌ಡ್ರೈವ್ ಇಂತಹ ವಿಚಾರಗಳು ಚರ್ಚೆಯಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವಯುತವಾಗಿ ರಾಜೀನಾಮೆ ಕೊಟ್ಟು ಜನರ ಕ್ಷಮೆ ಕೇಳಬೇಕಾಗಿತ್ತು. ಆದರೆ, ಅಧಿಕಾರದ ಆಸೆಗೆ ಕುರ್ಚಿಗೆ ಅಂಟಿಕೊಂಡು ಕೂತಿದ್ದಾರೆ ಎಂದರು.

ವಿನಯ್ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಕಾರ್ಯಕರ್ತ ಎನ್ನುವ ಕಾರಣಕ್ಕೆ ಇಬ್ಬರು ಶಾಸಕರು ದೌರ್ಜನ್ಯ ಮಾಡಿದ್ದಾರೆ ಎಂದು ಪತ್ರದಲ್ಲಿ ಬರೆದಿಟ್ಟಿದ್ದಾರೆ. ಅದರ ಪ್ರಕಾರ ಇಬ್ಬರು ಶಾಸಕರು ಆರೋಪಿಗಳು. ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಮಾಡಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಲೆ ಏರಿಕೆ ಪ್ರತಿಭಟನೆಯಲ್ಲಿ ಜೆಡಿಎಸ್ ಅಂತರ ಕಾಯ್ದುಕೊಂಡಿಲ್ಲ. ಅವರೂ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಈ ಕುರಿತು ಹೇಳಿಕೆ ನೀಡಿದ್ದಾರೆ ಎಂದರು.

ಬಿಜೆಪಿ ವಿಶ್ವದ ದೊಡ್ಡ ಪಕ್ಷ: ಬಿಜೆಪಿ ದೇಶದಲ್ಲಿ ಅತಿ ಚಿಕ್ಕ ಪಕ್ಷವಾಗಿ ಸಂಘಟನೆಗೊಂಡು ಈಗ ವಿಶ್ವದ ಏಕೈಕ ದೊಡ್ಡ ಪಕ್ಷವಾಗಿ ಬೆಳೆದಿದೆ. ಪಕ್ಷ ಕಟ್ಟಿ ಬೆಳೆಸಿದವರಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ. ಆಡ್ವಾಣಿ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ರಾಜ್ಯಗಳ ಪಕ್ಷದ ನಾಯಕರು, ಸಂಘದ ಪ್ರಮುಖರ ಶ್ರಮದಿಂದ ಬಿಜೆಪಿ ಪ್ರಪಂಚದ ಏಕೈಕ ದೊಡ್ಡ ಪಕ್ಷವಾಗಿದ್ದು, 12 ಕೋಟಿ ಸದಸ್ಯರಿದ್ದಾರೆ ಎಂದರು.

ಬಿಜೆಪಿಗೆ ಕೀರ್ತಿ ಶ್ರೇಯಸ್ಸು ತಂದವರು ನಮ್ಮ ನಾಯಕರು. ಸಂಸ್ಥಾಪನಾ ದಿನವನ್ನು ಹಬ್ಬದ ರೀತಿ ದೇಗುಲಗಳಲ್ಲಿ ಪೂಜೆ ಮಾಡಿ ಆಚರಿಸುತ್ತಿದ್ದಾರೆ. ಯಾವುದೇ ಪಕ್ಷಗಳು ಬಿಜೆಪಿಗೆ ಸರಿಸಾಟಿಯಾಗದಂತೆ ಜನರು ಆಶೀರ್ವದಿಸಿದ್ದಾರೆ ಎಂದರು.

ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಮೇಟಿ, ಮುಖಂಡ ಬಲ್ಲಾಹುಣ್ಸಿ ರಾಮಣ್ಣ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ : ಪತ್ರಕರ್ತ ವಶ
ಪೊಲೀಸ್ ವಾಹನದಲ್ಲಿ ಕುಡುಕರು ಮನೆಗೆ : ವ್ಯವಸ್ಥೆಗೆ ಆಕ್ಷೇಪ