ಮೂವರು ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಿಗೆ ವಾಟ್ಸ್‌ಆ್ಯಪ್‌ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಮೇಲೆ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತನೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು : ಮೂವರು ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಿಗೆ ವಾಟ್ಸ್‌ಆ್ಯಪ್‌ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಮೇಲೆ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತನೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪತ್ರಕರ್ತ ಶರತ್‌ ಶರ್ಮಾ ಕಲಾಗಾರು ಬಂಧಿತ ಆರೋಪಿ

ಪತ್ರಕರ್ತ ಶರತ್‌ ಶರ್ಮಾ ಕಲಾಗಾರು ಬಂಧಿತ ಆರೋಪಿ. ಬಾಗಲೂರು ಠಾಣೆ ಸಬ್‌ಇನ್‌ಸ್ಪೆಕ್ಟರ್‌ ರಮೇಶ್‌ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಶರತ್‌, ಬಾಗಲೂರು ಠಾಣೆ ಇನ್‌ಸ್ಪೆಕ್ಟರ್‌ ಆಗಿದ್ದ ಶಬರೀಶ್‌ ಮತ್ತು ಸಬ್‌ಇನ್‌ಸ್ಪೆಕ್ಟರ್‌ ರಮೇಶ್‌, ಕೊತ್ತನೂರು ಠಾಣೆಯ ಇನ್‌ಸ್ಪೆಕ್ಟರ್‌ ಆಗಿದ್ದ ಚೇತನ್‌ ಕುಮಾರ್‌ ಮತ್ತು ಅವಲಹಳ್ಳಿಯ ಠಾಣೆ ಇನ್‌ಸ್ಪೆಕ್ಟರ್‌ ಆಗಿದ್ದ ರಾಮಕೃಷ್ಣ ಅವರಿಗೆ ವಾಟ್ಸ್‌ಆ್ಯಪ್‌ ಕರೆ ಮಾಡಿ ತಲಾ 5 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಪ್ರಕರಣದ ವಿವರ: 

ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ ಹಚ್ಚಿ ಕೋಟ್ಯಂತರ ರು. ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮೂವರು ಠಾಣೆ ಇನ್‌ಸ್ಪೆಕ್ಟರ್‌ಗಳಿಗೆ ಡಿ.28 ರಂದು ವಾಟ್ಸ್ಆ್ಯಪ್‌ ಕರೆ ಮಾಡಿರುವ ಆರೋಪಿ, ಮೂವರು ಠಾಣೆ ಇನ್‌ಸ್ಪೆಕ್ಟರ್‌ಗಳು ಡ್ರಗ್ಸ್‌ ಫ್ಯಾಕ್ಟರಿ ನಡೆಸುವವರ ಜತೆ ಶಾಮೀಲಾಗಿ ಕೋಟಿ ಕೋಟಿ ಲಂಚ ತೆಗೆದುಕೊಂಡು ದಂಧೆ ನಡೆಸಲು ಅವಕಾಶ ನೀಡಿದ್ದಾರೆ ಎಂದು ಸ್ಟೋರಿವೊಂದನ್ನು ಸಿದ್ಧಪಡಿಸಲಾಗಿದೆ. 

ಅದು ಡಿ.29 ರ ಬೆಳಗ್ಗೆ 9 ಗಂಟೆಗೆ ಪ್ರಸಾರವಾಗುತ್ತೆ. ಇದು ಪ್ರಸಾರವಾದರೆ ನೀವು ಮೂವರ ಅಮಾನತು ಆಗುತ್ತದೆ. ಆ ಸ್ಟೋರಿ ಪ್ರಸಾರವಾಗಬಾರದೆಂದರೆ ತಲಾ 5 ಲಕ್ಷ ರು. ನೀಡಿ ಎಂದು ಬೇಡಿಕೆ ಇಟ್ಟಿದ್ದ. ಈತನ ಆಡಿಯೋ ಸ್ಕ್ರೀನ್‌ ರೆಕಾರ್ಡ್ ಮಾಡಿಕೊಂಡಿದ್ದ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಆರೋಪಿ ಖಾಸಗಿ ವಾಹಿನಿ ಪರ ಮಧ್ಯಸ್ಥಿಕೆ ವಹಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.