ಕೊಳ್ಳೇಗಾಲ: ಪಟ್ಟಣದ ಬಸ್ ನಿಲ್ದಾಣದಿಂದ ಚಾಮರಾಜನಗರಕ್ಕೆ ತೆರಳಲು ಸಕಾಲದಲ್ಲಿ ಬಸ್ ಸಿಗುತ್ತಿಲ್ಲ, ದಿನನಿತ್ಯ ಇದೇ ಸಮಸ್ಯೆಯಾಗಿದ್ದು, ವಿದ್ಯಾರ್ಥಿಗಳಾದ ನಮಗೆ ಇದರಿಂದ ಅನಾನುಕೂಲವಾಗುತ್ತಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದ ವಿದ್ಯಾರ್ಥಿಗಳು ಸಾರಿಗೆ ಬಸ್ ವ್ಯವಸ್ಥೆ ವಿರುದ್ಧ ಬುಧವಾರ ಪ್ರತಿಭಟಿಸಿದರು.
ನಾವೆಲ್ಲರೂ ಪ್ರತಿದಿನ ಕಾನೂನು ಕಾಲೇಜಿಗೆ ತೆರಳಬೇಕು, ಆದರೆ ಈ ಸಂದರ್ಭದಲ್ಲಿ ಸಕಾಲಕ್ಕೆ ಬಸ್ಗಳಿಲ್ಲದಿರುವುದರಿಂದ ನಿತ್ಯ ತೊಂದರೆ ಉಂಟಾಗುತ್ತಿದೆ. ನಾನ್ಸ್ಟಾಪ್ ಬಸ್ಗಳು ನಮಗೆ ಬಸ್ ಪಾಸ್ ಸೌಕರ್ಯ ನೀಡುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಕೆಎಸ್ ಆರ್ ಟಿಸಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ, ತಡೆರಹಿತ ಬಸ್ ಹೊರತುಪಡಿಸಿ ನಮಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲು ಹಲವು ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇಂದೂ ಸಹ ಕಾದು ಕಾದು ಬಸವಳಿದಿದ್ದೇವೆ, ಸಕಾಲದಲ್ಲಿ ಬಸ್ ಬಾರದ ಹಿನ್ನೆಲೆ ನಾವು ನಿಗಧಿತ ವೇಳೆಗೆ ಕಾಲೇಜಿಗೆ ತೆರಳಲು ಆಗಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಬಳಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರು ಆಗಮಿಸಿ ವಾತಾವರಣ ತಿಳಿಗೊಳಿಸಿದರು. ಈವೇಳೆ ವಿದ್ಯಾರ್ಥಿಗಳಾದ ದರ್ಶನ್, ಸುಜಯ್, ಉದಯ್, ಮನೋಜ್, ಮಹೇಶ್, ಶ್ರೇಯಸ್, ರಾಘವೇಂದ್ರ ಇನ್ನಿತರಿದ್ದರು.