ಅಬಲರಿಗೆ, ಅಸಹಾಯಕರಿಗೆ ಸಮಾನತೆ ನೀಡೊದೆ ಕಾನೂನು: ನ್ಯಾ.ಶಶಿಕಲಾ

KannadaprabhaNewsNetwork | Published : Dec 31, 2023 1:30 AM

ಕೇವಲ ಅಪರಾಧಿಗಳಿಗೆ ಶಿಕ್ಷೆ ನೀಡುವುದು ಅಲ್ಲ, ಅಬಲರಿಗೆ, ಅಸಹಾಯಕರಿಗೆ ಶಿಕ್ಷೆ ನೀಡುವುದು ಕಾನೂನು.

ಹೊಸದುರ್ಗ: ಪೂರ್ವಿಕರಲ್ಲಿ ಕೂಡು ಕುಟುಂಬವಿತ್ತು ಅಂದು ಹಂಚಿಕೊಂಡು ತಿನ್ನುತ್ತಿದ್ದರು. ಇಂದು ಒಂಟಿ ಕುಟುಂಬಗಳಾಗಿವೆ ಎಲ್ಲರೂ ಕಿತ್ತು ತಿನ್ನುವಂತಾಗಿದೆ ಎಂದು ಜೆಎಂಎಫ್‌ಸಿಯ ಹಿರಿಯ ಸಿವಿಲ್ ನ್ಯಾ.ಶಶಿಕಲಾ ಹೇಳಿದರು.

ತಾಲೂಕಿನ ಶ್ರೀರಾಂಪುರ ಹೋಬಳಿ ಗವಿಗಂಗಾಪುರ ಬೆಟ್ಟದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್‌ ಘಟಕದ ವಿಶೇಷ ವಾರ್ಷಿಕ ಶಿಬಿರದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇವಲ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದೇ ಕಾನೂನಲ್ಲ. ಅಬಲರಿಗೆ, ಅಸಹಾಯಕರಿಗೆ ಸಮಾನತೆ ನೀಡುವುದು ಆಗಿದೆ.

ಕಾನೂನಿನ ಅರಿವು ಎಲ್ಲರಿಗೂ ಇರಬೇಕು ನನಗೆ ಕಾನೂನು ಗೊತ್ತಿಲ್ಲ ಎಂದು ತಪ್ಪು ಮಾಡಿದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಪೂರ್ವಿಕರು ಆಚರಿಸಿಕೊಂಡ ಬಂದ ಆಚಾರ ವಿಚಾರ, ರಾಜಿ ಪಂಚಾಯಿತಿಗಳ ತೀರ್ಮಾನಗಳೇ ಇಂದು ಕಾನೂನಾಗಿ ಮಾರ್ಪಟ್ಟಿವೆ. ಇಂದು ನಾವೆಲ್ಲರೂ ವಿದ್ಯಾವಂತರಾದರೂ ಕೂಡ ಅವಿದ್ಯಾವಂತರಂತೆ ವರ್ತಿಸುತ್ತಿದ್ದೇವೆ. ಪೂರ್ವಜರು ಅವಿದ್ಯಾವಂತರಾಗಿದ್ದರು ಕೂಡ ಉತ್ತಮ ಸಂಸ್ಕಾರ ಹೊಂದಿದ್ದರು ಎಂದರು.

ಎನ್ನೆಸ್ಸೆಸ್‌ ಎಂದರೆ ಶಿಸ್ತು ಮತ್ತು ಸ್ವಚ್ಛತೆ, ಶಿಕ್ಷಣ ಎಂದರೆ ನಾಗರೀಕತೆಯ ಪಾಠ ಬೋಧನೆಯಲ್ಲ ಮಕ್ಕಳಿಗೆ ಸಂಸ್ಕಾರ ಮತ್ತು ಮಾನವೀಯತೆಯನ್ನು ಕಲಿಸಿಕೊಡುವುದು ಶಿಕ್ಷಣ. ಇಂದು ಮಕ್ಕಳಲ್ಲಿ ಸಂಸ್ಕಾರವೂ ಇಲ್ಲ ಮಾನವೀಯತೆಯು ಇಲ್ಲ ಎಂದರು.

ಮದುವೆಯಾಗುವುದೇ ಪ್ರೀತಿ-ಪ್ರೇಮದ ಯಶಸ್ಸಲ್ಲ ಯಾರು ಹಣ ಕೊಡದಿದ್ದರೆ ಸಹಕಾರ ನೀಡದಿದ್ದರೆ ಮೂರೇ ದಿನಕ್ಕೆ ನಿಮ್ಮ ಪ್ರೀತಿ ಹಳಸುತ್ತದೆ. ಮೊದಲು ದುಡಿಮೆಯ ಮಾರ್ಗ ಕಂಡು ಜೀವನ ರೂಪಿಸಿಕೊಳ್ಳಿ ಆಗ ನಿಮ್ಮ ಪ್ರೀತಿ ಪ್ರೇಮದ ಯಶಸ್ಸು ಸಾರ್ಥಕವಾಗುತ್ತದೆ. ಇತ್ತೀಚಿಗೆ ಹೊಸದುರ್ಗದಲ್ಲಿ ಶಾಲಾ ಮಕ್ಕಳ ಪ್ರೀತಿ ಪ್ರೇಮದ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ನಮ್ಮದು ಅತಿ ಹೆಚ್ಚು ರೈತಾಪಿ ಕುಟುಂಬ ಹೊಂದಿರುವ ದೇಶ. ಬಹುತೇಕರು ತಮ್ಮ ಜೀವನವನ್ನು ಹೊಲ ಜಮೀನುಗಳಲ್ಲಿಯೇ ಕಾಲ ಕಳೆಯುತ್ತಾರೆ ಅವರಿಗೆ ಕಾನೂನಿನ ಹರಿವು ಅಗತ್ಯವಾಗಿದೆ ಹಾಗಾಗಿ ಶಾಲಾ ಮಕ್ಕಳ ಮೂಲಕ ತಮ್ಮ ಪೋಷಕರಿಗೆ ಕಾನೂನಿನ ಅರಿವು ಮೂಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಎಂ.ಜಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ವಕೀಲ ಎಚ್ ಆರ್ ಷಡಕ್ಷರಪ್ಪ, ರಮೇಶ್, ಸಿದ್ದಲಿಂಗ ಸ್ವಾಮಿ ಮುಂತಾದವರು ಹಾಜರಿದ್ದರು.