ಕನ್ನಡಪ್ರಭ ವಾರ್ತೆ ಚಾಮರಾಜನಗರರಾಮ ಮಂದಿರದ ಉದ್ಘಾಟನೆಗೆ ಅಯೋಧ್ಯೆಯಿಂದ ತಂದಿರುವ ರಾಮಮಂದಿರ ಮಂತ್ರಾಕ್ಷತೆಯ ವಾಹನವನ್ನು ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಬಿಜೆಪಿ ಮುಖಂಡರು, ಹಿಂದೂಪರ ಮುಖಂಡರು ಬರ ಮಾಡಿಕೊಂಡು, ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.
ಅಯೋಧ್ಯೆಯ ಶ್ರೀರಾಮಮಂದಿರದಿಂದ ಮಂತ್ರಾಕ್ಷತೆಯನ್ನು ದೇಶದ ಎಲ್ಲಾ ಭಾಗಗಳಿಗೂ ತಲುಪಿಸಲಾಗುತ್ತಿದೆ. ಮಂತ್ರಾಕ್ಷತೆ ಹೊತ್ತು ತಂದ ವಾಹನ ದೇಶಾದ್ಯಂತ ಸಂಚಾರ ಮಾಡುತ್ತಾ, ರಾಜ್ಯದ ಗಡಿ ಜಿಲ್ಲಾ ಚಾಮರಾಜನಗರಕ್ಕೆ ಬಂದ ಪವಿತ್ರ ಮಂತ್ರಾಕ್ಷತೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಎಲ್ಲಾ ಗ್ರಾಮಗಳಿಗೆ ಆರ್ಎಸ್ಎಸ್ ಮತ್ತು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಮಂತ್ರಾಕ್ಷತೆ ತಲುಪಿಸುವ ಕೆಲಸ ಮಾಡಲಿದ್ದಾರೆ ಎಂದು ಹಿಂದೂಪರ ಸಂಘಟನೆಗಳು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪದಾಧಿಕಾರಿಗಳು, ಮುಖಂಡರು ತಿಳಿಸಿದರು.ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಹಿಂದುಪರ ಸಂಘಟನೆಗಳು, ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಮೆರವಣಿಗೆಯುದ್ದಕ್ಕೂ ಜೈಕಾರದ ಘೋಷಣೆಗಳನ್ನು ಕೂಗಿದರು. ಅನೇಕ ಜನರು ಪೂಜೆ ಸಲ್ಲಿಸಿ ಭಕ್ತಿ ಮೆರೆದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್ ಮುಖಂಡರಾದ ಎಂ. ರಾಮಚಂದ್ರ, ನಿಜಗುಣರಾಜು, ಎ. ಆರ್. ಬಾಬು, ವೃಷಭೇಂದ್ರಪ್ಪ, ನೂರೊಂದುಶೆಟ್ಟಿ, ಬಾಲಸುಬ್ರಹ್ಮಣ್ಯಂ, ಸತೀಶ್, ಸುದರ್ಶನಗೌಡ, ಮಂಜುನಾಥಗೌಡ, ಸುಂದರ್, ಮಂಜುನಾಥ್, ಚಂದ್ರಶೇಖರ್, ಶಿವಣ್ಣ, ನಟರಾಜು, ಕುಮಾರ್, ರಾಜಶೇಖರ್, ವೇಣುಗೋಪಾಲ್, ವಿರಾಟ್ಶಿವು, ಮಂಜು, ಕೃಷ್ಣಪ್ಪ, ರಂಗಸ್ವಾಮಿ, ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
೩೦ಸಿಎಚ್ಎನ್೫
----------
ರಾಮ ಮಂದಿರದ ಉದ್ಘಾಟನೆಯ ಅಯೋಧ್ಯೆಯಿಂದ ತಂದಿರುವ ರಾಮಮಂದಿರ ಮಂತ್ರಾಕ್ಷತೆಯ ಬೆಳ್ಳಿ ರಥದಲ್ಲಿ ಶ್ರೀರಾಮಚಂದ್ರ, ಲಕ್ಷ್ಮಣ, ಸೀತೆ, ವೇಷಧಾರಿಗಳು.
೩೦ಸಿಎಚ್ಎನ್೭