ಹೆಚ್ಚಿನ ವಿಚಾರಣೆಗೆ ಹಾಸನ ಜಿಲ್ಲಾ ಬಂಧೀಖಾನೆಯಿಂದ ಕರೆದೊಯ್ದ ಖಾಕಿ
ಕನ್ನಡಪ್ರಭ ವಾರ್ತೆ ಹಾಸನಅತ್ಯಾಚಾರ ಪ್ರಕರಣದ ವಿಚಾರವಾಗಿ ಬಂಧಿಸಲಾಗಿದ್ದ ವಕೀಲ ಹಾಗೂ ಬಿಜೆಪಿ ಮುಖಂಡ ಜಿ. ದೇವರಾಜೇಗೌಡರನ್ನು ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಮಂಗಳವಾರ ಬೆಳಿಗ್ಗೆ ಹಾಸನ ಜಿಲ್ಲಾ ಬಂಧೀಖಾನೆಯಿಂದ ಕರೆದೊಯ್ದರು.
ಅತ್ಯಾಚಾರ ಪ್ರಕರಣದ ಪ್ರಜ್ವಲ್ ರೇವಣ್ಣ ವಿಚಾರವಾಗಿ ಈಗಾಗಲೇ ವಿಚಾರಣೆ ನಡೆಸಲು ಸಂಬಂಧಪಟ್ಟ ಅನೇಕರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಮೇ ೧೧ ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿಯ ಟೋಲ್ನಲ್ಲಿ ದೇವರಾಜೇಗೌಡ ಅವರನ್ನು ಬಂಧನ ಮಾಡಲಾಗಿತ್ತು. ಮೇ ೧೨ ರಂದು ವಿಚಾರಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ೧೪ ದಿನಗಳ ಕಾಲ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.ಕಳೆದ ಒಂದು ದಿನಗಳ ಹಿಂದೆ ಹೆಚ್ಚಿನ ವಿಚಾರಣೆಗೆ ತಮ್ಮ ಬಂಧನಕ್ಕೆ ದೇವರಾಜೇಗೌಡ ಅವರನ್ನು ಒಪ್ಪಿಸುವಂತೆ ಪೊಲೀಸರು ನ್ಯಾಯಾಲಯದ ಮುಂದೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮಂಗಳವಾರದಿಂದ ಬುಧವಾರ ಸಂಜೆವರೆಗೆ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ. ಹೊಳೆನರಸೀಪುರ ಡಿವೈಎಸ್ಪಿ ಅಶೋಕ್ ಜಿಲ್ಲಾ ಕಾರಾಗೃಹದಿಂದ ಕರೆದೊಯ್ದರು. ಪೊಲೀಸರು ತಮ್ಮ ಪೊಲೀಸ್ ವಾಹನಕ್ಕೆ ಕರೆದುಕೊಂಡು ಹೋಗುವಾಗ, ‘ಅವರ ಕೆಲಸ ಅವರು ಮಾಡ್ತಾರೆ ಬಿಡ್ರಪ್ಪ’ ಎಂದು ಹೇಳುತ್ತ ದೇವರಾಜೇಗೌಡ ಜೀಪು ಹತ್ತಿದರು.
ಲೈಂಗಿಕ ದೌರ್ಜನ್ಯ ವಿಚಾರವಾಗಿ ಈಗಾಗಲೇ ಸಂಸದ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಸಂತ್ರಸ್ತೆಯರು ಪ್ರಕರಣ ದಾಖಲಿಸಿದ್ದಾರೆ. ಆದರೆ ಸಂಸದರು ಹೊರ ದೇಶದಿಂದ ಇನ್ನೂ ವಾಪಸ್ ಭಾರತಕ್ಕೆ ಬಂದಿಲ್ಲ. ಸಂಸದರ ತಂದೆ ಮಾಜಿ ಸಚಿವ ಎಚ್.ಡಿರೇವಣ್ಣನವರು ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದು, ಈಗ ಷರತ್ತು ಬದ್ಧ ಜಾಮೀನಿನೊಂದಿಗೆ ಹೊರಬಂದಿದ್ದಾರೆ. ಪೆನ್ಡ್ರೈವ್ ವಿಚಾರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಕೂಡ ಬಂಧನ ಮಾಡಲಾಗಿದೆ. ಈ ವಿಚಾರದಲ್ಲಿ ಎಸ್ಐಟಿ ತಂಡ ಹಾಗೂ ಎಫ್ಎಸ್ಎಲ್ ತಂಡ ತನಿಖೆ ನಡೆಸುತ್ತಿದೆ.