ಜಿಮ್‌ ಟ್ರೇನರ್‌ ಕೊಲೆ ಕೇಸ್‌ಲ್ಲಿ ವಕೀಲಲೋಕೇಶ್‌ ವಿಚಾರಣೆಗೆ ತಡೆ ಇಲ್ಲ: ಹೈ

KannadaprabhaNewsNetwork |  
Published : Jul 10, 2026, 03:15 AM IST
ಕೆ.ಆರ್. ಮಾರುಕಟ್ಟೆ | Kannada Prabha

ಸಾರಾಂಶ

ಬೆಂಗಳೂರಿನ ಜಿಮ್‌ ಟ್ರೇನರ್‌ ವಿಜಯಕುಮಾರ್‌ ಕೊಲೆ ಪ್ರಕರಣದಲ್ಲಿ ಸುಪಾರಿ ಕೊಲೆಗಾರರಿಗೆ ಹಣ ಸಂದಾಯ ಮಾಡಿದ ಆರೋಪದಲ್ಲಿ ಏಳನೇ ಆರೋಪಿಯಾಗಿರುವ ವಕೀಲ ಬಿ.ಲೋಕೇಶ್‌ ವಿರುದ್ಧದ ಪ್ರಕರಣದ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿರುವ ಹೈಕೋರ್ಟ್‌‌,‌‌ ಅರ್ಜಿದಾರನಿಗೆ ರಕ್ಷಣೆ ಒದಗಿಸಲು ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ನುಡಿದಿದೆ.

ಕನ್ನಡಪ್ರಭ ವಾರ್ತೆ‌ ಬೆಂಗಳೂರು

ಬೆಂಗಳೂರಿನ ಜಿಮ್‌ ಟ್ರೇನರ್‌ ವಿಜಯಕುಮಾರ್‌ ಕೊಲೆ ಪ್ರಕರಣದಲ್ಲಿ ಸುಪಾರಿ ಕೊಲೆಗಾರರಿಗೆ ಹಣ ಸಂದಾಯ ಮಾಡಿದ ಆರೋಪದಲ್ಲಿ ಏಳನೇ ಆರೋಪಿಯಾಗಿರುವ ವಕೀಲ ಬಿ.ಲೋಕೇಶ್‌ ವಿರುದ್ಧದ ಪ್ರಕರಣದ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿರುವ ಹೈಕೋರ್ಟ್‌‌,‌‌ ಅರ್ಜಿದಾರನಿಗೆ ರಕ್ಷಣೆ ಒದಗಿಸಲು ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ನುಡಿದಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಆರೋಪಗಳನ್ನು ಕೈಬಿಡಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ ಲೋಕೇಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇತ್ಯರ್ಥ ಮಾಡಿದ್ದು, ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ಕೋರುವಂತೆ ಸೂಚಿಸಿದೆ.

ವಕೀಲ ಲೋಕೇಶ್‌ ಮತ್ತು ಇತರೆ ಆರೋಪಿಗಳ ನಡುವಿನ ಹಣ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿದ ಪೀಠ, ಪ್ರಕರಣದ ಒಂದರಿಂದ ಐದನೇ ಆರೋಪಿಗಳು ಸುಪಾರಿ ಕೊಲೆಗಾರರಾಗಿರುವಾಗ, ವಕೀಲರ (ಅರ್ಜಿದಾರ) ಖಾತೆಯಿಂದ ಅವರ ಖಾತೆಗೆ ಹಣ ಹೇಗೆ ಹೋಗುತ್ತದೆ ಎಂದು ಪ್ರಶ್ನಿಸಿತು.

ಲೋಕೇಶ್‌ ಪರ ವಕೀಲರು, ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಪಡೆಯುವವರೆಗೆ ಅರ್ಜಿದಾರರಿಗೆ ರಕ್ಷಣೆ ಮುಂದುವರಿಸಬೇಕು‌ ಎಂಬ ಕೋರಿಕೆಗೆ ಪೀಠ ಸ್ಪಷ್ಟವಾಗಿ ನಿರಾಕರಿಸಿ, ಕೊಲೆ ಪ್ರಕರಣದಲ್ಲಿ ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾವುದೇ ಆದೇಶ ಮಾಡುವುದಿಲ್ಲ. ಇಲ್ಲವಾದಲ್ಲಿ ಆದೇಶ ಮಾಡುತ್ತಿದ್ದೆ‌‌ ಎಂದು ನುಡಿಯಿತು.

ಉದ್ಯಮಿ ಜತೆ ಸಂಬಂಧ:

ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಒಂದರಿಂದ ಐದನೇ ಆರೋಪಿಗಳು ಸುಪಾರಿ ಕೊಲೆಗಾರರಾಗಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮಿ ಪ್ರಸಾದ್‌ ರಾವ್‌ ಪ್ರತೀಕಾರ ತೋರಿಸಲು ಜಿಮ್‌ ಟ್ರೇನರ್‌ ಕೊಲೆ ಮಾಡಲಾಗಿದೆ. ಜಿಮ್‌ ಟ್ರೇನರ್‌ ಮತ್ತು ಪ್ರಸಾದ್‌ ರಾವ್‌ ನಡುವೆ ಸಂಬಂಧ ಇತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಜು.6ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಲೋಕೇಶ್‌ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿತ್ತು. ಇಂದು ತುರ್ತು ವಿಚಾರಣೆಗೆ ಜಗದೀಶ್‌ ಅವರು ಅರ್ಜಿ ಸಲ್ಲಿಸಿದ್ದು, ತನಿಖೆಯಲ್ಲಿ ಸಾಕಷ್ಟು ಪ್ರಗತಿಯಾಗಿರುವುದನ್ನು ಪೀಠದ ಗಮನಕ್ಕೆ ತಂದರು. ಇದನ್ನು ಆಲಿಸಿದ ಪೀಠ ವಕೀಲ ಲೋಕೇಶ್‌ ಅವರು ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ಕೋರುವುದು ಸೂಕ್ತ ಎಂದು ಅರ್ಜಿ ಇತ್ಯರ್ಥಪಡಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12ವರ್ಷ ಬಳಿಕ ಕೆ.ಆರ್.ಮಾರುಕಟ್ಟೆಬಾಡಿಗೆ ಪರಿಷ್ಕರಣೆ ಆದೇಶ ಜಾರಿ
ಆಳಂದ ಪಟ್ಟಣಕ್ಕೆ ಕುಡಿವ ನೀರು ಪೂರೈಕೆಗೆ ಕೊರತೆ ಇಲ್ಲ