ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಸೌಲಭ್ಯ ಕೊರತೆ । ಆಡಳಿತದ ನಿರ್ಧಾರಕ್ಕೆ ಸದಸ್ಯರ ವಿರೋಧ
ಕನ್ನಡಪ್ರಭ ವಾರ್ತೆ ಶಿಕಾರಿಪುರಪಟ್ಟಣದ ಕರ್ನಾಟಕ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ಮುಖ್ಯ ರಸ್ತೆ ಸಹಿತ ನೀರು ವಿದ್ಯುತ್ ಮತ್ತಿತರ ಸೌಲಭ್ಯ ವಂಚಿತವಾಗಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಈ ದಿಸೆಯಲ್ಲಿ ಸದಸ್ಯರ ತೀವ್ರ ವಿರೋಧದ ಮದ್ಯೆ ಬಡಾವಣೆಯನ್ನು ಸುಪರ್ದಿಗೆ ಪಡೆದುಕೊಂಡ ಪುರಸಭೆಯ ನಿರ್ಧಾರದ ಬಗ್ಗೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಸುನಂದಾ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ನಾಗರಾಜಗೌಡ ಮಾತನಾಡಿ, ದಶಕದ ಹಿಂದೆ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆ ಪಕ್ಕದಲ್ಲಿ ಕೆಎಚ್ ಬಿ ಬಡಾವಣೆ ನಿರ್ಮಿಸಲು ಹಲವು ರೈತರು ತಮ್ಮ ಅಲ್ಪಸ್ವಲ್ಪ ಭೂಮಿಯನ್ನು ಉದಾರತೆಯಿಂದ ನೀಡಿದ್ದು ಇದೀಗ ಅತ್ಯಂತ ವಿಶಾಲವಾದ ಬಡಾವಣೆಯಲ್ಲಿ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆ ಸಹಿತ ಹೊಸ ಹೊಸ ಮನೆಗಳ ನಿರ್ಮಾಣದಿಂದ ನಿತ್ಯ ಸಹಸ್ರಾರು ಜನತೆ ಒಡಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಡಾವಣೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡ ಕೆಎಚ್ಬಿ ನಿರ್ಲಕ್ಷ್ಯದಿಂದ ಜನತೆ ತತ್ತರಿಸುತ್ತಿದ್ದಾರೆ. ಪುರಸಭೆ ಕೇವಲ 1.5 ಕೋಟಿ ರು. ಅಭಿವೃದ್ದಿ ಶುಲ್ಕ ಪಾವತಿಸಿಕೊಂಡು ಸುಪರ್ದಿಗೆ ಪಡೆದುಕೊಂಡಿದ್ದು ಈ ಬಗ್ಗೆ ಸದಸ್ಯರ ವಿರೋಧ ಲೆಕ್ಕಿಸದೆ ಇದೀಗ ಹತ್ತಾರು ಕೋಟಿ ರು. ವೆಚ್ಚದ ರಸ್ತೆ ದೀಪ ನೀರು ಚರಂಡಿ ಮತ್ತಿತರ ಕಾಮಗಾರಿಗೆ ಹೊಣೆ ಯಾರು ಎಂದು ಪ್ರಶ್ನಿಸಿದ ಅವರು ಸ್ಥಳೀಯರ ತೆರಿಗೆ ಹಣದಿಂದ ಅಭಿವೃದ್ದಿ ಸಾದ್ಯವೇ ಜನಪ್ರತಿನಿಧಿಗಳ ಪ್ರಭಾವಕ್ಕೆ ಮಣಿದು ವಹಿಸಿಕೊಂಡ ಬಡಾವಣೆ ಅಭಿವೃದ್ದಿ ಪುರಸಭೆಗೆ ಆರ್ಥಿಕ ಹೊರೆಯಾಗಲಿದೆ ಎಂದು ಸದಸ್ಯರ ಸಲಹೆ ಪರಿಗಣಿಸದೆ ವಹಿಸಿಕೊಂಡಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಮುಖ್ಯಾಧಿಕಾರಿ ಭರತ್ ಮಾತನಾಡಿ, ಕೆಎಚ್ಬಿ ಸರ್ಕಾರದ ಅಂಗಸಂಸ್ಥೆಯಾಗಿದ್ದು ವಹಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಇದೀಗ ತುರ್ತು ಕಾಮಗಾರಿಯನ್ನು ಕೆಎಚ್ಬಿ ಪಾವತಿಸಿದ ಅಭಿವೃದ್ದಿ ಶುಲ್ಕದಲ್ಲಿ ನಿರ್ವಹಿಸಿ ಕ್ರಮೇಣ ಸರ್ಕಾರದ ಅನುದಾನದಿಂದ ಬಡಾವಣೆಗೆ ಎಲ್ಲ ರೀತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.ಸ್ಥಳಕ್ಕೆ ವಿದ್ಯುತ್ ರಸ್ತೆ ನೀರು ಸಹಿತ ಸ್ವಚ್ಛತೆಗೆ ಪ್ರತ್ಯೇಕ ಟೆಂಡರ್ ಅಗತ್ಯ.ಪೌರಕಾರ್ಮಿಕರು, ಪುರಸಭೆಯ ಆಟೋದಿಂದ ಸ್ವಚ್ಛತೆ ಕಷ್ಟಕರವಾಗಿದ್ದು ಕೂಡಲೇ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸದಸ್ಯ ಸುರೇಶ್ ಸಲಹೆ ನೀಡಿದರು.
15 ನೇ ಹಣಕಾಸು ಯೋಜನೆಯಲ್ಲಿ ಹೆಚ್ಚಿನ ಅನುದಾನ ನೀಡಿ ಸಹಕರಿಸುವಂತೆ ಸದಸ್ಯ ಮಯೂರ್ ದರ್ಶನ್ ಉಳ್ಳಿ ಮನವಿ ಮಾಡಿ ಪರ್ತಕರ್ತರಿಗೆ ಸ್ಮಾರ್ಟ್ ಫೋನ್ ಖರೀದಿಗೆ 25 ಸಾವಿರ ರು. ಸಹಾಯಧನ ನೀಡುವಂತೆ ಆಗ್ರಹಿಸಿದರು.ಸದಸ್ಯೆ ರೂಪಕಲಾ ಹೆಗ್ಡೆ, ಉಪಾಧ್ಯಕ್ಷೆ ರೂಪ,ಸದಸ್ಯರಾದ ಪಾಲಾಕ್ಷಪ್ಪ,ಗೋಣಿ ಪ್ರಕಾಶ್, ರೋಷನ್, ರೇಖಾಬಾಯಿ, ಲಕ್ಷ್ಮೀ ಮಹಾಲಿಂಗಪ್ಪ, ಫೈರೋಜಾಭಾನು, ಶ್ವೇತಾ, ನಗರದ ರವಿಕಿರಣ್, ಉಮಾವತಿ, ಶ್ರೀಧರ ಕರ್ಕಿ, ವಿಜಯಕುಮಾರ್, ರಾಘವೇಂದ್ರ, ಶಕುಂತಲಮ್ಮ, ಅಧಿಕಾರಿ ಸುರೇಶ್, ರಾಜಕುಮಾರ್, ಪರಶುರಾಮ, ಶೇಖರ್ ಮತ್ತಿತರರು ಇದ್ದರು.