ನಮ್ಮ ದೇಹದ ಭಾಗಗಳಲ್ಲಿ ಹೃದಯವು ಅತ್ಯಂತ ಮುಖ್ಯವಾಗಿದೆ. ಅದನ್ನು ನಾವು ಕೆಡದಂತೆ ನೋಡಿಕೊಳ್ಳಬೇಕು.
ಹೃದಯ ದಿನಾಚರಣೆ, ಜಾಗೃತಿಯ ಜಾಥಾ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಕುಷ್ಟಗಿ
ನಮ್ಮ ದೇಹದ ಭಾಗಗಳಲ್ಲಿ ಹೃದಯವು ಅತ್ಯಂತ ಮುಖ್ಯವಾಗಿದೆ. ಅದನ್ನು ನಾವು ಕೆಡದಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ಕೆ.ಎಸ್. ರೆಡ್ಡಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೃದಯ ದಿನಾಚರಣೆಯ ಅಂಗವಾಗಿ ನಡೆದ ಜಾಗೃತಿಯ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಹೃದಯವು ಉತ್ತಮವಾಗಿ ಕೆಲಸ ಮಾಡಬೇಕಾದರೆ, ಕೆಲವು ವ್ಯಸನಗಳಾದ ಅತಿಯಾದ ಮದ್ಯಪಾನ, ಧೂಮಪಾನ, ತಂಬಾಕು ಸೇವನೆ, ಹೆಚ್ಚು ಕರಿದ ಪದಾರ್ಥಗಳ ಸೇವನೆಯು ಹೃದಯದ ಆರೋಗ್ಯಕ್ಕೆ ಮಾರಕವಾಗಿದ್ದು, ಇವುಗಳನ್ನು ತ್ಯಜಿಸಬೇಕು ಎಂದು ಹೇಳಿದರು.
ಇತ್ತೀಚಿನ ಜೀವನದಲ್ಲಿ ಒತ್ತಡದ ಜೀವನ ಶೈಲಿ ಕೂಡಾ ಹೃದಯ ರೋಗಕ್ಕೆ ಕಾರಣವಾಗಿದ್ದು, ಸಾಧ್ಯವಾದಷ್ಟು ಒತ್ತಡ ರಹಿತ ಜೀವನ ಮಾಡಬೇಕು ಎಂದರು.ನಟ ಪುನೀತ್ ರಾಜಕುಮಾರ ಸಹಿತ ಹೃದಯ ರೋಗದಿಂದ ಸಾವನ್ನಪ್ಪಿದ್ದು, ಅವರ ನೆನಪಿಗಾಗಿ ತಾಲೂಕಿನ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಕ್ಕೆ ಸರ್ಕಾರ ಮುಂದಾಗಿದೆ. ಆಸ್ಪತ್ರೆಯಲ್ಲಿ ಇಸಿಜಿ ವ್ಯವಸ್ಥೆ ಇರುತ್ತದೆ. ಆರಂಭಿಕ ಹಂತದಲ್ಲಿ ಕಾಯಿಲೆ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಮುಂದಾಗುವ ಅಪಾಯ ತಡೆಯಬಹುದು ಎಂದು ಹೇಳಿದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಊರುಗೋಲುಗಳನ್ನು ವಿತರಣೆ ಮಾಡಿದರು.
ಈ ಸಂದರ್ಭ ಹಿರಿಯರಾದ ಎಸ್.ಎಚ್. ಹಿರೇಮಠ, ಶುಕರಾಮಪ್ಪ ಇಳಿಗೇರ, ಈರಪ್ಪ ಬಳಿಗಾರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ಬಳಿಗಾರ ಸೇರಿದಂತೆ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಹಾಗೂ ಬಿಜಿಎಸ್, ಮತ್ತು ಎಸ್.ವಿ.ಎಂ. ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಪಟ್ಟಣದ ಪ್ರಮುಖ ರಾಜಬೀದಿಗಳ ಮುಖಾಂತರ ಸಂಚರಿಸಿ ಹೃದಯ ಕಾಯಿಲೆ ಕುರಿತು ಜಾಗೃತಿ ಮೂಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.