ಬಿ.ರಾಮಪ್ರಸಾದ್ ಗಾಂಧಿ
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಪಿ.ರವೀಂದ್ರ ಪರಾಭವಗೊಂಡು ನಂತರ ಕೆಲವೇ ದಿನಗಳಲ್ಲಿ ನಿಧನರಾದರು. ಆಗ ಅವರಿದ್ದ ಕಚೇರಿಯಲ್ಲಿ ಬಿಡಾರ ಹೂಡಿದ ಅವರ ಸಹೋದರಿ ಎಂ.ಪಿ. ಲತಾ ಮಲ್ಲಿಕಾರ್ಜುನ ಕಾಂಗ್ರೆಸ್ ಸಂಘಟನೆಗೆ ಮುಂದಾದರು. ಇನ್ನೊಬ್ಬ ಸಹೋದರಿ ಎಂ.ಪಿ. ವೀಣಾ ಮಹಾಂತೇಶ ಸಹ ಆಚಾರ ಬಡಾವಣೆಯಲ್ಲಿ ಪ್ರತ್ಯೇಕ ಕಚೇರಿ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮುಂದಾದರು.
ಇವರಿಬ್ಬರಂತೆ ಇನ್ನು 14 ಜನರು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯರಾಗಿ ಟಿಕೆಟ್ ಆಕಾಂಕ್ಷಿಗಳಾದರು. ಹೀಗೆ ಒಟ್ಟು 16 ಜನರು 2023ರ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಾದರು. ಒಂದು ಹಂತದಲ್ಲಿ 15 ಆಕಾಂಕ್ಷಿಗಳು ಒಂದು ಕಡೆಯಾದರೆ, ಎಂ.ಪಿ. ಲತಾ ಒಬ್ಬರೇ ಪ್ರತ್ಯೇಕವಾಗಿ ಪಕ್ಷದ ಕಾರ್ಯಕ್ರಮಗಳನ್ನು ಮಾಡುತ್ತಾ ಸಾಗಿದರು.ಅಂತಿಮವಾಗಿ ಅರಸಿಕೇರಿ ಎನ್.ಕೊಟ್ರೇಶ ಪಕ್ಷದ ಅಧಿಕೃತ ಅಭ್ಯರ್ಥಿಯಾದರು. ಎಲ್ಲ ಆಕಾಂಕ್ಷಿಗಳು ಹಿಂದೆ ಸರಿದರೂ ಎಂ.ಪಿ. ಲತಾ ಮಾತ್ರ ಪಕ್ಷೇತರರಾಗಿ ಕಣಕ್ಕೆ ಧುಮಿಕಿಯೇ ಬಿಟ್ಟರು. ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹಾಗೂ ಅವರ ಬೆಂಬಲಿಗರು ಪಕ್ಷದ ಅಧಿಕೃತ ಅಭ್ಯರ್ಥಿ ಕೊಟ್ರೇಶ ಅವರಿಗೆ ಸಹಜವಾಗಿ ಬೆಂಬಲಿಸಿದರು.
ಆದರೂ ಅಲ್ಲಿಂದ ಈವರೆಗೂ ಬಣ ರಾಜಕೀಯ ಹಾಗೆ ಮುಂದುವರೆದಿತ್ತು. ಅವರ ಪಾಡಿಗೆ ಅವರು ಇವರ ಪಾಡಿಗೆ ಇವರು ಇದ್ದರು. ಈಗ್ಗೆ ಸ್ವಲ್ಪ ದಿನಗಳ ಕೆಳಗೆ ಶಾಸಕಿ ಎಂ.ಪಿ. ಲತಾ ಮೊದಲಿಗೆ ಹಿರಿಯ ಮುಖಂಡ, ಮುತ್ಸದ್ಧಿ ರಾಜಕಾರಣಿ ಸಿ.ಚಂದ್ರಶೇಖರ ಭಟ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಒಂದಾಗಿ ಹೋಗಲು ಚರ್ಚಿಸಿದರು. ಆಗ ಒಗ್ಗೂಡುವಿಕೆಗೆ ಮೊದಲ ಪ್ರಯತ್ನ ಅದಾಗಿತ್ತು.
ವಿಧಾನಸಭಾ ಚುನಾವಣೆ ನಡೆದು 11 ತಿಂಗಳ ಬಳಿಕ ಲೋಕಸಭಾ ಚುನಾವಣೆ ಬಂದಾಗ ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಘೋಷಿಸಿದಾಗ ಕಾಂಗ್ರೆಸ್ ಬಣಗಳ ಒಗ್ಗೂಡುವಿಕೆಗೆ ನಾಂದಿಯಾಯಿತು.ಅಭ್ಯರ್ಥಿ ಡಾ.ಪ್ರಭಾ ಪತಿ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಎಲ್ಲರ ಬಳಿ ಮಾತನಾಡಿ ಇದೇ ಪ್ರಥಮ ಬಾರಿಗೆ ತೆಲಿಗಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಎಂ.ಪಿ. ವೀಣಾ ಒಂದೇ ವೇದಿಕೆ ಹಂಚಿಕೊಂಡರು.
ಒಟ್ಟಾಗಿ ಕೂತರೂ ಪರಸ್ಪರ ಮಾತಾಡಲಿಲ್ಲ. ಅವರವರ ಬೆಂಬಲಿಗರು ಸಹ ಒಟ್ಟಾಗಿ ಕುಳಿತು ಕುತೂಹಲದಿಂದ ಕಾರ್ಯಕ್ರಮ ವೀಕ್ಷಿಸಿದರು.