ಕನ್ನಡಪ್ರಭ ವಾರ್ತೆ ಕಲಬುರಗಿ
ಕೆಕೆಆರ್ಡಿಬಿ ಇಂತಹ ಹಲವು ಉಪಕ್ರಮಗಳಲ್ಲಿ ಒಂದಾದ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿ ಯಾವ ಮಕ್ಕಳು ಕಲಿಕೆಯಲ್ಲಿ ಮಂದಗತಿಯಲ್ಲಿದ್ದಾರೋ ಅವರನ್ನು ಗುರುತಿಸಿ, ಅಂತಹ ಮಕ್ಕಳಿಗಾಗಿ ಪೂರಕ ಓದಿಗಾಗಿ ಕಲಿಕಾ ಆಸರೆ ಪುಸ್ತಕ ಮುದ್ರಿಸಿ ಹಂಚಲಾಗುತ್ತಿದೆ.
ಹಳ್ಳಿಯಲ್ಲಿರುವ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕ್ರಮ ಇದಾಗಿದೆ. ಕೆಕೆಆರ್ಡಿಬಿಯಿಂದ ಕಲ್ಯಾಣ ನಾಡಿನಲ್ಲಿರುವ 7 ಜಿಲ್ಲೆಗಳ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕೈಗೆತ್ತಿಕೊಂಡಿರುವ ಕಲಿಕಾ ಆಸರೆ ಪುಸ್ತಕ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಗೆ 26ರ ಗಣರಾಜ್ಯೋತ್ಸವ ದಿನದಂದು ಕಲಬುರಗಿ ಕೆಕೆಆರ್ಡಿಬಿ ಅಭಿವೃದ್ಧಿ ಭವನದಲ್ಲಿ ಚಾಲನೆ ನೀಡಲಾಗುತ್ತಿದೆ. ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಧರ್ಮಸಿಂಗ್ ಕಲಿಕಾ ಆಸರೆ ಹೆಚ್ಚುವರಿ ಕಲಿಕೆ ಪೂರಕ ಪುಸ್ತಕಗಳನ್ನು ವಿದ್ಯಾರ್ಥಿಗಳಿಗಾಗಿ ಅರ್ಪಿಸಲಿದ್ದಾರೆ. ಕಚೇರಿ ಸಭಾಂಗಣದಲ್ಲಿ ಜ.26ರಂದು ಮಧ್ಯಾಹ್ನ 12.15 ಗಂಟೆಗೆ ಈ ಸಮಾರಂಭ ನಡೆಯುತ್ತಿದೆ. ಕಾರ್ಯದರ್ಶಿ ಸುಂದರೇಶ ಬಾಬೂ, ಕಲಬುರಗಿ ಶಿಕ್ಷಣ ಆಯುಕ್ತಾಲಯದ ಅಪರ ಆಯುಕ್ತ ಡಾ.ಆಕಾಶ ಶಂಕರ, ಶಾಲೆ ಮಕ್ಕಳು, ಸಿಬ್ಬಂದಿ ವರ್ಗ ಉಪಸ್ಥಿತರಿರುತ್ತಾರೆ.