ಅಂತರ್ಜಾಲ ವ್ಯಾಮೋಹ ಬಿಟ್ಟು ಭವಿಷ್ಯ ರೂಪಿಕೊಳ್ಳಿ: ಪ್ರೊ.ಟಿ.ಸಿ.ತಾರಾನಾಥ

KannadaprabhaNewsNetwork | Published : May 31, 2024 2:19 AM

ಸಾರಾಂಶ

ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣಗಳ ವ್ಯಾಮೋಹಕ್ಕೆ ತುತ್ತಾಗದೆ ತಮ್ಮ ಜವಾಬ್ದಾರಿಯನ್ನು ಅರಿತು ಭವಿಷ್ಯವನ್ನು ರೂಪಿಕೊಳ್ಳಬೇಕು ಎಂದು ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಸಿ.ತಾರಾನಾಥ ಕಿವಿಮಾತು ಹೇಳಿದರು. ಹಾಸನ ಮಹಿಳಾ ಕಾಲೇಜಿನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಹಿಳಾ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮ ಸಮಾರೋಪ

ಕನ್ನಡಪ್ರಭ ವಾರ್ತೆ ಹಾಸನ

ವಿದ್ಯಾರ್ಥಿನಿಯರು ಫೇಸ್‌ಬುಕ್, ಇನ್‌ಸ್ಟಾಗ್ರಾಂ ನಂತಹ ಸಾಮಾಜಿಕ ಜಾಲತಾಣಗಳ ವ್ಯಾಮೋಹಕ್ಕೆ ತುತ್ತಾಗದೆ ತಮ್ಮ ಜವಾಬ್ದಾರಿಯನ್ನು ಅರಿತು ಭವಿಷ್ಯವನ್ನು ರೂಪಿಕೊಳ್ಳಬೇಕು ಎಂದು ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಸಿ.ತಾರಾನಾಥ ಕಿವಿಮಾತು ಹೇಳಿದರು.

ನಗರದ ಎಂ.ಜಿ.ರಸ್ತೆಯಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್‌, ಎನ್‌ಸಿಸಿ, ಎನ್‌ಎಸ್‌ಎಸ್ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ‘ಎಲ್ಲಿ ಬೆಳಕು ಇರುತ್ತದೋ ಅಲ್ಲಿ ಕತ್ತಲೆಗೆ ಅವಕಾಶವಿಲ್ಲ, ಎಲ್ಲಿ ಜ್ಞಾನವಿರುತ್ತದೋ ಅಲ್ಲಿ ಅಜ್ಞಾನಕ್ಕೆ ಅವಕಾಶವಿಲ್ಲ. ಹೀಗಾಗಿ ಹೆಣ್ಣುಮಕ್ಕಳು ವಿದ್ಯೆ ಕಲಿತರೆ ಅವರ ಇಡೀ ಕುಟುಂಬ ಶಿಕ್ಷಿತರಾಗುತ್ತದೆ’ ಎಂದು ಹೇಳಿದರು.

‘ಜ್ಞಾನ ಮತ್ತು ಕ್ರಿಯಾಶಕ್ತಿ ಸಮ್ಮಿಲನಗೊಂಡು ವಿದ್ಯಾರ್ಥಿಗಳು ಇಚ್ಛೆ ಪಟ್ಟರೆ ಸಾಧನೆ ಸಾಧ್ಯವಾಗಲಿದೆ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿ ವಿಶಾಲವಾದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಶ್ರಮಪಟ್ಟರೆ ಅಸಾಧ್ಯ ಎಂಬ ಪದವೇ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾಗಬೇಕು’ ಎಂದು ಹೇಳಿದರು.

ಹಾಸನ ವಿಶ್ವವಿದ್ಯಾಲಯದ ಕುಲ ಸಚಿವ ಪ್ರೊ.ಪುಟ್ಟಸ್ವಾಮಿ ಮಾತನಾಡಿ, ‘ವಿದ್ಯಾರ್ಥಿಗಳು ಪ್ರತಿ ಹೆಜ್ಜೆಯನ್ನು ಇಡಬೇಕಾದರೆ ಪೋಷಕರನ್ನು ನೆನಪಿಸಿಕೊಳ್ಳಬೇಕು. ನಮ್ಮ ಮೇಲೆ ಜವಾಬ್ದಾರಿಯ ಜೊತೆಗೆ ಸಾಕಷ್ಟು ಋಣವಿದ್ದು, ಸಮಾಜ ನಮಗೆ ಏನನ್ನ ಕೊಟ್ಟಿದೆ ಅನ್ನೋದಕ್ಕಿಂತ ಸಮಾಜಕ್ಕೆ ನಾವು ಏನನ್ನ ಕೊಟ್ಟಿದ್ದೇವೆ ಎಂಬುದನ್ನು ಎಲ್ಲರೂ ಪ್ರಶ್ನಿಸಿಕೊಳ್ಳಬೇಕು’ ಎಂದು ಹೇಳಿದರು.

ಕೆಲವರು ಬದುಕಿದ್ದರೂ ಸತ್ತಂತೆ, ಇನ್ನು ಕೆಲವರು ಸತ್ತರೂ ಬದುಕಿದ್ದಂತೆ, ಹೀಗಾಗಿ ವಿದ್ಯಾರ್ಥಿಗಳು ತಮ್ಮ ಹೆಸರು ಸಮಾಜದಲ್ಲಿ ಉಳಿಯುವಂತ ರೀತಿಯಲ್ಲಿ ಕೆಲಸವನ್ನು ಮಾಡಬೇಕು. ಸೇವಾ ಮನೋಭಾವವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಸಾಹಿತಿ ಹಾಗೂ ಶಾಂತಿಗ್ರಾಮ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಎನ್.ಶೈಲಜ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿ ಮತ್ತು ಸಾಧನೆಯನ್ನು ಮುಟ್ಟಲು ಪರಿಶ್ರಮವನ್ನು ಹಾಕಬೇಕು. ಹೆಣ್ಣುಮಕ್ಕಳಿಕೆ ವಿದ್ಯಾಭ್ಯಾಸ ಮತ್ತು ಆರ್ಥಿಕ ಶಕ್ತಿ ಸಿಗುತ್ತಿದ್ದಂತೆ ಅನಾಹುತಗಳು ಸಹ ಹೆಚ್ಚಾಗುತ್ತಿದೆ. ಹದಿಹರೆಯದ ವಯಸ್ಸಿನಲ್ಲಿ ತಪ್ಪು ಹೆಜ್ಜೆಯನ್ನು ಇಡುತ್ತಿದ್ದೇವೆ, ಹೀಗಾಗಿ ಹೆತ್ತವರ ಪರಿಶ್ರಮವನ್ನು ನೆನೆಯಬೇಕು ಎಂದು ಹೇಳಿದರು.

ಹೆಣ್ಣುಮಕ್ಕಳ ಮೇಲೆ ಶೋಷಣೆ ಮತ್ತು ಕ್ರೌರ್ಯಗಳು ಹೆಚ್ಚಾಗುತ್ತಿದ್ದು, ಅದನ್ನು ದಿಟ್ಟವಾಗಿ ಎದುರಿಸಬೇಕು. ಪ್ರತಿಯೊಂದು ಹಂತದಲ್ಲೂ ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಿದ್ದು, ಸರಿಯಾದ ರೀತಿಯಲ್ಲಿ ಹೆಜ್ಜೆಯನ್ನು ಇಡಬೇಕು. ಸರ್ಕಾರ ಮತ್ತು ಸಮಾಜ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುವ ಮೂಲಕ ಸದೃಢ ಸಮಾಜವನ್ನು ಕಟ್ಟಬೇಕು ಎಂದು ಸಲಹೆ ನೀಡಿದರು.

ಪ್ರಾಂಶುಪಾಲರಾದ ಡಾ.ಕೆ.ಜಿ.ಕವಿತ ಮಾತನಾಡಿ, ಇತ್ತೀಚೆಗೆ ಮಾಧ್ಯಮಗಳಲ್ಲಿ ಆತಂಕದ ವಿಚಾರಗಳನ್ನೇ ಹೆಚ್ಚಾಗಿ ನೋಡುತ್ತಿದ್ದು, ಅದಕ್ಕೆ ಕೆಟ್ಟ ಮನಸ್ಥಿತಿಗಳೇ ಕಾರಣವಾಗಿದೆ, ಹೀಗಾಗಿ ಒಳ್ಳೆಯ ಮನಸ್ಥಿತಿಯನ್ನು ಹೊಂದಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಕೆ.ಬಿ.ಆಶಾ ನಿರೂಪಿಸಿದರು. ಎನ್‌ಎಸ್‌ಎಸ್ ಸಂಚಾಲಕ ಯೋಗೇಶ್ ವಂದಿಸಿದರು.

ಸಾಂಸ್ಕತಿಕ ಕಾರ್ಯದರ್ಶಿ ಡಾ.ಎಚ್.ಎನ್.ಹರೀಶ್, ಎನ್‌ಸಿಸಿ ಸಂಚಾಲಕ ಎಂ.ಸಿ.ಗಿರೀಶ್, ಯುವ ರೆಡ್‌ಕ್ರಾಸ್ ಮಹಿಳಾ ಘಟಕ ಸಂಚಾಲಕ ಡಾ.ಎಚ್.ಎನ್.ವೆಂಕಟೇಶ್, ಸ್ಕೌಟ್ಸ್ ಮತ್ತು ಗೈಡ್ಸ್‌ ಸಂಚಾಲಕಿ ಶಿಲ್ಪಶ್ರೀ ಆರ್., ದೈಹಿಕ ಶಿಕ್ಷಣ ನಿರ್ದೇಶಕ ಜಿ.ಪಿ.ಯೋಗೇಶ್, ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಇದ್ದರು.

Share this article