ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಕಾವೇರಿ ಕುಡಿಯುವ ನೀರು ಸರಬರಾಜು ಮಾಡುವ ಮಾರ್ಗದಲ್ಲಿ ಅಕ್ರಮವಾಗಿ ಸಂಪರ್ಕ ಪಡೆದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಾಸಕ ಕೆ.ಎಂ.ಉದಯ್ ಅಧಿಕಾರಿಗಳಿಗೆ ತಾಕೀತು ಮಾಡಿದರು.ಪಟ್ಟಣದ ಪುರಸಭೆ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಶನಿವಾರ ಆಡಳಿತಾಧಿಕಾರಿಗಳಾದ ಮಂಡ್ಯ ಉಪವಿಭಾಗಧಿಕಾರಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮದ್ದೂರು ಪಟ್ಟಣಕ್ಕೆ 24*7 ಯೋಜನೆಯಡಿ ನೀರು ಪೂರೈಕೆಯಲ್ಲಿ ಉಂಟಾಗಿರುವ ಲೋಪದ ಬಗ್ಗೆ ಸದಸ್ಯರು ಪಕ್ಷಾತೀತವಾಗಿ ಆರೋಪಿಸಿದರು.
ಮಳವಳ್ಳಿ ತಾಲೂಕು ಬಾಚನಹಳ್ಳಿಯಿಂದ ಮದ್ದೂರು ಪಟ್ಟಣಕ್ಕೆ ಕಾವೇರಿ ನೀರು ಪೂರೈಕೆ ಆಗುವ ವೇಳೆ ಕೆಲವು ಗ್ರಾಮಗಳಲ್ಲಿ ಅನಧಿಕೃತವಾಗಿ ಸಂಪರ್ಕ ಪಡೆದುಕೊಂಡಿದ್ದಾರೆ. ಇದರಿಂದ ಮದ್ದೂರಿಗೆ 24*7 ಪ್ರಕಾರ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ನದಾಫ್ ಸಭೆಗೆ ವಿವರಣೆ ನೀಡಿದರು.ಸದಸ್ಯರ ಆರೋಪದ ನಡುವೆ ಮಧ್ಯ ಪ್ರವೇಶ ಮಾಡಿದ ಶಾಸಕ ಉದಯ್, ಮದ್ದೂರು ಪಟ್ಟಣಕ್ಕೆ ಕಾವೇರಿ ನೀರು ಪೂರೈಸುವ ಮಾರ್ಗದಲ್ಲಿ ಅನಧಿಕೃತವಾಗಿ ಸಂಪರ್ಕ ಪಡೆದಿರುವ ಗ್ರಾಮಗಳ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಗ್ರಾಮಗಳ ಪಿಡಿಒ ಗಳಿಗೆ ಪತ್ರ ಬರೆದು ಪುರಸಭೆ ಷರತ್ತಿನ ಅನ್ವಯ ನೀರು ಪಡೆಯಲು ಮುಂದಾಗುವಂತೆ ತಾಪಂ ಇಒ ಸಂದೀಪ್ ಅವರಿಗೆ ಸೂಚನೆ ನೀಡಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಹೊಸದಾಗಿ ಹೂವು ಮತ್ತು ಹಣ್ಣು ಮಾರುಕಟ್ಟೆ. ಶಿವಪುರದ ಪುರಸಭೆ ಜಾಗದಲ್ಲಿ ಕೋಳಿ ಮತ್ತು ಕುರಿ ಮಾಂಸದ ಅಂಗಡಿಗಳ ಮಾರುಕಟ್ಟೆ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ. ಬೀದಿಬದಿ ವ್ಯಾಪಾರಸ್ಥರಿಗೆ ಬದಲಿ ವ್ಯವಸ್ಥೆ ಕಲ್ಪಿಸಲು ಈ ಯೋಜನೆ ಸಹಕಾರಿಯಾಗುತ್ತದೆ ಎಂದು ವಿವರಿಸಿದರು. ಇದಕ್ಕೆ ಸದಸ್ಯರು ಧ್ವನಿ ಮತದ ಮೂಲಕ ಅಂಗೀಕಾರ ನೀಡಿದರು.ಪಟ್ಟಣ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಕೆಮ್ಮಣ್ಣುನಾಲೆಗೆ ಒಂದುವರೆ ಕಿಲೋಮೀಟರ್ ಕವರ್ ಡೆಕ್ ನಿರ್ಮಾಣ, ನಾಲೆಯ ಎರಡು ಬದಿಯಲ್ಲಿ ರಸ್ತೆ ಅಭಿವೃದ್ಧಿ ಮತ್ತು ಒಳಚರಂಡಿ ನಿರ್ಮಾಣಕ್ಕೆ ಈಗಾಗಲೇ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ ಎಂದು ಸಭೆಗೆ ಉತ್ತರಿಸಿದರು.
ಪಟ್ಟಣದ ಮುಂದಿನ 30 ವರ್ಷಗಳ ಹಿತ ದೃಷ್ಟಿಯಿಂದ ಹಳೆಯ ಎಂ.ಸಿ. ರಸ್ತೆ ಅಗಲೀಕರಣಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಅಗಲೀಕರಣ ಕಾರ್ಯವನ್ನು 100 ಅಡಿಗೆ ಅಥವಾ 120 ಅಡಿಗೆ ವಿಸ್ತರಿಸಬೇಕೆಂದು ಕೆಲವು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಸಂಬಂಧ ಮುಂದಿನ ವಿಶೇಷ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು.ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ, ಸದಸ್ಯರಾದ ಎಂಐ ಪ್ರವೀಣ್, ಆದಿಲ್, ಕೋಕಿಲ ಆರುಣ, ವನಿತಾ, ಎಸ್.ಮಹೇಶ್, ಸಚಿನ್ ಮತ್ತಿತರ ಸದಸ್ಯರು ಭಾಗವಹಿಸಿದ್ದರು.