ಚನ್ನಗಿರಿ ಸಿಪಿಐ ವಿರುದ್ಧ ಕಾನೂನು ಹೋರಾಟ: ರಘು

KannadaprabhaNewsNetwork |  
Published : Oct 25, 2025, 01:00 AM IST
24ಕೆಡಿವಿಜಿ2-ದಾವಣಗೆರೆಯಲ್ಲಿ ಶುಕ್ರವಾರ ಹೊನ್ನೇಮರದಹಳ್ಳಿ ಬಿ.ಆರ್.ರಘು, ಕಾನೂನು ವಿದ್ಯಾರ್ಥಿನಿ ವಿ.ಚಂದ್ರನಾ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಇಡೀ ಗ್ರಾಮ, ತೋಟ, ಗದ್ದೆಗಳನ್ನೇ ಜಲಾವೃತಗೊಳಿಸುವ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಪ್ರಶ್ನಿಸಿದ ಮಹಿಳೆಯರು ಸೇರಿ ಗ್ರಾಮಸ್ಥರ ಮೇಲೆ ದೌರ್ಜನ್ಯ ಮಾಡಿ, ಕೇಸ್ ದಾಖಲಿಸಿದ್ದಲ್ಲದೇ ಅಟ್ರಾಸಿಟಿ ಕೇಸ್ ಹಾಕುವ ಬೆದರಿಕೆ ಹಾಕಿದ ಚನ್ನಗಿರಿ ವೃತ್ತ ನಿರೀಕ್ಷಕ ರವೀಶ್ ವಿರುದ್ಧ ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗದ ಜತೆಗೆ ಕಾನೂನು ಹೋರಾಟವನ್ನೂ ನಡೆಸುವುದಾಗಿ ಚನ್ನಗಿರಿ ತಾ. ಹೊನ್ನೆಮರದಹಳ್ಳಿ ಹಾಗೂ ಬೊಮ್ಮೇನಹಳ್ಳಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಇಡೀ ಗ್ರಾಮ, ತೋಟ, ಗದ್ದೆಗಳನ್ನೇ ಜಲಾವೃತಗೊಳಿಸುವ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಪ್ರಶ್ನಿಸಿದ ಮಹಿಳೆಯರು ಸೇರಿ ಗ್ರಾಮಸ್ಥರ ಮೇಲೆ ದೌರ್ಜನ್ಯ ಮಾಡಿ, ಕೇಸ್ ದಾಖಲಿಸಿದ್ದಲ್ಲದೇ ಅಟ್ರಾಸಿಟಿ ಕೇಸ್ ಹಾಕುವ ಬೆದರಿಕೆ ಹಾಕಿದ ಚನ್ನಗಿರಿ ವೃತ್ತ ನಿರೀಕ್ಷಕ ರವೀಶ್ ವಿರುದ್ಧ ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗದ ಜತೆಗೆ ಕಾನೂನು ಹೋರಾಟವನ್ನೂ ನಡೆಸುವುದಾಗಿ ಚನ್ನಗಿರಿ ತಾ. ಹೊನ್ನೆಮರದಹಳ್ಳಿ ಹಾಗೂ ಬೊಮ್ಮೇನಹಳ್ಳಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಯುವ ಮುಖಂಡ ಬಿ.ಆರ್.ರಘು, ಹೊನ್ನೆಮರದಹಳ್ಳಿ-ಬೊಮ್ಮೇನಹಳ್ಳಿ ಮಧ್ಯೆ ಅವೈಜ್ಞಾನಿಕ ಕಾಮಗಾರಿ ಕೈಗೊಂಡಿದ್ದು, ಇದನ್ನು ಗ್ರಾಪಂ ಪಿಡಿಓಗೆ ಪ್ರಶ್ನಿಸಿ, ಕಾಮಗಾರಿ ನಿಲ್ಲಿಸುವಂತೆ ಮನವಿ ಮಾಡಿದ್ದರೂ ಪಿಡಿಒ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಎಂದರು.

ಪಿಡಿಒ ನೀಡಿದ ದೂರನ್ನೇ ಬಂಡವಾಳ ಮಾಡಿಕೊಂಡ ಸಿಪಿಐ ರವೀಶ್ ಕಾಮಗಾರಿಗೆ ಆಕ್ಷೇಪಿಸಿದ ಗ್ರಾಮದ ಮಹಿಳೆಯರು, ಹಿರಿಯರು, ಪುರುಷರು, ಯುವ ಜನರನ್ನು ಅವಾಚ್ಯವಾಗಿ ನಿಂದಿಸಿ, ಮಹಿಳೆಯರ ಬಗ್ಗೆಯೂ ಕೇವಲವಾಗಿ ಮಾತನಾಡಿದ್ದಾರೆ. ಪಿಡಿಓ ನೀಡಿದ್ದ ದೂರಿಗೂ, ಅಟ್ರಾಸಿಟಿ ಕೇಸ್‌ಗೂ ಸಂಬಂಧವೇ ಇಲ್ಲ. ಆದರೂ, 16 ಜನರ ವಿರುದ್ಧ ಕೇಸ್ ಮಾಡಿ, ಎಲ್ಲರ ಮೇಲೂ ಅಟ್ರಾಸಿಟಿ ಕೇಸ್ ದಾಖಲಿಸುವ ಬೆದರಿಕೆಯನ್ನು ಸಿಪಿಐ ರವೀಶ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅವೈಜ್ಞಾನಿಕ, ಕಳಪೆ ಕಾಮಗಾರಿ ಪ್ರಶ್ನಿಸಿದ್ದೇ ಅಪರಾಧವಾದರೆ ನಮ್ಮ ದೇಶದ ಸಂವಿಧಾನಕ್ಕೆ, ಕಾನೂನಿಗೆ ಬೆಲೆಯೇ ಇಲ್ಲವೇ? ನಮ್ಮ ಊರಿನ ಕಾಮಗಾರಿ ವಿಚಾರವನ್ನು ಚನ್ನಗಿರಿ ಸಿಪಿಐ ರವೀಶ್ ವೈಯಕ್ತಿಕವಾಗಿ, ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆಂಬುದೇ ಯಕ್ಷಪ್ರಶ್ನೆಯಾಗಿದೆ. ಸಿಪಿಐ ರವೀಶ್ ದುರ್ವರ್ತನೆ, ದೌರ್ಜನ್ಯ, ಬೆದರಿಕೆ ಹಾಕುವ, ಅಟ್ರಾಸಿಟಿ ಕೇಸ್ ಧಮ್ಕಿ ಹಾಕುವುದೆಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಎಂದರು.

ಪೂರ್ವ ವಲಯ ಐಜಿಪಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಗ್ರಾಮಕ್ಕೆ ತಾವೇ ಖುದ್ದಾಗಿ ಭೇಟಿ ನೀಡುವುದಾಗಿ ಎಸ್ಪಿ ಹೇಳಿದ್ದರೂ ಹೇಳಿದಂತೆ ಗ್ರಾಮಕ್ಕೆ ಭೇಟಿ ನೀಡಿಲ್ಲ. ತಮ್ಮ ಊರಿನ ಪ್ರಕರಣ, ಸಿಪಿಐ ರವೀಶ್ ವಿರುದ್ಧದ ಹೋರಾಟವನ್ನು ನಾವು ಹೈಕೋರ್ಟ್, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಹೋರಾಡುವುದಕ್ಕೂ ಸಿದ್ಧರಿದ್ದೇವೆ. ಮಹಿಳಾ ಆಯೋಗದ ಅಧ್ಯಕ್ಷರಿಗೂ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.

ದೌರ್ಜನ್ಯಕ್ಕೊಳಗಾದ ಎಂಜಿನಿಯರಿಂಗ್ ಪದವೀಧರೆ, ಕಾನೂನು ವಿದ್ಯಾರ್ಥಿನಿ ವಿ.ಚಂದನಾ ಮಾತನಾಡಿ, ಮಹಿಳೆಯರನ್ನು ಅವಾಚ್ಯವಾಗಿ ನಿಂದಿಸಿ, ಕಾಮಗಾರಿ ಅಡ್ಡಿಪಡಿಸಿದ್ದಾರೆಂದು ತಹಸೀಲ್ದಾರ್ ನ್ಯಾಯಾಲಯದಲ್ಲೂ ಸಿಪಿಐ ರವೀಶ್ ತಮ್ಮೂರಿನ ಜನರು, ಮಹಿಳೆಯರ ಮೇಲೂ ಕೇಸ್ ಮಾಡಿದ್ದಾರೆ. ಅವೈಜ್ಞಾನಿಕ ಕಾಮಗಾರಿ ಪ್ರಶ್ನಿಸುವುದೆ ತಪ್ಪಾ? ಎಂದು ಪ್ರಶ್ನಿಸಿದರು.

ಝೀರೋ ಎಫ್ಐಆರ್ ಹಾಕುವುದಕ್ಕೂ ಮಹಿಳಾ ಠಾಣೆ ಅಧಿಕಾರಿ, ಸಿಬ್ಬಂದಿ ಹಿಂದೇಟು ಹಾಕಿದರು. ಮಹಿಳಾ ಠಾಣೆ ಸಿಪಿಐಗೆ ಕರೆ ಮಾಡಿ ಐದಾರು ಗಂಟೆ ನಂತರ ಠಾಣೆಗೆ ಬಂದರೂ, ದೂರು ದಾಖಲಿಸಿಕೊಳ್ಳದೇ, ನಮ್ಮ ದೂರನ್ನು ಮಾತ್ರ ಪಡೆದು ವಾಪಾಸ್ ಕಳಿಸಿದರು ಎಂದರು.

ಹೊನ್ನೇಮರದಹಳ್ಳಿ ಗ್ರಾಮಸ್ಥರಾದ ಜಿ.ವಿ.ರುದ್ರೇಶ, ಜಿ.ಎನ್.ಲೋಕೇಶ್ವರಪ್ಪ, ಎಸ್.ಆರ್.ಶಾಂತವೀರಪ್ಪ, ಎಚ್.ಜಿ.ಉಮಾಪತಿ, , ಬೊಮ್ಮೇನಹಳ್ಳಿ ಪ್ರಸನ್ನಕುಮಾರ, ಎಲ್.ಎಸ್.ಚಂದ್ರಪ್ಪ, ಬಿ.ಜೆ.ಶಿವರಾಜ, ಎಚ್.ಜಿ.ಶಶಿಕುಮಾರ ಇತರರು ಇದ್ದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ