ಆನಂದ್ ಎಂ. ಸೌದಿ
ಜಿಲ್ಲೆಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಂಪನಿಗಳ ಪೈಕಿ, ಅನೇಕವು ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ. ಅಪಾಯಕಾರಿ ರಾಸಾಯನಿಕ -ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡದಿರುವುದರಿಂದ, ಪರಿಸರ-ಜಲ ಹದಗೆಟ್ಟು ಈ ಭಾಗದ ಜೀವ ಸಂಕುಲಕ್ಕೆ ಆಪತ್ತು ಕಾದಿದೆ. ಕ್ರಮ ಕೈಗೊಳ್ಳಬೇಕಾದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ವಿಷಕಾರಿ ಕಂಪನಿಗಳಿಗೆ ಮತ್ತೇ ಪರವಾನಗಿ ಕೊಡುತ್ತಿರುವುದು ಆತಂಕ ಮೂಡಿಸಿದೆ ಎಂದು ದೂರಿ " ಕಂಪನಿ ಹಠಾವೋ, ಕಡೇಚೂರು ಬಚಾವೋ " ಮತ್ತು ಬಳ್ಳಾರಿ ಜಿಲ್ಲೆ ಸಂಡೂರಿನ ಜನಸಂಗ್ರಾಮ ಪರಿಷತ್ ಹೋರಾಟ ಸಮಿತಿ ಜಂಟಿಯಾಗಿ ಕಾನೂನು ಸಮರಕ್ಕೆ ಮುಂದಾಗಿದೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ಸಲಹೆಗಳ ಮೇರೆಗೆ, ದೆಹಲಿ ಮೂಲದ ಪ್ರಖ್ಯಾತ ವಕೀಲರೊಬ್ಬರನ್ನು ಸಂಪರ್ಕಿಸಿ, ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಇಲಾಖೆಗೆ ಷರತ್ತುಗಳ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ವಿರುದ್ಧ ವಿವರವಾದ ದಾಖಲೆಗಳು, ಸಾಕ್ಷಿಗಳ ಸಮೇತ ದೂರು ನೀಡಿದೆ.ಕಡೇಚೂರು ಕೈಗಾರಿಕಾ ಪ್ರದೇಶದ ಸುಮಾರು 15ಕ್ಕೂ ಹೆಚ್ಚು ಹಳ್ಳಿಗಳಲ್ಲಿನ ಒಂದು ಲಕ್ಷಕ್ಕೂ ಅಧಿಕ ಜನರ ಜೀವಕ್ಕೆ ಹಾಗೂ ಜಲ-ಜೀವ ಸಂಕುಲಕ್ಕೆ ಮಾರಕವಾಗಿರುವ ಕಾರ್ಖಾನೆಗಳ ಪರಿಸರ ಪರವಾನಗಿ ರದ್ದತಿಗೆ ಮನವಿ ಮಾಡಿದ್ದಾರೆ. ಕಾರ್ಖಾನೆಗಳನ್ನು ಸ್ಥಾಪಿಸುವ ಮುನ್ನ ಭೂಸಂತ್ರಸ್ತರ ಜೊತೆ ಸರ್ಕಾರ ನಡೆಸಿದ ಒಪ್ಪಂದ ಹಾಗೂ ಈಗ ಒಪ್ಪಂದ ಉಲ್ಲಂಘನೆ ಪ್ರಕರಣಗಳನ್ನು ಹಾಗೂ ಪಂಚಾಯ್ತಿಗಳ ಠರಾವುಗಳನ್ನು ಮುಂದಿಟ್ಟುಕೊಂಡು, ಅರ್ಜಿ ಸಲ್ಲಿಸಲಾಗಿದೆ.
ಈ ಹಿಂದೆ, ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದಿಸಿ, ಅಕ್ರಮ ಗಣಿಗಾರಿಕೆ ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದ ಹಿರಿಯ ನ್ಯಾಯವಾದಿಗಳ ತಂಡ ಪ್ರಮುಖರೊಬ್ಬರು ಇದಕ್ಕೆ ಪೂರಕವಾಗಿ ಈ ಕಾನೂನು ಹೋರಾಟಕ್ಕೆ ಬೆಂಬಲಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗಾರಿಕೆಗಳಿಗೆ ಮಣೆ ಹಾಕಿ, ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಉಚಿತ ಕಾನೂನು ಸಲಹೆ ಮೂಲಕ ಮುಂದಾಗಿದ್ದಾರೆ. ಮತ್ತೇ 3 ಸಾವಿರಕ್ಕೂ ಅಧಿಕ ಹೆಚ್ಚುವರಿ ಕೃಷಿ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದ ಸರ್ಕಾರದ ಕ್ರಮದ ಬಗ್ಗೆಯೂ ಈ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
- ಮಲ್ಲಿಕಾರ್ಜುನ ರೆಡ್ಡಿ ಚಾಗನೂರು, ಜನಸಂಗ್ರಾಮ ಪರಿಷತ್, ಬಳ್ಳಾರಿ.