
ಗದಗ: ಬಸವಾದಿ ಶರಣರ ವಚನಗಳು ಸಾರ್ವತ್ರಿಕ ಮನ್ನಣೆಯೊಂದಿಗೆ ಸರ್ವಸಮ್ಮತ ಮೌಲ್ಯಗಳ ಆಗರವಾಗಿದ್ದು, ಸಮಾಜದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕಾಗಿ ಕಾನೂನಿನ ಬಲ ತಂದು ಅವುಗಳನ್ನು ಸಶಕ್ತೀಕರಣಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಶ್ರೀಗಳ ಹೆಸರಿನಲ್ಲಿ ವಚನ ಪಾಠಶಾಲೆ ಉದ್ಘಾಟನೆ ಮಾಡಿದ್ದು ಸಂತಸದ ಸಂಗತಿ. ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳು ನಮ್ಮ ನಡುವೆ ಇದ್ದರೆ ರಾಜ್ಯ ಸರ್ಕಾರ ವಚನಗಳಿಗೆ ಕಾನೂನಿನ ಬಲತುಂಬಲು ಹೊರಟಿರುವ ನಡೆಯನ್ನು ಖಂಡಿತಾ ಶ್ಲಾಘಿಸುತ್ತಿದ್ದರು. ಬಸವತತ್ವಗಳ ಕಟ್ಟುನಿಟ್ಟಿನ ಪರಿಪಾಲಕರಾಗಿದ್ದ ಲಿಂ. ಸಿದ್ಧಲಿಂಗ ಶ್ರೀಗಳು ತೋಂಟದಾರ್ಯ ಮಠದ ಜಾತ್ರೆಗೆ ಹೊಸ ಭಾಷ್ಯ ಬರೆದು ಜಾತ್ರೆಗಳನ್ನು ಜನೋಪಯೋಗಿ ಹಾಗೂ ಸಮಾಜಮುಖಿಯಾಗಿ ಆಚರಿಸುವ ಪರಂಪರೆ ಹಾಕಿಕೊಟ್ಟರು. ಪುಸ್ತಕಗಳನ್ನು ಪ್ರಕಟಿಸುವ, ಹಂಚುವ ಮುಖೇನ ಕೇವಲ ಧಾರ್ಮಿಕತೆಗೆ ಸೀಮಿತವಾಗಿದ್ದ ಜಾತ್ರೆಗಳನ್ನು ಸಾಂಸ್ಕೃತಿಕವಾಗಿ ಮಾರ್ಪಡಿಸಿದರು.
ಹೆಸರಾಂತ ಸಾಹಿತಿಗಳಾದ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಕುರಿತ ಗ್ರಂಥಗಳನ್ನು ಬಿಡುಗಡೆ ಮಾಡುವ ಭಾಗ್ಯ ನನಗೆ ದೊರೆತಿದೆ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕೇವಲ ಸಾಹಿತಿಯಲ್ಲ, ಬದಲಿಗೆ ಸಂಘ- ಸಂಸ್ಥೆಗಳು ಮಾಡುವ ಕಾರ್ಯವನ್ನು ಏಕವ್ಯಕ್ತಿಯಾಗಿ ನಿರ್ವಹಿಸಿದ್ದಾರೆ. ವಚನಗಳು ಕೇವಲ ಸಭೆ- ಸಮಾರಂಭಗಳ ಭಾಷಣದ ಉಲ್ಲೇಖಕ್ಕೆ ಸೀಮಿತವಾಗದೇ ಪ್ರತಿಯೊಬ್ಬರ ಬದುಕಿನಲ್ಲಿ ಜಾರಿಯಾದಾಗ ನಮ್ಮಷ್ಟು ಸುಸಂಸ್ಕೃತ ಸಮಾಜ ಬೇರೆಲ್ಲೂ ಇರುವುದಿಲ್ಲ ಎಂದರು.ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ, ಮಾತನಾಡಿ, ಸಿದ್ಧಲಿಂಗ ಶ್ರೀಗಳು ಪೂರ್ವಾಶ್ರಮದ ಹೆಸರು ಸಿದ್ಧರಾಮ. ಇಂದಿನ ನಮ್ಮ ಪೂಜ್ಯರ ಹೆಸರು ಸಿದ್ಧರಾಮ ಸ್ವಾಮಿಗಳು. ಹೀಗೆ ಲಿಂಗೈಕ್ಯ ಗುರುಗಳ ಪ್ರತಿರೂಪವೇ ಇಂದಿನ ಶ್ರೀಗಳಾಗಿದ್ದಾರೆ. ಅವರ ಪಟ್ಟಾಧಿಕಾರ ರಜತ ಮಹೋತ್ಸವ ಸಮಾರಂಭದಲ್ಲಿ ನನ್ನಿಂದ ಕಲ್ಯಾಣದ ಹಾದಿ ಗ್ರಂಥವನ್ನು ಬರೆಸಿದರು. ಇಂದಿನ ಅವರ ಜಯಂತಿಯಲ್ಲಿ ನನ್ನ ಕುರಿತು ಪುಸ್ತಕ ಬಿಡುಗಡೆಯಾಗುತ್ತಿರುವುದು ನನ್ನ ಸೌಭಾಗ್ಯವಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾದರು. ಇದೇ ಸಂದರ್ಭದಲ್ಲಿ ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟಗೊಂಡ ತೋಂಟದಾರ್ಯ ಸಂಸ್ಥಾನಮಠ ಸಾಹಿತ್ಯ ಪ್ರಕಟಣೆಗಳು, ತಾತ್ವಿಕ ಸ್ವರೂಪ, ಮಾಯದಂಥಾ ಬೆಳದಿಂಗಳ, ಚಲವಾದಿ ಗೌರಮ್ಮನ ಕಥೆಗಳು ಗ್ರಂಥಗಳು ಲೋಕಾರ್ಪಣೆಗೊಂಡವು. ತೋಂಟದಾರ್ಯ ಮಠದ ವಚನ ಪಾಠಶಾಲೆಯ ಉದ್ಘಾಟನೆ ನೆರವೇರಿತು.ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮುಂತಾದವರು ಮಾತನಾಡಿದರು. ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಂದ ವಚನ ನೃತ್ಯ ಜರುಗಿತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಆಶೀರ್ವಚನ ನೀಡಿದರು.
ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೈರನಹಟ್ಟಿ ಮಠದ ಶಾಂತಲಿಂಗ ಶ್ರೀಗಳು, ಆಳಂದದ ಕೋರಣೇಶ್ವರ ಶ್ರೀಗಳು ಸಮ್ಮುಖ ವಹಿಸಿದ್ದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕಿ ಸೀಮಾ ಮಸೂತಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ, ಶಶಿ ಸಾಲಿ, ಹೇಮಾ ಪಟ್ಟಣಶೆಟ್ಟಿ, ಗ್ರಂಥಗಳ ಲೇಖಕ ಶಶಿಧರ ತೋಡಕರ, ವಿದ್ಯಾವತಿ ಅಕ್ಕಿ, ವೆಂಕಟಾಪೂರ ಶರಣರು ಮುಂತಾದವರು ಇದ್ದರು. ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳ ಭಕ್ತರು-ಅಭಿಮಾನಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕಿಂತಲೂ ಮೊದಲು ಭೀಷ್ಮಕೆರೆಯಲ್ಲಿರುವ ಬಸವೇಶ್ವರ ಮೂರ್ತಿಯಿಂದ ಭಾವೈಕ್ಯತಾ ಮೆರವಣಿಗೆ ಜರುಗಿತು.