ಹನೂರು: ತಾಲೂಕಿನ ಇಂಡಿಗನತ್ತ ಬಳಿ ಬಾಲಕನನ್ನು ಬಲಿ ಪಡೆದ ಚಿರತೆ ಸೆರೆಗೆ ಅರಣ್ಯ ಇಲಾಖೆ ಕೂಂಬಿಂಗ್ ನಡೆಸುತ್ತಿದ್ದು, 30ಕ್ಕೂ ಅಧಿಕ ಮಂದಿ ಈ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ, ಮತ್ತೊಂದೆಡೆ ಚಿರತೆಯೊಂದು ಎರಡು ಮೇಕೆಗಳನ್ನು ಹೊತ್ತೊಯ್ದ ಘಟನೆ ಸೋಮವಾರ ರಾತ್ರಿ ನಾಗಮಲೆ ಗ್ರಾಮದಲ್ಲಿ ನಡೆದಿದೆ. ಕುಳಿಯಮ್ಮ ಮತ್ತು ಗೌರಿ ಎಂಬುವವರಿಗೆ ಸೇರಿದ ಎರಡು ಮೇಕೆಗಳನ್ನು ಹೊತ್ತೊಯ್ದಿದ್ದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿರತೆ ಭೀತಿಯಲ್ಲಿ ಗ್ರಾಮಸ್ಥರು: ಚಿರತೆಯು ದಾಳಿ ಘಟನೆಗಳಿಂದ ಅರಣ್ಯ ಭಾಗದಲ್ಲಿರುವ ಇಂಡಿಗನತ್ತ, ಪಡಸಲನತ್ತ ಹಾಗೂ ನಾಗಮಲೆ, ತುಳಸಿಕೆರೆ ಸೇರಿ ವಿವಿಧ ಗ್ರಾಮಗಳಲ್ಲಿ ನಿವಾಸಿಗಳು ಚಿರತೆ ಭೀತಿಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ಕೊಟ್ಟು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.