ಕಿಕ್ಕೇರಿ:
ಗ್ರಾಮದ ದಿನೇಶ್ ಅವರ ಜಮೀನು ಬಳಿ ಅರಣ್ಯ ಇಲಾಖೆ ಇರಿಸಲಾಗಿದ್ದ ಬೋನಿನಲ್ಲಿ ಸುಮಾರು 5 ವರ್ಷದ ಗಂಡು ಚಿರತೆ ಸೆರೆಯಾಗಿದ್ದು, ಈ ಚಿರತೆ ಗೊಲ್ಲರಕೊಪ್ಪಲು, ತೆಂಗಿನಘಟ್ಟ, ಗೋವಿಂದನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಆಗಿಂದಾಗ್ಗೆ ಗೋಚರಿಸುತ್ತ ರೈತರ ಜಾನುವಾರುಗಳಾದ ಕುರಿ, ಮೇಕೆ, ಕೋಳಿ, ಸಾಕು ನಾಯಿಗಳ ಮೇಲೆ ದಾಳಿ ಮಾಡಿ ಕೊಂದು ತಿಂದು ಹಾಕುತ್ತಿತ್ತು.
ಚಿರತೆ ಕಾಟಕ್ಕೆ ರೋಸಿ ಹೋಗಿದ್ದ ರೈತಾಪಿ ಜನತೆ ತಾಲೂಕು ವಲಯ ಅರಣ್ಯ ಇಲಾಖೆಯವರಿಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿ ಮೇರೆ ಸುತ್ತಮುತ್ತಲ ಪ್ರದೇಶ ವೀಕ್ಷಣೆ ಮಾಡಿದ ವಲಯ ಅರಣ್ಯ ಇಲಾಖೆಯವರು ಗೊಲ್ಲರಕೊಪ್ಪಲು ಗ್ರಾಮದಲ್ಲಿ ಚಿರತೆ ಸೆರೆಗಾಗಿ ಈಚೆಗೆ ಬೋನು ಇರಿಸಿದ್ದರು.ನಿತ್ಯವೂ ಚಿರತೆ ಚಲನವಲನವನ್ನು ಸಿಬ್ಬಂದಿ ಗಮನಿಸುತ್ತಿದ್ದರು. ಭಾನುವಾರ ರಾತ್ರಿ ಬೋನಿನಲ್ಲಿದ್ದ ನಾಯಿ ತಿನ್ನಲು ಬಂದು ಚಿರತೆ ಸೆರೆಯಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಚಿರತೆ ವೀಕ್ಷಿಸಲು ಸ್ಥಳಕ್ಕೆ ತಂಡೋಪತಂಡವಾಗಿ ಆಗಮಿಸಿದ್ದರು.
ಈ ವೇಳೆ ತಾಲೂಕು ಅರಣ್ಯ ವಲಯಾಧಿಕಾರಿ ವನಿತಾ, ಉಪವಲಯ ಅರಣ್ಯಅಧಿಕಾರಿ ಚೇತನ್, ಅರಣ್ಯಪಾಲಕ ರಕ್ಷಕಿ ಅಭಿ, ಸಿಬ್ಬಂದಿ ರವಿಕುಮಾರ್, ಶ್ರೀನಿವಾಸ್, ಚಿರತೆ ಕಾರ್ಯ ಪಡೆಯ ಸಿಬ್ಬಂದಿ ಮತ್ತಿತರರಿದ್ದರು.