ಮುಂಡರಗಿ: ಮಕ್ಕಳಿಗೆ ಶಾಲೆಯಲ್ಲಿ ಸಂಸತ್ ರಚನೆ ಮಾಡುವ ಮೂಲಕ ದೇಶದ ಸಂಸತ್ತಿನಲ್ಲಿ ಕಾರ್ಯನಿರ್ವಹಿಸುವ ಮಂತ್ರಿಗಳು ಹಾಗೂ ಕಾರ್ಯ ಕಲಾಪಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಹೇಳಿದರು.
ಸಂಸತ್ತಿನಲ್ಲಿ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳು ವರ್ಷಪೂರ್ತಿ ಜರುಗುವ ಎಲ್ಲ ಚಟುವಟಿಕೆಗಳನ್ನು ಉತ್ತಮವಾಗಿ ಸಂಘಟಿಸುವ ಮೂಲಕ ವೈದ್ಯವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾ. ಫಕೀರಸಾಬ್ ಕಲಕೇರಿ ಶಾಲಾ ಸಂಸತ್ ಉದ್ಘಾಟಿಸಿ ಮಾತನಾಡಿ, ನೆಲ್ಸನ್ ಮಂಡೇಲಾ ಅವರ ಜೀವನ ಕುರಿತು ಮಕ್ಕಳಿಗೆ ವಿವರಿಸಿ, ಶಾಲಾ ಸಂಸತ್ತು ಎಂದರೇನು? ಅದರ ಕಾರ್ಯಚಟುವಟಿಕೆಗಳ ಕುರಿತು ವಿವರವಾಗಿ ತಿಳಿಸಿದರು.ವಿಶ್ರಾಂತ ಮುಖ್ಯೋಪಾಧ್ಯಾಯ ಎಸ್.ಆರ್. ರಿತ್ತಿ ಮಾತನಾಡಿ, ಮಕ್ಕಳು ಪ್ರತಿದಿನ ಮಗ್ಗಿ ಹೇಳುವುದನ್ನು ರೂಢಿಸಿಕೊಳ್ಳಬೇಕು. ಬೇಗ ಮಲಗಿ, ಬೇಗ ಏಳುವ ಮೂಲಕ ದೇಶದ ಗುರುಕುಲ ವ್ಯವಸ್ಥೆಯನ್ನು ಅರಿತು ಗುರುಗಳು ಹೇಳುವ ಮಾತುಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಪ್ರಸ್ತುತ ವರ್ಷದ ಎಸ್ಎಸ್ಎಲ್ಸಿ ಮಕ್ಕಳಿಗೆ ಗ್ರಾಫ್ ಪುಸ್ತಕಗಳನ್ನು ಕೊಡಮಾಡಿದರು.
ಅಧ್ಯಕ್ಷರ ಪರವಾಗಿ ಸಂಸ್ಥೆಯ ಗೌರವ ಕಾರ್ಯದರ್ಶಿ ಕೊಟ್ರೇಶ ಅಂಗಡಿ ಮಾತನಾಡಿ, ಮಕ್ಕಳಿಗೆ 12ನೇ ಶತಮಾನದ ಬಸವಣ್ಣನವರ ಸಂಸತ್ ಕಲ್ಪನೆಯನ್ನು ತಿಳಿಸಿ, ಶಾಲಾ ಸಂಸತ್ತಿನ ಸದಸ್ಯರು ಶಾಲೆಯಲ್ಲಿ ಜರುಗಲಿರುವ ವಿವಿಧ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳಲು ₹10 ಸಾವಿರ ಅನುದಾನವನ್ನು ಬಿಡುಗಡೆ ಮಾಡುವಂತೆ ಶಾಲಾ ಮುಖ್ಯೋಪಾಧ್ಯಾಯರಿಗೆ ತಿಳಿಸಿದರು.