ಶಿಗ್ಗಾಂವಿ: ಕ್ಷೇತ್ರದ ಉಪಚುನಾವಣೆಯಲ್ಲಿ ಕಾರ್ಯಕರ್ತರು ಪ್ರತಿ ಬೂತ್ ಮಟ್ಟದ ಮತದಾರರ ಮನಸ್ಸು ಗೆಲ್ಲಬೇಕು. ಬೂತ್ ಮಟ್ಟದ ಅಧ್ಯಕ್ಷರು ಮತ್ತು ಸದಸ್ಯರು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಸಂಘಟನೆ ಮಾಡಬೇಕು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವ ಮುಂಚೂಣಿಯ ಪಕ್ಷವಾಗಿ ಬಿಂಬಿಸಿದ್ದು, ಇಂದು ಕರ್ನಾಟಕದಲ್ಲಿ ಬಲಿಷ್ಠ ಪಕ್ಷವಾಗಿ, ಸಾಮಾನ್ಯ ಜನರ ಪರ ಆಡಳಿತ ನಡೆಸುತ್ತಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಬಸವರಾಜ ಬೊಮ್ಮಾಯಿ ಸತತ ಎರಡು ಅವಧಿಗೂ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದರೂ ಹಲವು ಸಮಸ್ಯೆಗಳು ಈ ಕ್ಷೇತ್ರದಲ್ಲಿವೆ. ಕೇವಲ ಅಧಿಕಾರ ಪಡೆಯಬೇಕು ಎಂದು ಕ್ಷೇತ್ರ ಬಿಟ್ಟು ಕೇಂದ್ರಕ್ಕೆ ಹೋಗಿದ್ದಾರೆ. ಇಂತಹ ವ್ಯಕ್ತಿಯನ್ನು ನೀವು ಬೆಂಬಲಿಸಿ ತಪ್ಪು ಮಾಡಿದಿರಿ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಬಡವರ ಪರವಾಗಿದ್ದು, ತಾವೆಲ್ಲ ಪಕ್ಷಕ್ಕೆ ದುಡಿಯಬೇಕು ಎಂದರು.ಯಾಸಿರ್ ಖಾನ್ ಪಠಾಣ್ ಮಾತನಾಡಿ, ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಣ ತೊಟ್ಟಿದೆ. ಬಡವರ ಪರ ಯೋಜನೆಗಳನ್ನು ಜಾರಿಗೆ ತರುತಿದ್ದು, ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಸಹಕಾರ, ಸಹಮತ ನೀಡಿ ಎಂದರು.
ಕಾರ್ಯಕ್ರಮದಲ್ಲಿ ಗಡಿ ಪ್ರದೇಶಾಭಿವೃದ್ಧಿ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಸಚಿವ ಆರ್. ಶಂಕರ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಮಂಜುನಾಥ ಕುನ್ನೂರ, ರಾಜು ಕುನ್ನೂರ, ವಿನೋದ ಅಸೋಟಿ, ರಾಜೇಶ್ವರಿ ಪಾಟೀಲ, ಪ್ರೇಮಾ ಪಾಟೀಲ್ ಪಕ್ಷದ ಕಾರ್ಯಕರ್ತರು ಇದ್ದರು.