ಲವ್ ಜಿಹಾದ್‌ ತಡೆಗೆ ಹಿಂದೂಗಳೆಲ್ಲ ಒಂದಾಗಲಿ: ಪ್ರಮೋದ ಮುತಾಲಿಕ್‌

KannadaprabhaNewsNetwork | Published : Jun 2, 2025 12:35 AM
ಹೆಣ್ಣು ಮಕ್ಕಳು ಲವ್‌ ಜಿಹಾದ್‌ಗೆ ಒಳಗಾದಾಗ ಆ ಜಾತಿ, ಈ ಜಾತಿ ಎನ್ನದೇ ಹಿಂದೂಗಳೆಲ್ಲ ಒಂದಾಗಿ ರಕ್ಷಣೆ ಮಾಡಬೇಕು. ಪಹಲ್ಗಾಂನಲ್ಲಿ ಭಯೋತ್ಪಾದಕರು ಜಾತಿ ಕೇಳಿ ಪ್ರವಾಸಿಗರ ಕೊಲ್ಲಲಿಲ್ಲ, ಬದಲಾಗಿ ಹಿಂದೂ ಎಂದು ಕೇಳಿ ಗುಂಡು ಹೊಡೆದರು. ಇದರಿಂದ ಹಿಂದೂಗಳಾದ ನಾವು ಪಾಠ ಕಲಿತು ಎಲ್ಲರೂ ಒಂದಾಗಿ ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚಾರ- ವಿಚಾರ ಉಳಿಸಬೇಕಿದೆ.

ಹುಬ್ಬಳ್ಳಿ: ದೇಶ ಮತ್ತು ರಾಜ್ಯದಲ್ಲಿ ವ್ಯಾಪಕವಾಗುತ್ತಿರುವ ಲವ್‌ ಜಿಹಾದ್‌ ತಡೆಗಟ್ಟಲು ಹಿಂದೂಗಳೆಲ್ಲ ಒಂದಾಗಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಶ್ರೀರಾಮಸೇನೆ ಆಯೋಜಿಸಿದ್ದ ಲವ್‌ ಜಿಹಾದ್‌ ಸಹಾಯವಾಣಿಯ ಮೊದಲ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳು ಲವ್‌ ಜಿಹಾದ್‌ಗೆ ಒಳಗಾದಾಗ ಆ ಜಾತಿ, ಈ ಜಾತಿ ಎನ್ನದೇ ಹಿಂದೂಗಳೆಲ್ಲ ಒಂದಾಗಿ ರಕ್ಷಣೆ ಮಾಡಬೇಕು. ಪಹಲ್ಗಾಂನಲ್ಲಿ ಭಯೋತ್ಪಾದಕರು ಜಾತಿ ಕೇಳಿ ಪ್ರವಾಸಿಗರ ಕೊಲ್ಲಲಿಲ್ಲ, ಬದಲಾಗಿ ಹಿಂದೂ ಎಂದು ಕೇಳಿ ಗುಂಡು ಹೊಡೆದರು. ಇದರಿಂದ ಹಿಂದೂಗಳಾದ ನಾವು ಪಾಠ ಕಲಿತು ಎಲ್ಲರೂ ಒಂದಾಗಿ ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚಾರ- ವಿಚಾರ ಉಳಿಸಬೇಕಿದೆ ಎಂದರು.

ಮುಸ್ಲಿಮರು ತರಬೇತಿ ಪಡೆದು ನಮ್ಮ ಹೆಣ್ಣು ಮಕ್ಕಳ ಅಪಹರಣ, ಅತ್ಯಾಚಾರದಂತಹ ಕೃತ್ಯ ಎಸಗುತ್ತಿದ್ದಾರೆ. ಈ ಮೂಲಕ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರ ನಡೆದಿದೆ. ಇಂತಹದೇ ಕೃತ್ಯದಲ್ಲಿ ತೊಡಗಿರುವ ಎಸ್‌ಡಿಪಿಐ ಸಂಘಟನೆಯನ್ನು ಸರ್ಕಾರ ಬ್ಯಾನ್‌ ಮಾಡಲಿ ಎಂದು ಆಗ್ರಹಿಸಿದರು.

ಮಹನೀಯರಿಗೆ ಚೌಕಟ್ಟು ಬೇಡ:

ಕನಕದಾಸರು, ಶಂಕರಾಚಾರ್ಯರು, ಮಧ್ವಾಚಾರ್ಯರು, ಡಾ. ಬಿ.ಆರ್‌. ಅಂಬೇಡ್ಕರ್‌ ಅವರಂತಹ ಮಹಾನ್‌ ನಾಯಕರನ್ನು ಜಾತಿಯ ಚೌಕಟ್ಟಿನಿಂದ ಹೊರ ತನ್ನಿ. ಎಲ್ಲರೂ ಎಲ್ಲ ಮಹನೀಯರ ಜಯಂತಿ ಆಚರಿಸಿ. ಇದರಿಂದಾಗಿ ಹಿಂದೂ ಸಮಾಜ ಒಗ್ಗಟ್ಟಾಗಿ ಬೇರೆ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ. ಲವ್‌ ಜಿಹಾದ್‌ನಂತಹ ಕೃತ್ಯ ಶೀಘ್ರದಲ್ಲೇ ಬೇರು ಸಮೇತ ಕಿತ್ತುಹಾಕೋಣ ಎಂದು ತಿಳಿಸಿದರು.

ಮಠ-ಮಂದಿರಗ‍ಳಿಗೆ ದಾನ ಬೇಡ: ಒಂದು ವರ್ಷದ ಹಿಂದೆಯೇ ಶ್ರೀರಾಮಸೇನೆಯಿಂದ ತ್ರಿಶೂಲ ದೀಕ್ಷೆ ನೀಡಿದ್ದರೆ ನೇಹಾ ಹಿರೇಮಠ ಸಾಯುತ್ತಿರಲಿಲ್ಲ. ತ್ರಿಶೂಲ ದೀಕ್ಷೆಯಿಂದಾಗಿ ನಮ್ಮ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿದೆ. ಹಿಂದೂ ಯುವತಿಯರ ರಕ್ಷಣೆಗೆ ನಿಂತಿರುವ ಸಂಘಟನೆಗೆ ಜನಬೆಂಬಲ ಸಿಗುತ್ತಿಲ್ಲ. ಇನ್ಮುಂದೆ ಮಠ- ಮಂದಿರಗಳಿಗೆ ದಾನ ಮಾಡಬೇಡಿ. ಈಗಾಗಲೇ ಎಲ್ಲ ದೇವಾಲಯಗಳಲ್ಲಿ ಕೋಟ್ಯಂತರ ಆಸ್ತಿ ಇದೆ. ಹಗಲು-ರಾತ್ರಿ ಧರ್ಮರಕ್ಷಣೆಗೆ ನಿಂತಿರುವ ಸಂಘಟನೆಗೆ ಕೈಲಾದ ಧನಸಹಾಯ, ಸಹಕಾರ ನೀಡುವಂತೆ ಕೋರಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀನಿವಾಸ ಗುರೂಜಿ ಮಾತನಾಡಿ, ರಾಜ್ಯದಲ್ಲಿ ಲವ್‌ ಜಿಹಾದ್‌ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಶ್ರೀರಾಮಸೇನೆ ಸಂಘಟನೆ ಯಶಸ್ವಿಯಾಗಿದೆ. ಹೆಣ್ಣುಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದು ಉತ್ತಮ. ಅಲ್ಲಿ ಮಕ್ಕಳಿಗೆ ಜೀವನಪಾಠ ಸಿಗುತ್ತದೆ. ಕಷ್ಟದಲ್ಲಿ ಬೆಳೆದ ಹೆಣ್ಣುಮಕ್ಕಳು ಎಂದೂ ಮನೆತನದ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ ಎಂದರು.

ಸಂಘಟನೆ ಜಿಲ್ಲಾಧ್ಯಕ್ಷ ಬಸವರಾಜ ಗೌಡರ ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ಲವ್‌ ಜಿಹಾದ್‌ ಸಹಾಯವಾಣಿಗೆ 5118 ಕರೆಗಳು ಬಂದಿದ್ದು, ಅದರಲ್ಲಿ ಶೇ. 93ರಷ್ಟು ಪ್ರಕರಣಗಳಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ವಾಪಸ್‌ ತರುವಲ್ಲಿ ಯಶಸ್ವಿಯಾಗಿದ್ದೇವೆ. ಇದರಲ್ಲಿ ಶೇ. 30ರಷ್ಟು ಪ್ರಕರಣಗ‍ಳಲ್ಲಿ ಮರುಮದುವೆ ಮಾಡಿಸಲಾಗಿದೆ ಎಂದು ತಿಳಿಸಿದರು.

ಲವ್‌ ಜಿಹಾದ್‌ ದಕ್ಷಿಣ ಪ್ರಾಂತ ಸಂಚಾಲಕ ಸುರೇಂದ್ರ ಮಾತನಾಡಿ, ವೇದಿಕೆ ಸಿಕ್ಕಲ್ಲಿ ಭಾಷಣ ಮಾಡುವ ರಾಜಕಾರಣಿಗಳು ನಮ್ಮ ಹಿಂದೂಗಳ ರಕ್ಷಣೆಗೆ ನಿಂತಿರುವ ಸಂಘಟನೆಗಳ ಸಹಾಯಕ್ಕೆ ನಿಲ್ಲುತ್ತಿಲ್ಲ. ಅನೇಕ ಸವಾಲುಗಳ ಮಧ್ಯೆಯೂ ಹಿಂದೂ ಯುವತಿಯರ ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದು, ಎಂದಿಗೂ ಈ ಕಾರ್ಯ ನಿಲ್ಲುವುದಿಲ್ಲ ಎಂದು ತಿಳಿಸಿದರು.

ರಾಜೇಶ್ವರಿ ಜಡಿ ಮಾತನಾಡಿ, ಹುಬ್ಬಳ್ಳಿಯಲ್ಲಿ ಲವ್‌ ಜಿಹಾದ್‌ ಕಾಟವೇನಿಲ್ಲ. ಆದರೆ, ಮಾರ್ಕೆಟ್ ಜಿಹಾದ್ ಮತ್ತು ಲ್ಯಾಂಡ್‌ ಜಿಹಾದ್‌ ಹೆಚ್ಚಿನಮಟ್ಟದಲ್ಲಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಯಶೋದಾ ತಾಂಬೆ, ಸ್ಫೂರ್ತಿ ನಡೂರಮಠ ಮಾತನಾಡಿದರು. ಲವ್ ಜಿಹಾದ್‌ ಕುರಿತು ಪೋಸ್ಟರ್ ಬಿಡುಗಡೆ ಮಾಡಲಾಯಿತು. ಅಲ್ಲದೇ ದುರ್ಗಾಸೇನೆ ಪದಾಧಿಕಾರಿಗಳಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ಹಲವರನ್ನು ಶ್ರೀರಾಮ ಸೇನೆಯಿಂದ ವತಿಯಿಂದ ಸನ್ಮಾನಿಸಲಾಯಿತು.

ಮೋಹನ್ ಗುರುಸ್ವಾಮಿ, ಪರಶುರಾಮ ದೊಡ್ಡಮನಿ, ರವಿ ಕೋಕಾಟ್ಕರ್, ಮಂಜುನಾಥ, ಚೆನ್ನು ಹೊಸಮನಿ, ವೀರಯ್ಯ ಸಾಲಿಮಠ ಮತ್ತಿತರರಿದ್ದರು. ಬಸು ದುರ್ಗದ ಸ್ವಾಗತಿಸಿದರು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.