ಉತ್ತರ ಕರ್ನಾಟಕದಲ್ಲಿ ಆರ್‌ಸಿಬಿ ಜೆರ್ಸಿ ಹವಾ!

KannadaprabhaNewsNetwork |  
Published : Jun 02, 2025, 12:34 AM IST
ಹುಬ್ಬಳ್ಳಿಯಲ್ಲಿ ಶುಕ್ರವಾರ ಅಂಗಡಿಯೊಂದರಲ್ಲಿ ಆರ್‌ಸಿಬಿ ಅಭಿಮಾನಿಗಳು ಜೆರ್ಸಿ ಖರೀದಿಸಿದರು. | Kannada Prabha

ಸಾರಾಂಶ

ಫೈನಲ್‌ ತಲುಪಿದ ಆರ್‌ಸಿಬಿ ತಂಡದ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಇಮ್ಮಡಿಗೊಳಿಸಿದೆ. ಜೂ. 3ರಂದು ನಡೆಯುವ ಫೈನಲ್‌ ಪಂದ್ಯದ ದಿನದಂದು ಆರ್‌ಸಿಬಿ ಜೆರ್ಸಿ ತೊಟ್ಟು ಕ್ರಿಕೆಟ್‌ ಪಂದ್ಯ ವೀಕ್ಷಿಸುವ ತವಕದಲ್ಲಿರುವ ಅಭಿಮಾನಿಗಳು ಜೆರ್ಸಿ ಖರೀದಿಗೆ ಮುಂದಾಗುತ್ತಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಈ ಬಾರಿ ಕಪ್‌ ನಮ್ದೆ ಎಂದು ಆರ್‌ಸಿಬಿ ಅಭಿಮಾನಿಗಳ ಕೂಗು ಜೋರಾಗಿದೆ. ಇನ್ನೊಂದೆಡೆ ಆರ್‌ಸಿಬಿ ಜೆರ್ಸಿ ಧರಿಸಿ ಕ್ರಿಕೆಟ್‌ ಅಭಿಮಾನ ತೋರ್ಪಡಿಸಲು ಅಭಿಮಾನಿಗಳು ಕಾತರರಾಗಿದ್ದು, ಇದಕ್ಕಾಗಿ ಹುಬ್ಬಳ್ಳಿಯಲ್ಲಿ ಒಂದೇ ದಿನ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಂದ 10 ಲಕ್ಷಕ್ಕೂ ಅಧಿಕ ಆರ್‌ಸಿಬಿ ಜೆರ್ಸಿಗಳಿಗೆ ಆರ್ಡರ್‌ ಬಂದಿದೆ!.

ಫೈನಲ್‌ ತಲುಪಿದ ಆರ್‌ಸಿಬಿ ತಂಡದ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಇಮ್ಮಡಿಗೊಳಿಸಿದೆ. ಜೂ. 3ರಂದು ನಡೆಯುವ ಫೈನಲ್‌ ಪಂದ್ಯದ ದಿನದಂದು ಆರ್‌ಸಿಬಿ ಜೆರ್ಸಿ ತೊಟ್ಟು ಕ್ರಿಕೆಟ್‌ ಪಂದ್ಯ ವೀಕ್ಷಿಸುವ ತವಕದಲ್ಲಿರುವ ಅಭಿಮಾನಿಗಳು ಜೆರ್ಸಿ ಖರೀದಿಗೆ ಮುಂದಾಗುತ್ತಿದ್ದಾರೆ.

10 ಲಕ್ಷಕ್ಕೂ ಅಧಿಕ ಜೆರ್ಸಿ: ಗುರುವಾರ ನಡೆದ ಕ್ವಾಲಿಫೈಯರ್‌-1ರಲ್ಲಿ ಆರ್‌ಸಿಬಿ ಗೆದ್ದು ಫೈನಲ್‌ಗೆ ಪ್ರವೇಶಿಸುತ್ತಿದ್ದಂತೆ ಉತ್ತರ ಕರ್ನಾಟಕ ಭಾಗದಲ್ಲಿರುವ ಬಟ್ಟೆ ಸಗಟು ವ್ಯಾಪಾರಸ್ಥರಿಗೆ ಡೀಲರ್‌, ಸಣ್ಣಪುಟ್ಟ ವ್ಯಾಪಾರಸ್ಥರು ತಡರಾತ್ರಿಯಿಂದಲೇ ಕರೆ ಮಾಡಿ ಜೆರ್ಸಿಗಳ ಆರ್ಡರ್‌ ಕೊಡುತ್ತಿದ್ದಾರೆ. ಹುಬ್ಬಳ್ಳಿ ನಗರದಲ್ಲಿಯೇ 20ಕ್ಕೂ ಅಧಿಕ ಪ್ರಮುಖ ಬಟ್ಟೆ ಡೀಲರ್‌ಗಳಿದ್ದಾರೆ. ಇವರು ಆರ್‌ಸಿಬಿ ಸೇರಿದಂತೆ ಎಲ್ಲ ತಂಡಗಳ ಜೆರ್ಸಿಗಳು ಸೂರತ್‌, ಮುಂಬೈ, ಬೆಂಗಳೂರು ಸೇರಿ ಪ್ರಮುಖ ನಗರಗಳಿಂದ ಹುಬ್ಬಳ್ಳಿಗೆ ರೈಲು, ಬಸ್‌ ಮೂಲಕ ತರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಈಗಾಗಲೇ 10 ಲಕ್ಷಕ್ಕೂ ಅಧಿಕ ಆರ್‌ಸಿಬಿ ಜೆರ್ಸಿಗಳನ್ನು ಸಗಟು ವ್ಯಾಪಾರಸ್ಥರು ಬುಕ್‌ ಮಾಡಿದ್ದಾರೆ.

ಹುಬ್ಬಳ್ಳಿಯಿಂದಲೇ ಪೂರೈಕೆ: ಉತ್ತರ ಕರ್ನಾಟಕ ಭಾಗಕ್ಕೆ ವ್ಯಾಪಾರ- ವಹಿವಾಟಿನಲ್ಲಿ ಹುಬ್ಬಳ್ಳಿ ಮುಖ್ಯವಾಗಿರುವ ನಗರ, ಬಹುತೇಕ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿರುವ ಡೀಲರ್‌ಗಳಿಗೆ ಹೆಚ್ಚಾಗಿ ಇಲ್ಲಿಂದಲೇ ಮಾರಾಟ ಮಾಡಲಾಗುತ್ತದೆ. ಉತ್ತರ ಕರ್ನಾಟಕ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಬಳ್ಳಾರಿ, ವಿಜಯನಗರ, ಕಲಬುರಗಿ, ಯಾದಗಿರಿ, ರಾಯಚೂರು, ಗದಗ, ಧಾರವಾಡ, ಹಾವೇರಿ, ಕೊಪ್ಪಳ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಹುಬ್ಬಳ್ಳಿಯಿಂದಲೇ ಜೆರ್ಸಿಗಳನ್ನು ಪೂರೈಸಲಾಗುತ್ತಿದೆ.

₹130ರಿಂದ ₹3 ಸಾವಿರ: ಈ ಜೆರ್ಸಿಗಳನ್ನು ಚಿಕ್ಕಮಕ್ಕಳಿಂದ ಹಿಡಿದು ವೃದ್ಧರು, ಬಡವರಿಂದ ಹಿಡಿದು ಸ್ಥಿತಿವಂತರೂ ಖರೀದಿಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡೀಲರ್‌ಗಳು ಬಗೆಬಗೆಯ ಬೆಲೆಗಳಲ್ಲಿರುವ ಜೆರ್ಸಿಗಳನ್ನು ತರಿಸಿದ್ದಾರೆ. ₹130, 150, 200ರಿಂದ ಹಿಡಿದು ₹3 ಸಾವಿರದ ವರೆಗೂ ಜೆರ್ಸಿಗಳು ಮಾರಾಟಕ್ಕೆ ದೊರೆಯುತ್ತಿವೆ.

ಲಕ್ಷಕ್ಕೂ ಅಧಿಕ ಜೆರ್ಸಿ ಮಾರಾಟ: ಕಳೆದ ಗುರುವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಮೊದಲ ಕ್ವಾಲಿಫೈಯರ್‌ ಪಂದ್ಯದ ದಿನದಂದೇ ಉತ್ತರ ಕರ್ನಾಟಕ ಭಾಗದಲ್ಲಿ ಒಂದೇ ದಿನಕ್ಕೆ ಲಕ್ಷಕ್ಕೂ ಅಧಿಕ ಜೆರ್ಸಿಗಳು ಮಾರಾಟವಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಹೆಚ್ಚಿನ ರೀತಿಯಲ್ಲಿ ಬಗೆಬಗೆಯ ಗುಣಮಟ್ಟದ ಆರ್‌ಸಿಬಿ ಜೆರ್ಸಿಗಳನ್ನು ಆರ್ಡರ್‌ ನೀಡಿದ್ದು, ಶನಿವಾರವೇ ಹುಬ್ಬಳ್ಳಿಗೆ ಜೆರ್ಸಿ ಬಂದಿದ್ದು, ಬೇಡಿಕೆ ಬಂದಿರುವ ಡೀಲರ್‌ಗಳಿಗೆ ಈಗಾಗಲೇ ಕಳಿಸಲಾಗುತ್ತಿದೆ ಎಂದು ಸಗಟು ವ್ಯಾಪಾರಸ್ಥ ಮೈನುದ್ದೀನ್‌ ಕನ್ನಡಪ್ರಭಕ್ಕೆ ತಿಳಿಸಿದರು.

ರಾತ್ರಿ ಮಲಗಲೂ ಬಿಟ್ಟಿಲ್ಲ: ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಮಾರಾಟವಾಗುವ ಜೆರ್ಸಿ ಎಂದರೆ ಅದು ಆರ್‌ಸಿಬಿಯ ಜೆರ್ಸಿ. ಕಳೆದ ವರ್ಷ ಹೆಚ್ಚಾಗಿ ಆರ್‌ಸಿಬಿ- ಮುಂಬೈ ಇಂಡಿಯನ್ಸ್‌ ಜೆರ್ಸಿ ಕೇಳುತ್ತಿದ್ದರು. ಈ ವರ್ಷ ಆರ್‌ಸಿಬಿ- ಚೆನ್ನೈ ಸೂಪರ್‌ ಕಿಂಗ್ಸ್‌ನ ಜೆರ್ಸಿ ಕೇಳುತ್ತಿದ್ದಾರೆ. ಗುರುವಾರ ರಾತ್ರಿ ಆರ್‌ಸಿಬಿ ಫೈನಲ್‌ ತಲುಪಿದ್ದೇ ತಡ ಹಾವೇರಿ, ರಾಯಚೂರು, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿರುವ ಡೀಲರ್‌ಗಳು ಕರೆಮಾಡಿ ಆರ್‌ಸಿಬಿ ಜೆರ್ಸಿ ಬುಕ್‌ ಮಾಡಿದ್ದಾರೆ. ಗುರುವಾರ ರಾತ್ರಿಯಿಡೀ ಮಲಗಲು ಬಿಟ್ಟಿಲ್ಲ ಅಷ್ಟೊಂದು ಕರೆಗಳು ಬಂದಿವೆ. ಶುಕ್ರವಾರ-ಶನಿವಾರ ನೂರಾರು ಡೀಲರ್‌ಗಳು ಕರೆ ಮಾಡಿ ಜೆರ್ಸಿ ಆರ್ಡರ್‌ ಮಾಡಿದ್ದಾರೆ ಎಂದು ಮುನೀರ್‌ ಖಲಂದರ್ "ಕನ್ನಡಪ್ರಭ "ಕ್ಕೆ ತಿಳಿಸಿದರು.

ಈಗ ಎಲ್ಲೆಡೆಯೂ ಆರ್‌ಸಿಬಿದೇ ಕ್ರೇಜ್‌. ಐಪಿಎಲ್‌ ಆರಂಭವಾದಾಗಿನಿಂದ ನನ್ನ ಅಂಗಡಿಯೊಂದರಲ್ಲೇ 2 ಸಾವಿರಕ್ಕೂ ಅಧಿಕ ಆರ್‌ಸಿಬಿ ಜೆರ್ಸಿ ಮಾರಾಟ ಮಾಡಿದ್ದೇನೆ. ಫೈನಲ್‌ ತಲುಪುತ್ತಿದ್ದಂತೆ ಸಾವಿರಕ್ಕೂ ಅಧಿಕ ಜೆರ್ಸಿಗಳನ್ನು ಈಗಾಗಲೇ ಬುಕ್ ಮಾಡಿದ್ದಾರೆ ಎಂದು ಗುರುಮಾತಾ ಗಾರ್ಮೆಂಟ್ಸ್‌ ಮಾಲಿಕ ದತ್ತಾ ಹಬೀಬ್ ಹೇಳಿದರು.

ನಾನೊಬ್ಬನೇ ಅಲ್ಲ ನನ್ನೆಲ್ಲ ಸ್ನೇಹಿತರು ಜೂ. 3ರಂದು ನಡೆಯುವ ಐಪಿಎಲ್‌ ಫೈನಲ್‌ ಪಂದ್ಯವನ್ನು ಆರ್‌ಸಿಬಿ ಜೆರ್ಸಿ ಹಾಕಿಕೊಂಡು ವೀಕ್ಷಣೆ ಮಾಡುವೆವು. ಈ ಬಾರಿ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಜತೆಗೆ ನಮ್ಮ ಆರ್‌ಸಿಬಿ ಫೈನಲ್‌ ಪಂದ್ಯದಲ್ಲಿ ಗೆಲ್ಲಲಿ ಎಂದು ಪ್ರಾರ್ಥಿಸುವೆವು ಎಂದು ಆರ್‌ಸಿಬಿ ತಂಡದ ಅಭಿಮಾನಿಗಳಾದ ಶ್ರೀಕಾಂತ ಗದುಗಿನ, ಮನೋಹರ ಅಂಗಡಿ, ಅಶೋಕ ತಳವಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ