ಕನ್ನಡಪ್ರಭ ವಾರ್ತೆ ಹಾಸನ
ಎಲ್ಲಾ ಸಿರಿ ಸಂಪತ್ತಿಗಿಂತ ಪ್ರಮುಖವಾಗಿ ಮನುಷ್ಯನಿಗೆ ಬೇಕಾಗಿರುವುದು ಮಾನಸಿಕ ನೆಮ್ಮದಿ. ಆ ನೆಮ್ಮದಿಯು ಯೋಗದಿಂದ ನೂರಕ್ಕೆ ನೂರರಷ್ಟು ಸಿಗುತ್ತದೆ ಎಂದು ವೇದ ಭಾರತೀ ಸಂಯೋಜಕರು ಹಾಗೂ ಪತಂಜಲಿ ಮಾರ್ಗದರ್ಶಕರಾದ ಹರಿಹರಪುರ ಶ್ರೀಧರ್ ತಿಳಿಸಿದರು.ನಗರದ ರಿಂಗ್ ರಸ್ತೆ ಬಳಿ ಇರುವ ಸತ್ಯಮಂಗಲ ಕೆರೆ ಆವರಣದ ಶ್ರೀ ಉದ್ಭವ ಗಣಪತಿ ಯೋಗ ಕೇಂದ್ರದಲ್ಲಿ ಭಾನುವಾರದಂದು ಬೆಳಗ್ಗೆ ಪತಂಜಲಿ ಯೋಗ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸತ್ಸಂಗ, ಅಗ್ನಿಹೋತ್ರ, ವಿಶೇಷ ಭಜನೆ, ಧ್ಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಓಂಕಾರದಿಂದ ಶುರುವಾದ ನಮ್ಮ ಪತಂಜಲಿ ಯೋಗವು ಓಂಕಾರದಲ್ಲೇ ಕೊನೆಯಾಗುತ್ತದೆ. ಪತಂಜಲಿ ಯೋಗ ಸಮಿತಿಯಿಂದ ಯೋಗ ಶಿಕ್ಷಕರ ಶಿಬಿರ ಮಾಡಲಾಗುತ್ತಿದ್ದು, ಈ ಶಿಬಿರದಲ್ಲಿ ರಾಷ್ಟ್ರದ, ಸಮಾಜದ ಹಾಗೂ ನಮ್ಮ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಶಿಬಿರಕ್ಕೆ ರಾಜ್ಯಾದ್ಯಂತ ಸೀನಿಯರ್ ಯೋಗ ಶಿಕ್ಷಕರು ಬಂದು ತಮ್ಮ ವಿಚಾರ ಮಂಡಿಸಲಿದ್ದಾರೆ ಎಂದರು. ಮನುಷ್ಯ ವರ್ಚಸ್ಸು ಪಡೆಯಬೇಕಾದರೆ ಯೋಗ ಎಂಬುದು ಪ್ರತಿದಿನದ ಒಂದು ಭಾಗವಾಗಿ ಇರಬೇಕು. ಯೋಗಪಟುಗಳೆಂದರೆ ಈ ಉದ್ಭವ ಗಣಪತಿ ಭಾಗಕ್ಕೆ ಆಸ್ತಿಯಲ್ಲ. ಇಡೀ ನಗರಕ್ಕೆ ಆಸ್ತಿ. ಪತಂಜಲಿ ಮೂಲಕ ಸಾಮಾಜಿಕ ಅಭಿವೃದ್ಧಿ ಮಾಡುವುದಕ್ಕೆ ನೀವೆಲ್ಲರೂ ಕೂಡ ಇಲ್ಲಿ ಸಾಕ್ಷಿಯಾಗಿದ್ದೀರಿ, ಇಡೀ ಹಾಸನವನ್ನೇ ಯೋಗಮಯ ಮಾಡಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ ಹಾಡಿಗೆ ಎಲ್ಲಾ ಯೋಗ ಪಟುಗಳು ನೃತ್ಯ ಮಾಡುವುದರ ಮೂಲಕ ಅಂದಿನ ಸತ್ಸಂಗಕ್ಕೆ ವಿರಾಮ ಹೇಳಿದರು.
ಪತಂಜಲಿ ಜಿಲ್ಲಾ ಮಹಿಳಾ ಪ್ರಭಾರಿ ಶಾರದಾ, ಜಿಲ್ಲಾ ಪ್ರಭಾರಿ ಶೇಷಪ್ಪ, ಗಿರೀಶ್, ದೊರೆಸ್ವಾಮಿ, ನಾಗೇಶ್, ಪತಂಜಲಿಯ ಮಂಜುಳಾ, ಪವಿತ್ರ ಮತ್ತು ಸತ್ಯಮಂಗಲ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್, ಸಮಿತಿಯ ನಾರಾಯಣ್, ದೇವರಾಜ್, ರವಿ ಇತರರು ಭಾಗವಹಿಸಿದ್ದರು.