ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿರಾಳಕೊಪ್ಪ ಮತ್ತು ಶಿವಮೊಗ್ಗ ನಡುವಿನ ಹೆದ್ದಾರಿಗೆ ಎರಡು ಟೋಲ್ಗೇಟ್ ಅಳವಡಿಕೆ ಮಾಡಿ ಸರ್ಕಾರ ಜನರಿಂದ ಹಣ ಸುಲಿಗೆ ಮಾಡಲು ಹೊರಟಿದೆ. ಇದನ್ನು ಕೂಡಲೇ ತೆರವು ಮಾಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೆದ್ದಾರಿಯಲ್ಲಿ ಕನಿಷ್ಠ 60 ಕಿಲೋಮೀಟರ್ಗೆ ಒಂದು ಟೋಲ್ ಗೇಟ್ ಅಳವಡಿಸಬೇಕು. ಆದರೆ, ಶಿವಮೊಗ್ಗ- ಶಿರಾಳಕೊಪ್ಪ ರಸ್ತೆಯಲ್ಲಿ 35 ಕಿಲೋಮೀಟರ್ಗೆ ಟೋಲ್ ಗೇಟ್ ಅಳವಡಿಸಲಾಗಿದೆ. ಇದರಿಂದ ಹುಬ್ಬಳ್ಳಿಯಿಂದ ಶಿವಮೊಗ್ಗ ಬರುವವರಿಗೆ ಮಾತ್ರವಲ್ಲ, ಸ್ಥಳೀಯರಿಗೂ ಇದರಿಂದ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಪದತ್ಯಾಗ ಮಾಡಲಿ:ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಭ್ರಷ್ಟಾಚಾರದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು. ಅಹಿಂದ ಎಂದು ಭಾಷಣ ಮಾಡುವ ಅವರು, ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಬಯಲಿಗೆಳೆದು ಆತ್ಮಹತ್ಯೆ ಮಾಡಿ ಕೊಂಡಿರುವ ಚಂದ್ರಶೇಖರನ್ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ವಿರುದ್ಧ ಅಬ್ರಾಹಂ, ಸ್ನೇಹಮಯಿ ಕೃಷ್ಣ ಖಾಸಗಿ ದೂರು ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರು ಬೀದಿಯಲ್ಲಿ ಹೋಗುವವರು ದೂರು ಕೊಟ್ಟಿದ್ದಾರೆ ಅಂತಾರೆ. ಬೀದಿಯಲ್ಲಿ ಹೋಗುವವರೇ ಮತ ಹಾಕಿ ನಿಮಗೆ ಅಧಿಕಾರ ಬಂದಿರೋದು. ನಾಳೆ ಇನ್ನೊಬ್ಬರು ಮುಖ್ಯಮಂತ್ರಿ ಆಗಬಹುದು. ಸಿದ್ದರಾಮಯ್ಯ ಅವರು ನಮ್ಮ ಕಾರ್ಯಕರ್ತರನ್ನು ದೇಶದ್ರೋಹಿಗಳು ಅಂತಾರೆ. ದೇಶದ್ರೋಹಿಗಳು ಯಾರು ಅಂತಾ ದೇಶದ ಜನ ನಿರ್ಧರಿಸಿದ್ದಾರೆ. ನರೇಂದ್ರ ಮೋದಿ ಅವರನ್ನು 3ನೇ ಬಾರಿ ಪ್ರಧಾನಮಂತ್ರಿ ಆಗಿ ಮಾಡಿದ್ದಾರೆ ಎಂದು ಕುಟುಕಿದರು.ಆಪರೇಷನ್ ಕಮಲ ವಿಚಾರದಲ್ಲಿ ಶಾಸಕ ಗಣಿಗ ರವಿ ಅವರ ಆರೋಪದಲ್ಲಿ ಹುರುಳಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಡಿ. ಕೆ.ಶಿವಕುಮಾರ್ ಅವರನ್ನು ಮೆಚ್ಚಿಸಲು ಇಂತಹ ಹೇಳಿಕೆ ನೀಡಿದ್ದಾರೆ. ಯಾರು ಯಾರಿಗೆ ಎಲ್ಲಿ ಆಮಿಷ ಒಡ್ಡಿದ್ದಾರೆಂಬುದನ್ನು ರವಿ ಬಹಿರಂಗಪಡಿಸಬೇಕು. ಇಲ್ಲದಿದ್ದಲ್ಲಿ ಅವರು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನಮ್ಮ ನಾಯಕರು ಹೇಳಿದ್ದಾರೆ ಎಂದು ತಿಳಿಸಿದರು.
ಜೋಗದಲ್ಲಿ ಶುಲ್ಕ ಹೆಚ್ಚಳ ಡಿಸಿ ಜೊತೆ ಚರ್ಚೆ ಮಾಡುತ್ತೇನೆ:ಜೋಗ ಜಲಪಾತದಲ್ಲಿ ಪ್ರವಾಸಿಗರಿಗೆ ದರ ಹೆಚ್ಚಳ ಮಾಡೋದು ತಪ್ಪಲ್ಲ. ಅಭಿವೃದ್ಧಿ ದೃಷ್ಟಿಯಿಂದ ದರ ಹೆಚ್ಚು ಮಾಡಿದ್ದಾರೆ. ಜೋಗ ಜಲಪಾತದಲ್ಲಿ ಈಗ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಅಲ್ಲಿ ಬರುವ ಪ್ರವಾಸಿಗರಿಗೆ ಹೋಟೆಲ್, ಶೌಚಾಲಯ ವ್ಯವಸ್ಥೆ ಇಲ್ಲ. ಇನ್ನು 2-3 ತಿಂಗಳಲ್ಲಿ ಹೋಟೆಲ್, ಶೌಚಾಲಯ ನಿರ್ಮಾಣ ಆಗಲಿದೆ. ಆದರೆ, ಅಭಿವೃದ್ಧಿ ಕಾಮಗಾರಿ ಮುಗಿದ ನಂತರ ದರ ಹೆಚ್ಚಳ ಮಾಡಬಹುದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷರಾಮಿ ಸೌಲಭ್ಯಗಳನ್ನು ಕೈದಿಗಳಿಗೆ ನೀಡುತ್ತಿರುವುದು ರಾಜ್ಯ ಸರಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಗೃಹ ಸಚಿವರು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ದರ್ಶನ್ ಬೇರೆ ಜೈಲಿಗೆ ಶಿಫ್ಟ್ ಮಾಡ್ತೀವಿ ಅಂದಿದ್ದಾರೆ. ಆದರೆ, ದೇಶದ ಜನರಿಗೆ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗಿದೆ.ಬಿ.ವೈ. ರಾಘವೇಂದ್ರ, ಸಂಸದ.